ಹರಿದ್ವಾರದಲ್ಲಿ ಸುಧೀಂದ್ರ ಸ್ವಾಮೀಜಿ ಸನ್ಯಾಸ ದೀಕ್ಷಾ ಅಮೃತ ಮಹೋತ್ಸವ
ಹರಿದ್ವಾರದಲ್ಲಿ ಸುಧೀಂದ್ರ ಸ್ವಾಮೀಜಿ ಸನ್ಯಾಸ ದೀಕ್ಷಾ ಅಮೃತ ಮಹೋತ್ಸವ
ಮಂಗಳೂರು, ಜೂನ್ 5 : ಶ್ರೀ ಕಾಶೀಶಿಮಠ ಸಂಸ್ಥಾನದ ಪರಮಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸನ್ಯಾಸ ದೀಕ್ಷಾ ಅಮೃತ ಮಹೋತ್ಸವವು ಹರಿದ್ವಾರದ ಶ್ರೀ ವ್ಯಾಸ ಮಂದಿರದಲ್ಲಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.
ಈ ಪ್ರಯುಕ್ತ ದೇಶಾದ್ಯಂತ ಸುಮಾರು 5000ಕ್ಕೂ ಅಧಿಕ ಶ್ರೀ ಕಾಶೀಮಠದ ಅನುಯಾಯಿಗಳು ಪಾಲ್ಗೊಂಡರು, ಮಂಗಳೂರು ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 1200, ಮುಂಬೈಯಿಂದ 1, 000 ಭಜಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಹರಿದ್ವಾರದ ಶ್ರೀ ವ್ಯಾಸ ಮಂದಿರದ ಆವರಣದಲ್ಲಿ ದಿನಾಂಕ 5ರಂದು ವಿಶೇಷ ಹೋಮ- ಹವನಗಳು, ಶ್ರೀ ವ್ಯಾಸ ಮಂದಿರದಲ್ಲಿ ವೇದವ್ಯಾಸ ದೇವರಿಗೆ ಹಾಗೂ ವೃಂದಾವನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಮುಖ್ಯಪ್ರಾಣ ದೇವರಿಗೆ ವಿಶೇಷ ಒಂದು ಸಹಸ್ರ ಪವಮಾನ ಅಭಿಷೇಕ ಶ್ರೀಗಳವರ ದಿವ್ಯ ಹಸ್ತಗಳಿಂದ ನಡೆದವು.
ಬಳಿಕ ಸಾಯಂಕಾಲ ಸಭಾ ಕಾರ್ಯಕ್ರಮ ಶ್ರೀಗಳವರಿಂದ ಆಶೀರ್ವಚನ ನಡೆಯಿತು ಖ್ಯಾತ ಅಂತಾರಾಷ್ಟ್ರೀಯ ಸ್ಯಾಕ್ಸಾಫೋನ್ ವಾದಕ ಕದ್ರಿ ಗೋಪಾಲನಾಥ್ ರವರಿಂದ ಸಂಗೀತ ಕಚೇರಿ ನಡೆಯಿತು.
ಸನ್ಯಾಸ ದೀಕ್ಷಾ ಅಮೃತ ಮಹೋತ್ಸವದ ಸವಿನೆನಪಿಗಾಗಿ ರಾಜಸ್ಥಾನದಲ್ಲಿ ಅಮೃತ ಶಿಲೆಯಲ್ಲಿ ನಿರ್ಮಿಸಲಾದ ಶ್ರೀ ಸುಧೀಂದ್ರ ಶ್ರೀ ಗುರು ದರ್ಶನಂ - 3( ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಭಾವ ಚಿತ್ರಗಳ ಪುಸ್ತಕ ) ಕಾಶೀಮಠಾಧೀಶರ ದಿವ್ಯ ಹಸ್ತಗಳಿಂದ ಬಿಡುಗಡೆಯಾಯಿತು.
ಈ ಪುಸ್ತಕವನ್ನು ಶ್ರೀಗಳವರಿಂದ ಪ್ರಾರಂಭಿಸಲ್ಪಟ್ಟ, ಬಸ್ರೂರು ಶ್ರೀ ಭುವನೇಂದ್ರ ಬಾಲಕಾಶ್ರಮದ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಮುದ್ರಿಸಲಾಗಿದೆ. ರಾಜಸ್ಥಾನದ ಜೈಪುರದಲ್ಲಿ ಅಮೃತ ಶಿಲೆಯಲ್ಲಿ ಬೃಹತ್ ಗಾತ್ರದಿಂದ ನಿರ್ಮಿಸಿಲಾದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ವಿಗ್ರಹ ಪ್ರತಿಷ್ಠಾಪನೆ ಗಂಗಾ ತಟದಲ್ಲಿ ಬುಧವಾರ ನೆರವೇರಲಿರಲಿದೆ.