ರಾಜಕೀಯ ಮೇಲಾಟಕ್ಕೆ ಬಲಿಯಾದರೆ ಸಬ್ ಇನ್ಸ್ ಪೆಕ್ಟರ್ ರವಿ ಪವಾರ್ ?
ಮಂಗಳೂರು, ಡಿಸೆಂಬರ್ 07: ರಾಜ್ಯದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಲ್ಲಿ ದೀರ್ಘಾವಧಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.
ಆದರೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾತ್ರ ದೀರ್ಘಾವಧಿಯಿಂದ ಜಾಂಡಾ ಊರಿದವರನ್ನು ಬಿಟ್ಟು ವರ್ಷದ ಹಿಂದೆ ಸೇವೆಗೆ ನಿಯುಕ್ತಿಗೊಂಡ ಅಧಿಕಾರಿಯನ್ನು ಬೆಳಗಾವಿಗೆ ಎತ್ತಂಗಡಿ ಮಾಡಲಾಗಿದೆ.
11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ
ಒಂದು ವರ್ಷದ ಹಿಂದಷ್ಟೆ ಪ್ರೊಬೇಷನರಿ ಸಬ್ ಇನ್ಸ್ ಪೆಕ್ಟರ್ ಆಗಿ ನಿಯುಕ್ತಿಗೊಂಡಿದ್ದ ರವಿ ಪವಾರ್ ಅವರನ್ನು ಬಳಿಕ ಕೋಣಾಜೆ ಠಾಣೆ ಎಸ್ಐ ಆಗಿ ನಿಯೋಜನೆ ಮಾಡಲಾಗಿತ್ತು. ಆದರೆ, ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದೇ ಪ್ರಾಮಾಣಿಕ ಅಧಿಕಾರಿಗೆ ಮುಳುವಾಗಿದೆ ಎಂದು ಹೇಳಲಾಗಿದೆ.
ಕೊಣಾಜೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮಟ್ಕಾ ದಂಧೆ ಮತ್ತು ದನ ಕಳ್ಳರನ್ನು ರೆಡ್ ಹ್ಯಾಂಡಾಗಿ ಹಿಡಿದು ಕೇಸ್ ದಾಖಲಿಸಿದ್ದು ಮೂರು ತಿಂಗಳ ಹಿಂದೆ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕೆಂಗಣ್ಣಿಗೆ ಗುರಿಯಾಗಿತ್ತು ಎಂದು ಆರೋಪಿಸಲಾಗಿದೆ .
ಉಸ್ತುವಾರಿ ಸಚಿವರ ಸೂಚನೆಯಂತೆ ರವಿ ಪವಾರ್ ಅನ್ನು ಬಳಿಕ ಕೊಣಾಜೆ ಠಾಣೆಯಿಂದ ಕಮಿಷನರ್ ಕಚೇರಿಗೆ ನಾನ್ ಎಕ್ಸಿಕ್ಯುಟಿವ್ ಆಗಿ ತಂದು ಕೂರಿಸಲಾಗಿತ್ತು. ಇದೀಗ, ಸೇವೆಗೆ ಸೇರಿದ ಒಂದೇ ವರ್ಷದಲ್ಲಿ ರವಿ ಪವಾರನ್ನು ಬೆಳಗಾವಿ ಉತ್ತರ ವಲಯಕ್ಕೆ ವರ್ಗ ಮಾಡಲಾಗಿದೆ.
ಬಿಬಿಎಂಪಿಯಿಂದ ರಂದೀಪ್ ಎತ್ತಂಗಡಿ ಆದೇಶಕ್ಕೆ ತಡೆ: ಕಸದ ಮಾಫಿಯಾಗೆ ನಿರಾಸೆ
ಮಂಗಳೂರಿನ ಪೊಲೀಸ್ ಠಾಣೆಗಳಲ್ಲಿ ಏಳೆಂಟು ವರ್ಷಗಳಿಂದ ಕರ್ತವ್ಯದಲ್ಲಿರುವ ಅಧಿಕಾರಿಗಳನ್ನು ಉಳಿಸಿಕೊಂಡಿರುವ ಮಧ್ಯೆ ರವಿ ಪವಾರ ಅವರನ್ನು ಎತ್ತಂಗಡಿ ಮಾಡಿದ್ದು ಸಚಿವ ಖಾದರ್ ಕೈಯಾಡಿಸಿರುವ ಸಾಧ್ಯತೆಯ ಆರೋಪ ಕೇಳಿಬಂದಿದೆ.
ಆಂಬಿಡೆಂಟ್ ಪ್ರಕರಣದ ತನಿಖಾಧಿಕಾರಿ ವೆಂಕಟೇಶ್ ಪ್ರಸನ್ನ ವರ್ಗಾವಣೆ
ಬಾಗಲಕೋಟೆ ಮೂಲದ ರವಿ ಪವಾರ್ ತಾಯಿ ಮಂಗಳೂರಿನಲ್ಲಿಯೇ ಕೂಲಿ ಕೆಲಸ ಮಾಡಿ, ಮಗನನ್ನು ಓದಿಸಿ ಪೊಲೀಸ್ ಅಧಿಕಾರಿಯನ್ನಾಗಿಸಿದ್ದು ಎರಡು ವರ್ಷಗಳ ಹಿಂದೆ ಸುದ್ದಿಯಾಗಿತ್ತು. ಇದೀಗ ರಾಜಕೀಯದಾಟಕ್ಕೆ ಸಿಕ್ಕಿದ ಅಧಿಕಾರಿ ದಿಢೀರ್ ಆಗಿ ವರ್ಗಾವಣೆ ಶಿಕ್ಷೆಗೆ ಒಳಗಾಗಿದ್ದಾರೆ.