ಮಂಗಳೂರಿನ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ: ತನಿಖೆ ತೀವ್ರಗೊಳಿಸಿದ ಪೊಲೀಸರು
ಮಂಗಳೂರು, ಮೇ 14: ವಿವಾಹಿತೆ ಶ್ರೀಮತಿ ಶೆಟ್ಟಿ (35) ಬರ್ಬರ ಕೊಲೆ ಪ್ರಕರಣದ ತನಿಖೆಯನ್ನು ಮಂಗಳೂರು ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಕೊಲೆ ಪ್ರಕರಣದ ತನಿಖೆಗೆ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ 3 ತಂಡಗಳನ್ನು ರಚಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಯನ್ನು ಭೀಕರವಾಗಿ ಕೊಲೆಗೈದು ಮೃತ ದೇಹದ ತಲೆಯ ಭಾಗವನ್ನು ಕದ್ರಿ ಪಾರ್ಕ್ ಬಳಿ ಮತ್ತು ದೇಹದ ಭಾಗ ನಂದಿಗುಡ್ಡೆಯಲ್ಲಿ ಎಸೆಯಲಾಗಿತ್ತು.
ಮಂಗಳೂರು : ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ
ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಆಕೆಯ 2ನೇ ಪತಿ ಸುದೀಪ್ ಎಂಬಾತನನ್ನು ಪೊಲೀಸ್ ಅಧಿಕಾರಿಗಳ ತಂಡ ವಿಚಾರಣೆಗೆ ಒಳಪಡಿಸಿದೆ. ಕಾರಾಗೃಹದಲ್ಲಿರುವ ಸುದೀಪ್ ಮೇಲೆ ನಗರದ ನಾನಾ ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿವೆ. ಮೊದಲ ಪತಿಯಿಂದ ದೂರವಾದ ಬಳಿಕ ಶ್ರೀಮತಿ ಶೆಟ್ಟಿ ಮಡಿಕೇರಿ ಮೂಲದ ಸುದೀಪ್ ಅವರನ್ನು ಮದುವೆ ಯಾಗಿದ್ದರು.
ಈ ನಡುವೆ ಶ್ರೀಮತಿ ಶೆಟ್ಟಿ ಹಾಗೂ ಸುದೀಪ್ ಸಂಬಂಧದಲ್ಲಿಯೂ ಬಿರುಕು ಉಂಟಾಗಿದ್ದು, ಶ್ರೀಮತಿ ಶೆಟ್ಟಿ ಡೈವೋರ್ಸ್ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸುದೀಪ್ ಶ್ರೀಮತಿಗೆ ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ.
ಮಹಿಳೆಯು ಅತ್ತಾವರ ಸಮೀಪದಲ್ಲಿ ಫ್ಯಾನ್ ರಿಪೇರಿ ಅಂಗಡಿಯನ್ನು ನಡೆಸುತ್ತಿದ್ದರು. ಅಂಗಡಿಗೆ ಪ್ರತಿನಿತ್ಯ 9 ಗಂಟೆಗೆ ಹೋಗುತ್ತಿದ್ದರು. ಯಾವಾಗಲೂ ಕಾರಿನಲ್ಲಿ ತೆರಳುತ್ತಿದ್ದ ಶ್ರೀಮತಿ ಶೆಟ್ಟಿ ಶನಿವಾರ ಮಾತ್ರ ಸ್ಕೂಟರ್ನಲ್ಲಿ ತೆರಳಿದ್ದರು. ಆದರೆ ಅಂದು ಅಂಗಡಿಗೆ ಮಾತ್ರ ತೆರಳಿರಲಿಲ್ಲ.
ಆದರೆ ಮಹಿಳೆ ತನ್ನ ಸ್ಕೂಟರ್ನೊಂದಿಗೆ ಅತ್ತಾವರದಿಂದ ಗೋರಿಗುಡ್ಡೆ ಕಡೆಗೆ ತೆರಳಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಳೆದ ರಾತ್ರಿ ಕೊಲೆಯಾದ ಶ್ರೀಮತಿ ಶೆಟ್ಟಿ ಅವರ ಸ್ಕೂಟರ್ ನಗರದ ನಾಗುರಿ ಬಳಿ ಪೊಲೀಸರು ಪತ್ತೆ ಮಾಡಿದ್ದಾರೆ.