ಮಂಗಳೂರು: ಮಸೀದಿಗೆ ಕಲ್ಲು ತೂರಿದ ಕಿಡಿಗೇಡಿ ಸಿಕ್ಕಿಬಿದ್ದ!
ಮಸೀದಿಗೆ ಕಲ್ಲು ತೂರಿದ ಆರೋಪಿ ಸಾಗರ್ ಕಿಸೆಯಲ್ಲಿ ಗಾಂಜಾ ಮತ್ತು ಇನ್ನಿತರ ಮಾದಕ ವಸ್ತುಗಳು ದೊರೆತಿರುವುದಾಗಿ ಮಸೀದಿಗೆ ಸಂಬಂಧಪಟ್ಟವರು ತಿಳಿಸಿದ್ದಾರೆ.
ಮಂಗಳೂರು ಮಾರ್ಚ್ 18: ತೊಕ್ಕೊಟ್ಟು ರೈಲ್ವೇ ಹಳಿಯ ಸಮೀಪದ ಮಸ್ಜಿದುಲ್ ಹುದಾ ಮಸೀದಿಗೆ ಶುಕ್ರವಾರ ಮಧ್ಯರಾತ್ರಿ ಕಲ್ಲು ತೂರಿದ ಕಿಡಿಗೇಡಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ತೊಕ್ಕೊಟ್ಟು ಚೆಂಬುಗುಡ್ಡೆ ಭಟ್ನಗರ ನಿವಾಸಿ ಸಾಗರ್ (22)ಎಂಬವನೇ ಮಸೀದಿಗೆ ಕಲ್ಲು ತೂರಿದ ಆರೋಪಿ. ಶುಕ್ರವಾರ ಮಧ್ಯರಾತ್ರಿ ವೇಳೆ ಮಸೀದಿಗೆ ಕಲ್ಲು ಬಿದ್ದದನ್ನು ಗಮನಿಸಿದ ಖತೀಬರು ಗಾಬರಿಗೊಂಡು ರಸ್ತೆಯಲ್ಲಿ ಓಡಲಾರಂಭಿಸಿದ್ದಾರೆ. ಈ ವೇಳೆ ಅಂಗಡಿಗಳನ್ನು ಮುಚ್ಚಿ ಬರುತ್ತಿದ್ದ ವ್ಯಾಪಾರಿಗಳು ಖತೀಬರನ್ನು ವಿಚಾರಿಸಿದಾಗ ಮಸೀದಿಗೆ ಕಲ್ಲು ತೂರಿದ ಸಂಗತಿ ತಿಳಿದಿದೆ.[ಸ್ನಾನ ಮಾಡುವುದನ್ನು ಇಣುಕಿ ನೋಡಿ ಹಲ್ಲೆ ಮಾಡಿದ ಭೂಪ..!]
ಕೂಡಲೇ ಮಸೀದಿಯತ್ತ ಧಾವಿಸಿದ ಹುಡುಗರು ಅಲ್ಲಿ ಕಲ್ಲೆಸೆಯುತ್ತಿದ್ದನೆನ್ನಲಾದ ಸಾಗರನ್ನು ಬೆನ್ನತ್ತಿ ಹಿಡಿದು ನಾಲ್ಕು ತದುಕಿದ್ದಾರೆ. ರಾತ್ರಿ ಪಾಳಿಯಲ್ಲಿದ್ದ ಪೊಲೀಸ್ ಕೂಡಲೇ ಸ್ಥಳಕ್ಕಾಗಮಿಸಿ ಆರೋಪಿ ಸಾಗರನ್ನು ಬಂಧಿಸಿ ಉಳ್ಳಾಲ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.[ಹತ್ಯೆಗೆ ಸಂಚು: ನರೇಂದ್ರ ನಾಯಕ್ ಸೆಕ್ಯೂರಿಟಿ ಡಬಲ್]
ಆರೋಪಿ ಸಾಗರ್ ಕಿಸೆಯಲ್ಲಿ ಗಾಂಜಾ ಮತ್ತು ಇನ್ನಿತರ ಮಾದಕ ವಸ್ತುಗಳು ದೊರೆತಿರುವುದಾಗಿ ಮಸೀದಿಗೆ ಸಂಬಂಧಪಟ್ಟವರು ತಿಳಿಸಿದ್ದಾರೆ. ತೊಕ್ಕೊಟ್ಟು ಒಳಪೇಟೆಯಲ್ಲಿ ಗಾಂಜಾ ಹಾವಳಿ ಜಾಸ್ತಿಯಾಗಿದ್ದು ಇದರ ಪರಿಣಾಮ ಪದೇ ಪದೇ ಬೆಂಕಿ ಇಡುವುದು, ಕಲ್ಲು ತೂರುವ ಪ್ರಕರಣಗಳು ನಡೆಯುತ್ತಲೇ ಇವೆ.
ಘಟನೆಯಿಂದ ಉಳ್ಳಾಲ ಪೊಲೀಸ್ ಠಾಣಾ ಆವರಣದಲ್ಲಿ ಮಸೀದಿಗೆ ಸಂಬಂಧಿಸಿದ ಗುಂಪು ಜಮಾವಣೆಗೊಂಡಿದ್ದು ಆರೋಪಿಗೆ ತಕ್ಕ ಶಿಕ್ಷೆ ನೀಡುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.ಎಸಿಪಿ ಶೃತಿ ಅವರು ಮಸೀದಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.