ಬ್ಯಾಂಕ್ಗಳು ಅವ್ಯವಹಾರದ ಆರೋಪಕ್ಕೆ ಸಿಲುಕುತ್ತಿರುವುದು ದುರಂತ: ಜಗ್ಗಿ ವಾಸುದೇವ್
ಮಂಗಳೂರು, ಫೆಬ್ರವರಿ 19: ಆರ್ಥಿಕ ವಹಿವಾಟಿನಲ್ಲಿ ಲಾಭ ಕಂಡುಕೊಂಡ ಬ್ಯಾಂಕ್ಗಳು ಈಗ ಅವ್ಯವಹಾರದ ಆರೋಪಕ್ಕೆ ಸಿಲುಕುತ್ತಿರುವುದು ದುರಂತ ಎಂದು ಈಶ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಅಭಿಪ್ರಾಯ ಪಟ್ಟಿದ್ದಾರೆ.
ಮಂಗಳೂರಿನ ಕರ್ಣಾಟಕ ಬ್ಯಾಂಕಿನ ಪ್ರಧಾನ ಕಚೇರಿಯ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ಯಾಂಕಿನ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ಹಣ ಒಂದು ವಸ್ತುವಲ್ಲ. ಅದನ್ನು ವಸ್ತು ಎಂದು ಗೋದಾಮಿನಲ್ಲಿ ಇಡಲು ಸಾಧ್ಯವಿಲ್ಲ. ಆದರೂ ಹಣವನ್ನು ವಸ್ತುವೆಂದು ತಿಳಿದು ಶೇಖರಿಸಿದವರಿಗೆ ಕಳೆದ ಒಂದು ವರ್ಷದಿಂದ ಸಾಕಷ್ಟು ಅನುಭವವಾಗಿದೆ. ಹಾಗಾಗಿ ಹಣವನ್ನು ಗೋದಾಮಿನಲ್ಲಿ ಶೇಖರಿಸದೆ, ಬ್ಯಾಂಕಿನಲ್ಲಿ ಇರಿಸಬೇಕು," ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಅಪನಗದೀಕರಣವನ್ನು ಅವರು ಪರೋಕ್ಷವಾಗಿ ಪ್ರಸ್ತಾಪಿಸಿದರು.
11 ಸಾವಿರ ಕೋಟಿಯಲ್ಲ ಬ್ಯಾಂಕುಗಳು ಕಳೆದುಕೊಂಡಿದ್ದು 22,743 ಕೋಟಿ!
"ಸಾರ್ವಜನಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಧಿಕಾರಶಾಹಿಯ ಸಾಧ್ಯತೆ ಇರುತ್ತದೆ. ಆದರೆ ಖಾಸಗಿ ರಂಗದಲ್ಲಿ ಹೊಂದಾಣಿಕೆಯ ಮನೋಭಾವ ಇರುವುದರಿಂದ ಮುಂದಿನ ದಿನಗಳಲ್ಲಿ ಖಾಸಗಿ ಬ್ಯಾಂಕ್ಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಸಿಗಲಿದೆ," ಎಂದು ಸದ್ಗುರು ಇದೇ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟರು.
"ಹಣ ಇಲ್ಲದಿದ್ದರೆ ಜೀವನ ಸಾಧ್ಯವಿಲ್ಲ ಎಂಬುದು ನಿಜವಾದರೂ, ಎಲ್ಲದಕ್ಕೂ ಹಣವೇ ಅಂತಿಮ ಆಗಬಾರದು. ಸುಸೂತ್ರ ಜೀವನಕ್ಕೆ ಜೀವನಾನುಭವ ಬಹುಮುಖ್ಯ. ಸಮಚಿತ್ತದ ಬದುಕಿನಿಂದ ಬದಲಾವಣೆ ಸಾಧ್ಯವಿದೆ. ಇದಕ್ಕಾಗಿ ಯೋಗ, ಧ್ಯಾನದ ಮೊರೆ ಹೋಗಲು ಸಾಧ್ಯವಿದೆ. ಜೀವನ ಎಂದರೆ ಆಕರ್ಷಕವಾಗಿರಬೇಕು ಎಂದು ಬಯಸುವವರೂ ಇದ್ದಾರೆ. ಸಂತಸದ ಜೀವನ ನಡೆಸಲು ಐಷಾರಾಮಿ ಬದುಕಿಗೆ ಮೊರೆ ಹೋಗುವವರೇ ಜಾಸ್ತಿ. ಆದರೆ ಅತಿ ಆಸೆಗಳು ಜೀವನವನ್ನು ಕೆಲವೊಮ್ಮೆ ದುರಂತದ ಮಾರ್ಗಕ್ಕೆ ತಂದು ಹಾಕುತ್ತವೆ. ಸಮರ್ಪಕ ಆಲೋಚನೆ ಇಲ್ಲದೆ ನಡೆಸುವ ಕಾರ್ಯಗಳು ಮಾನಸಿಕ ಶಾಂತಿಯನ್ನು ನೀಡಲಾರದು," ಎಂದು ಅವರು ಹೇಳಿದರು.
"ಮಂಗಳೂರು ಬ್ಯಾಂಕಿಂಗ್ ಕ್ಷೇತ್ರದ ತವರು ಆಗಿದೆ. ನಾನು 35 ವರ್ಷಗಳ ಹಿಂದೆ ಮಂಗಳೂರಿಗೆ ಬಂದಿದ್ದೆ. ಐದು ಪ್ರಮುಖ ಬ್ಯಾಂಕ್ಗಳಿಗೆ ಜನ್ಮ ನೀಡಿದ ಮಂಗಳೂರಿನಲ್ಲಿ ಬ್ಯಾಂಕಿಂಗ್ ಕ್ಷೇತ್ರ ಅತ್ಯುತ್ತಮವಾಗಿದೆ," ಎಂದು ಜಗ್ಗಿ ವಾಸುದೇವ್ ಶ್ಲಾಘಿಸಿದರು.