'ಗೋ ಕಳ್ಳರ ವಿರುದ್ಧ ರೌಡಿ ಶೀಟರ್ ಕೇಸು ದಾಖಲಿಸಿ ಗಡಿಪಾರು ಮಾಡಿ'
ಮಂಗಳೂರು ಜೂನ್ 24: ಗೋ ಕಳ್ಳರ ವಿರುದ್ಧ ರೌಡಿ ಶೀಟರ್ ಕೇಸು ದಾಖಲಿಸಿ ಗಡಿಪಾರು ಮಾಡಿ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರನ್ನು ಒತ್ತಾಯಿಸಿದ್ದಾರೆ.
ಸೋಮವಾರ ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿದ ಡಾ ಭರತ್ ಶೆಟ್ಟಿ ಗೋಗಳ್ಳರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ನಂತರ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಗೋಕಳ್ಳತನ ಇಂದು ಬಂಡವಾಳ ಇಲ್ಲದೆ ಹಣಗಳಿಸಲು ಸುಲಭ ದಾರಿಯಂತೆ ಆಗಿದ್ದು ಕಳ್ಳರು ಯಾವುದೇ ಭಯವಿಲ್ಲದೆ ಮಾರಕಾಯುಧಗಳನ್ನು ತೋರಿಸಿ ಹಟ್ಟಿಯಿಂದ ಗೋವನ್ನು ಕದಿಯುತ್ತಿರುವುದು ಕಳವಳಕಾರಿ ವಿಚಾರ ಎಂದು ಹೇಳಿದರು .
ಗೋವುಗಳ ಅಕ್ರಮ ಸಾಗಾಟ ತಡೆಯಲು ಮುಸ್ಲಿಮರಿಂದ ಹೊಸ ಸಂಘಟನೆ
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಮನೆಯೊಂದರಿಂದ ದನ ಕಳ್ಳತನ ಘಟನೆ ನಡೆದಿರುವುದು ನೋವನ್ನುಂಟು ಮಾಡಿದೆ. ಹೈನುಗಾರಿಕೆ ನಂಬಿ ಜೀವನ ನಡೆಸುವವರು ಇದರಿಂದ ನಷ್ಟಕ್ಕೊಳಗಾಗುತ್ತಿದ್ದಾರೆ.
ಸಾಲ ಮಾಡಿ ಉತ್ತಮ ತಳಿಯ ದನ ಖರೀದಿಸಿ ಸ್ವಾವಲಂಬಿ ಜೀವನ ನಡೆಸಲು ಗೋಕಳ್ಳರಿಂದ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗದಂತೆ ಪೊಲೀಸ್ ಇಲಾಖೆ ತಡೆದು ರೈತರಿಗೆ ,ಹೈನುಗಾರರಿಗೆ ಭದ್ರತೆಯ ಭರವಸೆ ನೀಡಬೇಕಿದೆ ಎಂದು ಹೇಳಿದರು.
ಗೋ ಕಳ್ಳತನದಿಂದ ಒಂದಡೆ ಇದನ್ನೇ ನಂಬಿದವರಿಗೆ ನಷ್ಟವಾಗುತ್ತಿದ್ದರೆ,ಇನ್ನೊಂದೆಡೆ ಧಾರ್ಮಿಕವಾಗಿ ಆರಾಧಿಸುತ್ತಾ ಬರುತ್ತಿರುವ ಹಿಂದೂ ಸಮುದಾಯದ ಭಾವನೆಗೂ ಘಾಸಿಯಾಗುತ್ತಿದೆ.
ಕಾರಿನಲ್ಲಿ ದನಗಳ ಅಕ್ರಮ ಸಾಗಾಟ ಪ್ರಕರಣ; ಇಬ್ಬರ ಬಂಧನ
ಮಂಗಳೂರು ಸಹಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಶಾಂತಿ,ಸೌಹಾರ್ಧತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಠಿಣ ಕಾರ್ಯಾಚರಣೆ ನಡೆಸುವ ಮೂಲಕ ದನಕಳ್ಳರನ್ನು ಮಟ್ಟ ಹಾಕಬೇಕು ಎಂದು ಅವರು ಒತ್ತಾಯಿಸಿದರು.
ಗೋ ಕಳ್ಳತನಕ್ಕೆ ಬೆಂಬಲ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ ಗೋ ಕಳ್ಳರು ಹಾಗೂ ಅವರಿಗೆ ಬೆಂಬಲ ನೀಡುವವರ ವಿರುದ್ಧ ರೌಡಿ ಶೀಟರ್ ಕೇಸ್ ದಾಖಲಿಸಿ ಗಡಿಪಾರು ಮಾಡಬೇಕು. ಪ್ರಮುಖ ಸಂಚಾರ ಕೇಂದ್ರಗಳಲ್ಲಿ ಗುಣಮಟ್ಟದ ಸಿ ಸಿ ಕ್ಯಾಮರಾ ಅಳವಡಿಸಿ ಗೋ ಕಳ್ಳರ ಚಲನವಲನಗಳ ಮೇಲೆ ನಿಗಾ ಇಡಬೇಕು ಎಂದು ಅವರು ಆಗ್ರಹಿಸಿದರು.