ಬರಿದಾದ ತುಂಬೆ ಡ್ಯಾಮ್ ಒಡಲು:ಕ್ರಮ ಕೈಗೊಳ್ಳಲು ಡಿಸಿಗೆ ಆಗ್ರಹ
ಮಂಗಳೂರು, ಏಪ್ರಿಲ್ 21: ಮಂಗಳೂರು ನಗರದಲ್ಲಿ ನೀರಿನ ರೇಷನ್ ಜನರಿಗೆ ಸಮಸ್ಯೆಯಾಗುತ್ತಿದ್ದು , ಈ ಬಗ್ಗೆ ಸಮರ್ಪಕ ಕ್ರಮಗಳನ್ನು ಜರಗಿಸುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತುಂಬೆ ಡ್ಯಾಮ್ ನಲ್ಲಿ ಮುಂದಿನ ದಿನಗಳಿಗೆ ಅಗತ್ಯವಿರುವಷ್ಟು ನೀರಿನ ಸಂಗ್ರಹವಿಲ್ಲ ಎನ್ನುವ ಕಾರಣಕ್ಕೆ ನಗರದಲ್ಲಿ ನೀರಿನ ರೇಷನ್ ಕ್ರಮ ಕೈಗೊಳ್ಳಲಾಗಿದೆ. ಜನರಿಗೆ ಸಮರ್ಪಕ ರೀತಿಯಲ್ಲಿ ನೀರನ್ನು ಒದಗಿಸುವುದು ಪಾಲಿಕೆಯ ಕರ್ತವ್ಯ . ಹಾಗಾಗಿ ತುಂಬೆಯಲ್ಲಿ ನೀರಿನ ಸಂಗ್ರಹವಿಲ್ಲ ಎನ್ನುವ ಏಕೈಕ ಕಾರಣವನ್ನು ಮುಂದಿಟ್ಟು ಜನರಿಗೆ ತೊಂದರೆಯನ್ನು ನೀಡುವುದು ಸರಿಯಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಇಂದು ಮಾತನಾಡಿದ್ದು , ಇಡೀ ಮಂಗಳೂರು ನಗರದಲ್ಲಿ ಎಲ್ಲಿಯೂ ನೀರಿನ ಸಮಸ್ಯೆಯಾಗದಂತೆ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವಂತೆ ಸೂಚಿಸಿರುವುದಾಗಿ ತಿಳಿಸಿದರು.
ನನಗೆ ಮತ ಹಾಕಿಲ್ಲ, ನಿಮಗೆ ನೀರು ಕೊಡಲ್ಲ: ಗುಜರಾತ್ ಬಿಜೆಪಿ ಮಂತ್ರಿ
ತುಂಬೆ ಡ್ಯಾಮ್ ನ ನೀರಿನ ಸಂಗ್ರಹದ ಗರಿಷ್ಠ ಮಟ್ಟ 6 ಮೀಟರ್ಗಳು. ಅಧಿಕಾರಿಗಳ ನೀಡಿರುವ ಮಾಹಿತಿ ಪ್ರಕಾರ ಸದ್ಯ 5.36 ಮೀಟರ್ ನೀರಿನ ಸಂಗ್ರಹವಿದೆ. ಅಂದರೆ ಸುಮಾರು 50 ದಿನಗಳಿಗೆ ಬೇಕಾಗುವಷ್ಟು ನೀರು ಲಭ್ಯವಿದೆ. ಅಲ್ಲದೆ ಎಎಂಆರ್ ಡ್ಯಾಮ್ ನಲ್ಲೂ ಗರಿಷ್ಟ ಮಟ್ಟದಲ್ಲಿ ನೀರಿನ ಸಂಗ್ರಹವಿದೆ. ಹಾಗಾಗಿ ಪಾಲಿಕೆಯ ಅಧಿಕಾರಿಗಳು ಅದನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳುವ ಬಗ್ಗೆ ಚಿಂತಿಸಿಬೇಕು, ಅದನ್ನು ಬಿಟ್ಟು ಕೇವಲ ರೇಷನಿಂಗ್ ಹೆಸರಿನಲ್ಲಿ ಜನರಿಗೆ ತೊಂದರೆಯನ್ನು ನೀಡುವುದು ಸರಿಯಲ್ಲ ಎಂದು ವೇದವ್ಯಾಸ ಕಾಮತ್ ಅಭಿಪ್ರಾಯಪಟ್ಟರು.
ನಗರದಲ್ಲಿ ಈ ಹಿಂದೆ ನೀರಿನ ಅಭಾವ ಸೃಷ್ಟಿಯಾದ ಸಂದರ್ಭದಲ್ಲಿ ಟ್ಯಾಂಕರ್ ಗಳ ಮೂಲಕ ಖಾಸಗಿ ಬಾವಿಗಳಿಂದ ನೀರನ್ನು ಪಡೆದು ಅಗತ್ಯವಿರುವ ಕಡೆಗಳಲ್ಲಿ ಸರಬರಾಜು ಮಾಡಲಾಗುತ್ತಿತ್ತು ಎಂದ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳು ಈ ಪರ್ಯಾಯ ವ್ಯವಸ್ಥೆ ಬಗ್ಗೆಯೂ ಗಮನಹರಿಸಿ, ಅಗತ್ಯವಿರುವ ಕಡೆಗಳಲ್ಲಿ ಟ್ಯಾಂಕರ್ ನೀರು ಪೂರೈಸುವ ಕ್ರಮ ಜರಗಿಸಬೇಕೆಂದು ಒತ್ತಾಯಿಸಿದರು.
ಕೊಳಚೆ ನೀರು ನೇರ ಮಳೆ ನೀರುಗಾಲುವೆಗೆ: 499 ಅಪಾರ್ಟ್ಮೆಂಟ್ ಮಾಲಿಕರಿಗೆ ನೋಟಿಸ್
ನಗರದ ಜನರು ಕೂಡ ಅನಾವಶ್ಯಕವಾಗಿ ನೀರನ್ನು ಪೋಲು ಮಾಡುವುದನ್ನು ನಿಲ್ಲಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಅವರು ಕಾಮತ್ ಅವರು ಮನವಿ ಮಾಡಿದ್ದಾರೆ.