ತೊಕ್ಕೊಟ್ಟು ಕರ್ಣಾಟಕ ಬ್ಯಾಂಕ್ ಗೆ ಬೆಂಕಿ, ದಾಖಲೆ ಸುಡುವುದೇ ಉದ್ದೇಶವಾ?
ತೊಕ್ಕೊಟ್ಟು ಒಳಪೇಟೆಯಲ್ಲಿರುವ ಕರ್ಣಾಟಕ ಬ್ಯಾಂಕ್ ಗೆ ಬೆಂಕಿ ಹಾಕಿದವರ ಉದ್ದೇಶ ಏನಿತ್ತು ಎಂಬ ಬಗ್ಗೆ ಪೊಲೀಸರು ಸಮಗ್ರವಾದ ತನಿಖೆ ಮಾಡಬೇಕಿದೆ. ಮಂಗಳವಾರ ರಾತ್ರಿ ಈ ಕೃತ್ಯದಲ್ಲಿ ಭಾಗಿಯಾದವರನ್ನು ಕಾನೂನು ವ್ಯಾಪ್ತಿಯೊಳಗೆ ತರಬೇಕು.
ಮಂಗಳೂರು, ಮಾರ್ಚ್ 1: ತೊಕ್ಕೊಟ್ಟು ಒಳಪೇಟೆಯಲ್ಲಿರುವ ಕರ್ಣಾಟಕ ಬ್ಯಾಂಕ್ ಕಚೇರಿಗೆ ಕಿಡಿಗೇಡಿಗಳು ಕಿಟಕಿ ಮೂಲಕ ಬೆಂಕಿ ಹಾಕಿದ್ದು, ಸ್ಥಳೀಯರು ಸಮಯಪ್ರಜ್ಞೆಯಿಂದ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಕಳೆದ ವಾರವಷ್ಟೇ ಕರ್ಣಾಟಕ ಬ್ಯಾಂಕ್ ಹತ್ತಿರದಲ್ಲೇ ಇರುವ ಸಿಪಿಎಂ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದು, ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಕರ್ಣಾಟಕ ಬ್ಯಾಂಕ್ ನ ಒಳಗೆ ಬೆಂಕಿ ಹಾಕಿದ್ದು, ವಿಧ್ವಂಸಕ ಕೃತ್ಯ ನಡೆಸಲು ಸಂಚು ನಡೆಸಿದ್ದಾರೆ.
ಮಂಗಳವಾರ ರಾತ್ರಿ ಸುಮಾರು 10.30ರ ವೇಳೆಗೆ ಬ್ಯಾಂಕ್ ಒಳಗೆ ಬೆಂಕಿ ಹೊತ್ತಿಕೊಂಡಿದ್ದನ್ನು ಕಂಡ ಸ್ಥಳೀಯರು ಬ್ಯಾಂಕ್ ಅಧಿಕಾರಿಗಳಿಗೆ ಫೋನ್ ಮೂಲಕ ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳು ಅಗ್ನಿಶಾಮಕದಳದವರಿಗೆ ವಿಷಯ ಮುಟ್ಟಿಸಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.[ಬದುಕು ಬೆಂದು ಹೋಗುವಂತೆ ಮಾಡಿದ ಬಂಡೀಪುರದ ಬೆಂಕಿ ಅನಾಹುತ]
ಕಿಡಿಗೇಡಿಗಳು ಬ್ಯಾಂಕ್ ನ ಕಿಟಕಿ ಬಾಗಿಲು ತೆರೆದು ಒಳಗೆ ಬೆಂಕಿ ಹಾಕಿದ್ದು, ಮಹತ್ವದ ಅನೇಕ ಕಡತಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ. ಬ್ಯಾಂಕ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಉಳ್ಳಾಲ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಒಂದೇ ವಾರದೊಳಗೆ ತೊಕ್ಕೊಟ್ಟು ಪರಿಸರದಲ್ಲಿ ಮೂರು ಕಡೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು, ಮೊದಲಿಗೆ ಸಿಪಿಎಂ ಕಚೇರಿ, ತೊಕ್ಕೊಟ್ಟಿನ ಗೂಡಂಗಡಿಗಳಿಗೆ, ಇದೀಗ ಬ್ಯಾಂಕಿಗೂ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ.