ಸುಬ್ರಹ್ಮಣ್ಯ ದೇಗುಲದಲ್ಲಿ ಅವಘಡ: ಕಳಚಿ ಬಿದ್ದ ಗರುಡ, ಕಿರುಗಂಟೆ
Recommended Video
ಮಂಗಳೂರು, ಡಿಸೆಂಬರ್ 18: ಷಷ್ಠಿ ಉತ್ಸವ ಮುಗಿದ ಬಳಿಕ ಧ್ವಜಾರೋಹಣದ ಸಂದರ್ಭದಲ್ಲಿ ಧ್ವಜಸ್ತಂಭದ ರಾಟೆ ಕಳಚಿ, ಧ್ವಜಸ್ತಂಭದ ಮೇಲಿನ ಗರುಡ ಹಾಗೂ ಕಿರುಗಂಟೆ ಕೆಳಗೆ ಬಿದ್ದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಂದಲೆಯಲ್ಲಿ ನಡೆದಿದೆ.
ಮೂಡಬಿದರೆ ಸಮೀಪದ ಇತಿಹಾಸ ಪ್ರಸಿದ್ಧ ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಘಟನೆಯಲ್ಲಿ ದೇವಾಲಯದ ಭಕ್ತರು ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಭಕ್ತರು ಆತಂಕಕ್ಕೆಗೊಳಗಾಗಿದ್ದು, ಕೂಡಲೇ ದೇವರಿಗೆ 48 ಕಲಶ ಅಭಿಷೇಕ ಸಹಿತ ಪ್ರಾಯಶ್ಚಿತ್ತ ವಿಧಿಗಳನ್ನು ನೆರವೇರಿಸಲಾಗಿದೆ.
ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಉತ್ಸವ ಸಂಪನ್ನ
ಕಡಂದಲೆ ದೇವಸ್ಥಾನದಲ್ಲಿ ಷಷ್ಠಿ ಉತ್ಸವ ಅದ್ದೂರಿಯಾಗಿ ನಡೆದು ಸಾವಿರಾರು ಭಕ್ತರು ಭಾಗವಹಿಸಿದ್ದರು. ನಿನ್ನೆ ಷಷ್ಠಿ ಉತ್ಸವ ಮುಗಿದ ಹಿನ್ನೆಲೆ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಧ್ವಜಸ್ಥಂಭದ ಮೇಲಿನ ಗರುಡ, ಕಿರುಗಂಟೆ ದಿಢೀರ್ ಕೆಳಗೆ ಬಿದ್ದಿದೆ. ಕಳೆದ 19 ವರ್ಷಗಳ ಹಿಂದೆ ಕಡಂದಲೆ ಕ್ಷೇತ್ರದಲ್ಲಿ ಬ್ರಹ್ಮಕಲಶ ನಡೆದಿದ್ದು, ಆ ಬಳಿಕ ಬ್ರಹ್ಮಕಲಶ ನಡೆದಿರಲಿಲ್ಲ.
ಷಷ್ಠಿ ಸಂದರ್ಭದಲ್ಲಿ ಧೂಮಾವತಿ ದೈವ ಬ್ರಹ್ಮಕಲಶ ನಡೆಯಬೇಕೆಂದು ಆಗ್ರಹಿಸಿತ್ತು. ಆದರೆ ದೈವ ಆಗ್ರಹದ ಬೆನ್ನಲ್ಲೇ ಈ ರೀತಿಯಾದ ಅವಘಡ ನಡೆದಿದ್ದು, ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ. ಪ್ರಾಯಶ್ಚಿತ್ತ ವಾಗಿ 48 ಕಲಶ ಅಭಿಷೇಕ ಸಲ್ಲಿಸಿರುವ ಭಕ್ತರು ಆಪಾಯವಾಗದಂತೆ ಬೇಡಿಕೊಂಡಿದ್ದಾರೆ.
ಮೈಸೂರಿನ ಸುಬ್ರಹ್ಮಣ್ಯ ಷಷ್ಠಿ ಜಾತ್ರೆಯಲ್ಲಿ ಹಾವನ್ನು ರಕ್ಷಿಸಿದ ಸ್ನೇಕ್ ಶ್ಯಾಂ
ಡಿಸೆಂಬರ್ 13ರಂದು ಧ್ವಜಾರೋಹಣದ ವೇಳೆ ಹಗ್ಗದ ಗಂಟು ರಾಟೆಯ ಎಡೆಗೆ ಸಿಲುಕಿಕೊಂಡದ್ದು ಯಾರ ಗಮನಕ್ಕೂ ಬಂದಿರಲಿಲ್ಲ. ಧ್ವಜಾವರೋಹಣದ ವೇಳೆ ಸೂಕ್ಷ್ಮವಾಗಿ ಗಮನಿಸಿ ಸಾಧ್ಯವಾದಷ್ಟು ಮಟ್ಟಿಗೆ ಆ ಗಂಟನ್ನು ತಪ್ಪಿಸಲು ಪ್ರಯತ್ನಿಸಿದರೂ ಫಲಕಾರಿಯಾಗದೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಕಡಂದಲೆ ಗ್ರಾಮ ಸೇರಿದಂತೆ ಹತ್ತೂರ ಗ್ರಾಮದ ಆರಾಧ್ಯದೈವ ಸುಬ್ರಹ್ಮಣ್ಯ ಕ್ಷೇತ್ರದಲ್ಲಾದ ಈ ಅವಘಡ ಭಕ್ತರ ಆತಂಕಕ್ಕೆ ಕಾರಣವಾಗಿದ್ದು, ಬ್ರಹ್ಮಕಲಶ ನಡೆಸುವ ಬಗ್ಗೆ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿ ಚಿಂತನೆ ನಡೆಸಿದೆ.