ಮೋದಿ ಆರೋಗ್ಯ, ಶ್ರೇಯೋಭಿವೃದ್ಧಿಗೆ ಕದ್ರಿ ಮಂಜುನಾಥ ದೇಗುಲದಲ್ಲಿ ಏಕ ರುದ್ರ ಪೂಜೆ
ಮಂಗಳೂರು, ಫೆಬ್ರವರಿ 11: ಮುಂಬರುವ ಲೋಕಸಭಾ ಚುನಾವಣೆಗಾಗಿ ಪ್ರಮುಖ ರಾಜಕೀಯ ಪಕ್ಷಗಳ ಚಟುವಟಿಕೆ ಬಿರುಸುಗೊಂಡಿದೆ. ರಾಜ್ಯದಲ್ಲಿ ಮುಂಬರುವ ಚುನಾವಣೆಗಾಗಿ ಬಿಜೆಪಿ ಹುಬ್ಬಳ್ಳಿಯ ಮೂಲಕ ರಣಕಹಳೆ ಮೊಳಗಿಸಿದೆ.
ನಿನ್ನೆ ಭಾನುವಾರ (ಫೆ.10) ಪ್ರಧಾನಿ ನರೇಂದ್ರ ಮೋದಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಹೇಳಲಾಗುವ ಹುಬ್ಬಳ್ಳಿಗೆ ಆಗಮಿಸಿ ಚುನಾವಣೆಯ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿರುವ ಮೈತ್ರಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಆಯುಷ್ಯ, ಶ್ರೇಯೋಭಿವೃದ್ಧಿಗೆ ಕರಾವಳಿ ದೇಗುಲಗಳಲ್ಲಿ ವಿಶೇಷ ಪೂಜೆ
ಮೋದಿ ಆಗಮನದಿಂದ ಮುಂಬರುವ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಕಾರ್ಯಕರ್ತರಲ್ಲಿ ರಣೋತ್ಸಾಹ ಮೂಡಿದೆ. ರಾಜ್ಯದೆಲ್ಲೆಡೆ ಬಿಜೆಪಿ ಪಾಳಯದಲ್ಲಿ ಮುಂಬರುವ ಚುನಾವಣೆಗಾಗಿ ಬಿರುಸಿನ ಚಟುವಟಿಕೆ ಆರಂಭವಾಗಿದೆ.
ಈ ನಡುವೆ ಮಂಗಳೂರಿನಲ್ಲಿ ಮೋದಿ ಅವರ ಆರೋಗ್ಯ, ಕ್ಷೇಮಾಭಿವೃದ್ಧಿಗಾಗಿ ದೇವರ ಮೊರೆ ಹೋಗಲಾಗಿದೆ. ಮಂಗಳೂರಿನ ಹಿಂದೂ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಇಂದು ನಗರದ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಮೋದಿ ಅವರಿಗಾಗಿ ವಿಶೇಷ ಪೂಜೆ ನೆರವೇರಿಸಲಾಗಿದೆ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಆರೋಗ್ಯ, ಕ್ಷೇಮಾಭಿವೃದ್ಧಿ ಹಾಗೂ ಮುಂದಿನ ರಾಜಕೀಯ ಜೀವನವು ಸುಗಮವಾಗಿ ಸಾಗಲಿ ಎಂಬ ಬೇಡಿಕೆಯನ್ನಿಟ್ಟು, ಇಂದು ಬೆಳಗ್ಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಏಕ ರುದ್ರ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಆರೋಗ್ಯ, ಕ್ಷೇಮಾಭಿವೃದ್ಧಿ ಹಾಗೂ ಮುಂದಿನ ರಾಜಕೀಯ ಜೀವನವು ಸುಗಮವಾಗಿ ಸಾಗಲಿ ಎಂದು ಶ್ರೀ ಮಂಜುನಾಥನಲ್ಲಿ ಪ್ರಾರ್ಥಿಸಲಾಯಿತು .