ಗುಡ್ಡ ಹತ್ತಬೇಕು, ಕೆಸರು ರಸ್ತೆಯಲ್ಲೇ ಸಾಗಬೇಕು; ಓದಿಗೆ ಇವೆಲ್ಲ ಅಡ್ಡಿಯಾಗಲಿಲ್ಲ
ಮಂಗಳೂರು, ಆಗಸ್ಟ್ 13: ಸಾಧನೆ ಎನ್ನುವುದು ಸುಲಭಕ್ಕೆ ದಕ್ಕುವುದಲ್ಲ. ಪರಿಶ್ರಮ, ಆಸಕ್ತಿ, ಪ್ರಯತ್ನದ ಫಲವೇ ಯಶಸ್ಸು. ಇದಕ್ಕೆ ಉತ್ತಮ ಉದಾಹರಣೆ, ದಕ್ಷಿಣ ಕನ್ನಡ ಜಿಲ್ಲೆಯ ಈ ವಿದ್ಯಾರ್ಥಿ. ಗ್ರಾಮದಲ್ಲಿ ಓದಿಗೆ ಇರಬೇಕಾದ ಸೌಕರ್ಯಗಳ ಕೊರತೆ ನಡುವೆಯೂ ರಾಜ್ಯಕ್ಕೆ ಪ್ರಥಮ ಸ್ಥಾನ ಬರುವುದು ಸಾಮಾನ್ಯ ಸಂಗತಿಯಲ್ಲ.
ಈ ಬಾರಿಯ ರಾಜ್ಯದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದುಕೊಂಡಿರುವವರಲ್ಲಿ ಒಬ್ಬನಾದ ದಕ್ಷಿಣ ಕನ್ನಡ ಜಿಲ್ಲೆಯ ಅನುಷ್ ಎ.ಎಲ್ ಸಾಧನೆಗೂ ಆತ ಪಟ್ಟ ಪರಿಶ್ರಮವೇ ಕಾರಣ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಳ್ಪ ಗ್ರಾಮದ ಎಣ್ಣೆಮಜಲಿನ ಅನುಷ್ ತನ್ನ ಓದಿಗಿದ್ದ ತೊಡಕುಗಳನ್ನು ಮೀರಿ ಸಾಧನೆ ತೋರಿದ್ದ ಬಗ್ಗೆ ಮೆಚ್ಚುಗೆ ಪಡಲೇಬೇಕು.
ಜಿಲ್ಲೆಗೆ ಕೀರ್ತಿ ತಂದ ಅನುಷ್
ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿ ಅನುಷ್ ಎ.ಎಲ್ 625 ಅಂಕಗಳಲ್ಲಿ 625 ಅಂಕ ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಯ ಈ ಸಾಧನೆ ಮನೆಯವರಲ್ಲಿ, ಶಾಲೆಯಲ್ಲಿ ಹೆಮ್ಮೆ ತಂದಿದೆ. ಮೆಸ್ಕಾಂ ಸಿಬ್ಬಂದಿ ಲೋಕೇಶ್ ಹಾಗೂ ಉಷಾ ದಂಪತಿ ಮಗನಾಗಿರುವ ಅನುಷ್ ಬಾಲ್ಯದಿಂದಲೇ ಓದಿನಲ್ಲಿ ಮುಂದು. ತನ್ನ ಸಾಮರ್ಥ್ಯವನ್ನು ಈ ಬಾರಿ ಎಸ್ ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ತೋರಿದ್ದಾನೆ.
ನ್ಯೂನತೆ ಮೀರಿ ಸಾಧನೆ ತೋರಿದ ಮೈಸೂರಿನ ವಿಶೇಷ ಚೇತನ ವಿದ್ಯಾರ್ಥಿನಿಯರು
ಶಾಲೆಗೆ ಹೋಗುವ ದಾರಿಯಲ್ಲೇ ಸಮಸ್ಯೆ
ಶಾಲೆ ಮನೆಯಿಂದ 15 ಕಿ.ಮೀ ದೂರವಿದೆ. ಶಾಲೆಗೆ ಕರೆದೊಯ್ಯಲು ಬಸ್ ಬರುತ್ತಿದ್ದರೂ, ಕೆಸರು ರಸ್ತೆಯಲ್ಲೇ ಒಂದಷ್ಟು ದೂರ ನಡೆದುಕೊಂಡು ಹೋಗಬೇಕಾದ್ದು ಅನಿವಾರ್ಯ. ಮಳೆಗಾಲದಲ್ಲಂತೂ ಪರಿಸ್ಥಿತಿ ಕೇಳುವುದೇ ಬೇಡ. ಶಾಲೆಗೆ ಹೋಗುವಾಗ ಬಹುಪಾಲು ದಿನಗಳಲ್ಲಿ ವಾಹನಗಳ ಚಕ್ರ ಕೆಸರಿನಲ್ಲಿ ಹೂತು ಹೋಗುತ್ತಿದ್ದವು. ಅದನ್ನು ತಳ್ಳಿಯೇ ಇಲ್ಲಿನ ಮಕ್ಕಳು ಶಾಲೆ ತಲುಪುತ್ತಿದ್ದರು. ಇಂಥ ಕೊರತೆಗಳ ನಡುವೆಯೂ ಅನುಷ್ ಚೆನ್ನಾಗಿ ಓದಿ ಭೇಷ್ ಎನಿಸಿಕೊಂಡಿದ್ದಾನೆ.
ನೆಟ್ ವರ್ಕ್ ಗಾಗಿ ಬೆಟ್ಟ ಗುಡ್ಡ ಹತ್ತುವ ಮಕ್ಕಳು
ಗ್ರಾಮೀಣ ಪ್ರದೇಶಗಳಲ್ಲಿ ಮೊದಲೇ ನೆಟ್ ವರ್ಕ್ ಸಮಸ್ಯೆ. ಇದರಿಂದ ಅನುಷ್ ಹಾಗೂ ಸ್ನೇಹಿತರು ನೆಟ್ ವರ್ಕ್ ಹುಡುಕಿಕೊಂಡು ಗುಡ್ಡ ಹತ್ತಿ ಇಳಿದು ಓದಿಗೆ ಬೇಕಾದ ಮಾಹಿತಿಗಳನ್ನು ಪಡೆಯುತ್ತಿದ್ದರು. ಈ ಎಲ್ಲಾ ಸಮಸ್ಯೆಗಳ ನಡುವೆಯೂ ಅನುಷ್ ಪ್ರಥಮ ಸ್ಥಾನ ಪಡೆದಿರುವುದನ್ನು ಊರಿನವರೂ ಕೊಂಡಾಡಿದ್ದಾರೆ.
SSLC Result: ಆಟೋ ಚಾಲಕನ ಮಗ ದಾವಣಗೆರೆ ಜಿಲ್ಲೆಗೆ ಪ್ರಥಮ
ಅನುಷ್ ಗೆ ಅರಣ್ಯಾಧಿಕಾರಿಯಾಗುವಾಸೆ
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ 12 ಸ್ಥಾನಕ್ಕೆ ಕುಸಿದಿದ್ದರೂ, ಅನುಷ್ ಸಾಧನೆಯಿಂದ ಜಿಲ್ಲೆಯ ಕೀರ್ತಿ ಬೆಳಗಿದೆ. ಎಲ್ಲಾ ವಿಷಯಗಳಲ್ಲೂ ಪೂರ್ಣ ಅಂಕಗಳನ್ನು ಗಳಿಸುವ ಮೂಲಕ ಅನುಷ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಅರಣ್ಯಾಧಿಕಾರಿಯಾಗಿ, ಅರಣ್ಯ ಜೀವಿ, ಅರಣ್ಯವಾಸಿಗಳ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ತಮ್ಮ ಮುಂದಿನ ಕನಸುಗಳ ಬಗ್ಗೆ ಹೇಳುತ್ತಾರೆ ಅನುಷ್.