ಮಂಗಳೂರಿನಲ್ಲಿ ನೀರಿನ ಸಮಸ್ಯೆಗೆ ಸರ್ಕಾರದ ನಿರ್ಲಕ್ಷ್ಯ ಕಾರಣ– ವೇದವ್ಯಾಸ್ ಕಾಮತ್
ಮಂಗಳೂರು, ಜುಲೈ 8: ಐದು ವರ್ಷ ಮಂಗಳೂರು ಮಹಾನಗರ ಪಾಲಿಕೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವೇ ಅಧಿಕಾರದಲ್ಲಿದ್ದರೂ ಮಂಗಳೂರಿನ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗಿಲ್ಲ. ಇದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತುಂಬೆಯಿಂದ ಮಂಗಳೂರು ನಗರಕ್ಕೆ ಬರುವ ಪಡೀಲ್ ಮತ್ತು ಬೆಂದೂರ್ ವೆಲ್ ನ ಕುಡಿಯುವ ನೀರು ಸಂಗ್ರಹಣಾಗಾರದಲ್ಲಿ ಶೇಖರಣೆಗೊಂಡು ನಂತರ ಅಲ್ಲಿಂದ ಪಂಪ್ ಆಗಿ ವಿವಿಧೆಡೆ ಪೂರೈಕೆಯಾಗುತ್ತದೆ. ಆದರೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಾಗ ಅಲ್ಲಿಂದ ನೀರು ಪಂಪ್ ಆಗುವುದಿಲ್ಲ. ಇದರಿಂದ ಮಂಗಳೂರು ಮಹಾನಗರ ಪಾಲಿಕೆಯ ವಾರ್ಡುಗಳಿಗೆ ನೀರು ಪೂರೈಕೆ ಆಗದೆ ಜನರು ಸಮಸ್ಯೆ ಅನುಭವಿಸುತ್ತಾರೆ. ಇದನ್ನು ಗಮನಿಸಬೇಕಾದ್ದು ಇತ್ತೀಚಿನ ತನಕ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್. ಕಾಂಗ್ರೆಸ್ ನ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ಆದರೆ ಹಾಗೆ ಮಾಡದ ಪರಿಣಾಮ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅವರು ಕಿಡಿಕಾರಿದರು.
ಕುವೈತ್ ನಲ್ಲಿನ 35 ಯುವಕರು ಶೀಘ್ರ ಮಂಗಳೂರಿಗೆ-ವೇದವ್ಯಾಸ್ ಕಾಮತ್
ಮಿದ್ಯುತ್ ಸಮಸ್ಯೆಯ ನೆಪವೊಡ್ಡಿ ಮಹಾನಗರ ಪಾಲಿಕೆಯು ಸಮರ್ಪಕವಾಗಿ ನೀರು ಪೂರೈಸಲು ಮನಸ್ಸು ಮಾಡುತ್ತಿಲ್ಲ. ಸದ್ಯ ಮೈತ್ರಿ ಸರ್ಕಾರದ ಎರಡೂ ಪಕ್ಷಗಳು ಸರ್ಕಾರ ಉಳಿಸಲು ಒದ್ದಾಡುತ್ತಿರುವುದರಿಂದ ಅವರಿಗೆ ನಾಗರಿಕರ ತೊಂದರೆ ಕಾಣಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ನೀಡುವ ಅನುದಾನ ಬಳಸಿ ಪರ್ಯಾಯ ವ್ಯವಸ್ಥೆ ಮಾಡಬಹುದಿತ್ತು. ಆದರೆ ಅದನ್ನೂ ಪ್ರಯತ್ನಿಸದೆ ನಿರ್ಲಕ್ಷ್ಯ ವಹಿಸಿರುವುದು ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ. ಮಳೆಗಾಲದಲ್ಲಿಯೇ ಜನರಿಗೆ ನೀರಿನ ಕೊರತೆ ಉಂಟಾದರೆ ಇನ್ನು ಬೇಸಿಗೆಯ ಪರಿಸ್ಥಿತಿ ಹೇಗಿರಬಹುದು ಎನ್ನುವ ಆತಂಕವಿದೆ. ಜನರ ತೆರಿಗೆಯ ಹಣವನ್ನು ಪೋಲು ಮಾಡಿದ ರಾಜ್ಯ ಸರ್ಕಾರ ಮತ್ತು ಮಹಾನಗರ ಪಾಲಿಕೆಯಿಂದ ಜನ ಬೇರೇನು ನಿರೀಕ್ಷಿಸಲು ಸಾಧ್ಯ ಎಂದಿದ್ದಾರೆ ಕಾಮತ್. ತಾವು ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿಯೂ ತಿಳಿಸಿದರು.