ಬೆಂಗಳೂರು-ಕಣ್ಣೂರು ರೈಲು ಕೋಝಿಕ್ಕೋಡ್ಗೆ ವಿಸ್ತರಣೆ: ಪ್ರಯಾಣಿಕರ ವಿರೋಧ
ಮಂಗಳೂರು ಜು.7: ರಾಜ್ಯ ರಾಜಧಾನಿ ಬೆಂಗಳೂರಿನಿಂದ ಮಂಗಳೂರು ಮಾರ್ಗವಾಗಿ ಕಣ್ಣೂರಿಗೆ ಹೋಗುವ ಏಕೈಕ ಎಕ್ಸಪ್ರೆಸ್ ರೈಲನ್ನು ಕೋಝಿಕ್ಕೋಡ್ ಗೆ ವಿಸ್ತರಿಸಲು ಕೇಳಿರುವ ನೈರುತ್ಯ ರೈಲ್ವೆ ವಲಯ ನಡೆಗೆ ಕರ್ನಾಟಕ ಕರಾವಳಿ ಭಾಗದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಭಾರತೀಯ ರೈಲ್ವೆ ವೇಳಾಪಟ್ಟಿ ಸಮಿತಿ ಸಭೆಯಲ್ಲಿ ನೈರುತ್ಯ ರೈಲ್ವೆ ವಲಯವು ರೈಲ್ವೆ ಮಂಡಳಿ ಮುಂದೆ ಪ್ರಸ್ತಾವ ಸಲ್ಲಿಸಿದೆ. ಅದರ ಪ್ರಕಾರಣ ಬೆಂಗಳೂರು-ಮಂಗಳೂರು-ಕಣ್ಣೂರು ರಾತ್ರಿ ಎಕ್ಸಪ್ರೆಸ್ ರೈಲ್ ಅನ್ನು ಕೋಝಿಕ್ಕೋಡ್ವರೆಗೆ ವಿಸ್ತರಿಸಲು ಕೇಳಿದೆ. ಇದರಿಂದ ಕರಾವಳಿ ಭಾಗದ ಪ್ರಯಾಣಿಕರಿಗೆ ಸಮಸ್ಯೆ ಆಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.
ಪಶ್ಚಿಮ ಕರಾವಳಿ ಯಾತ್ರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತ್ ಕಾಮತ್ ಎಂಬುವವರು ಪ್ರತಿಕ್ರಿಸಿದ್ದು, ಕೋಝಿಕ್ಕೋಡ್ವರೆಗೆ ವಿಸ್ತರಿಸುವ ಚಿಂತನೆಯು ಕರಾವಳಿ ಭಾಗಕ್ಕೆ ಸಂಚರಿಸುವವರಿಗೆ ತೊಂದರೆ ಉಂಟು ಮಾಡುತ್ತದೆ. ಕರಾವಳಿ ಪ್ರಯಾಣಿಕರಿಗೆ ರೈಲಿನ ಬೋಗಿಗಳು ಮೊದಲಿನಷ್ಟು ಸಿಗದೆ ಪರದಾಡಬೇಕಾಗುತ್ತದೆ.
ರಾತ್ರಿ ಎಕ್ಸಪ್ರೆಸ್ ಕೋಝಿಕ್ಕೋಡ್ಗೆ ವಿಸ್ತರಣೆ ಆದರೆ ಬೆಂಗಳೂರಿನಿಂದಲೇ ಕೊನೆಯ ನಿಲ್ದಾಣ, ಕೇರಳ ವರೆಗೆ ಪ್ರಯಾಣಿಕರು ತುಂಬಿಕೊಳ್ಳುವುದರಿಂದ ಕರಾವಳಿ ಪ್ರಯಾಣಿಕರಿಗೆ ಆಸನದ ಸಮಸ್ಯೆ ಉದ್ಭವಿಸುತ್ತದೆ. ಮಹಿಳೆಯರು, ಹಿರಿಯ ನಾಗರಿಕರು ಕಿರಿಕಿರಿ ಅನುಭವಿಸಬೇಕಾಗುತ್ತದೆ ಎಂದರು.
ಕೋಝಿಕ್ಕೋಡ್ ಗೆ ವಿಸ್ತರಿಸದಂತೆ ಆಗ್ರಹ
ಬಹುದಿನದಿಂದ ಬೆಂಗಳೂರು-ಮಂಗಳೂರು-ಕಣ್ಣೂರು ರಾತ್ರಿ ಎಕ್ಸಪ್ರೆಸ್ ರೈಲನ್ನು ಕೋಝಿಕ್ಕೋಡ್ವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆ ಇತ್ತು. ಇದೀಗ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು, ರೈಲ್ವೆ ಖಾತೆಯ ರಾಜ್ಯ ಸಚಿವರು ಇದಕ್ಕೆ ಸಮ್ಮತಿಸುವುದು ಬಾಕಿ ಇದೆ. ಅಷ್ಟರಲ್ಲಿ ರೈಲು ಸೇವೆ ವಿಸ್ತರಿಸದಂತೆ ಅವರು ರೈಲ್ವೆ ವೇಳಾಪಟ್ಟಿ ಸಮಿತಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸೇರಿದಂತೆ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ.
ರಾಜ್ಯದ ಬೇಡಿಕೆ ಈಡೇರಿಸಬೇಕು
ಕರ್ನಾಟಕದ ಜಿಲ್ಲಾ ಕೇಂದ್ರಗಳಿಂದ ರಾಜ್ಯ ರಾಜಧಾನಿಗೆ ಸಂಪರ್ಕ ಕಲ್ಪಿಸುವ ರೈಲುಗಳ ಸೇವೆಯನ್ನು ಇನ್ನಿತರ ರೈಲ್ವೆ ವಲಯಗಳಿಗೂ ವಿಸ್ತರಿಸುವ ಮೂಲಕ ಕರ್ನಾಟಕದ ಪ್ರಯಾಣಿಕರಿಗೆ ಅನ್ಯಾಯ ಮಾಡಲಾಗುತ್ತಿದೆ. ಇಂತಹ ನಿರ್ಧಾರ ಕೈಗೊಳ್ಳುವ ಮುನ್ನ ರಾಜ್ಯದ ಜನರ ಹಿತವನ್ನು ಗಮನಿಸಬೇಕು ಎಂದು ಕುಕ್ಕೆ ಸುಬ್ರಹ್ಮಣ್ಯ ಮತ್ತು ಮಂಗಳೂರು ರೈಲು ಪ್ರಯಾಣಿಕರ ವೇದಿಕೆಯ ಸುದರ್ಶನ್ ಪುತ್ತೂರು ಹೇಳಿದರು.
ಕರಾವಳಿಯ ನಾಯಕರು ರೈಲ್ವೆ ವಿಸ್ತರಣೆ ವಿರೋಧಿಸಬೇಕು
ಸದ್ಯ ಉದ್ದೇಶಿತ ಬೆಂಗಳೂರು- ಮಂಗಳೂರು- ಕಣ್ಣೂರು ರೈಲು ಸೇವೆಯ ವಿಸ್ತರಣೆಯಿಂದ ಕರಾವಳಿ ಜನರ ಮೇಲೆ ಉಂಟಾಗುವ ಪರಿಣಾಮವನ್ನು ಈ ಭಾಗದ ನಾಯಕರು ಗಂಭಿರವಾಗಿ ಪರಿಗಣಿಸಬೇಕು. ರೈಲು ಸೇವೆ ವಿಸ್ತರಣೆಗೆ ವಿರೋಧಿಸಬೇಕು ಎಂದು ಅವರು ಒತ್ತಾಯಿಸಿದರು.
ಯಶವಂತಪುರ-ಮಂಗಳೂರು ರಾತ್ರಿಯ ಎಕ್ಸ್ಪ್ರೆಸ್ ರೈಲನ್ನು 2009 ರಲ್ಲಷ್ಟೇ ಪರಿಚಯಿಸಲಾಗಿತ್ತು. ಅದೇ ವರ್ಷ ಡಿಸೆಂಬರ್ನಲ್ಲಿ ಆಗಿನ ರೈಲ್ವೆ ರಾಜ್ಯ ಸಚಿವರು ಮಂಗಳೂರಿನಿಂದ ಕಣ್ಣೂರಿಗೆ ಸೇವೆ ವಿಸ್ತರಿಸಿದರು. ಕಾರವಾರಕ್ಕೆ ಸೇವೆಯನ್ನು ವಿಸ್ತರಿಸಬೇಕೆಂಬ ಬೇಡಿಕೆಯಿದ್ದರೂ ಈವರೆಗೆ ಈಡೇರಿಲ್ಲ ಎನ್ನಲಾಗಿದೆ.
ಕೋಝಿಕ್ಕೋಡ್ಗೆ ರೈಲು ಸೇವೆ ವಿಸ್ತರಣೆ ಅನಗತ್ಯ
ಬೆಂಗಳೂರಿನಿಂದ ನೇರವಾಗಿ ಕಣ್ಣೂರಿಗೆ ಪ್ರಯಾಣಿಸುವ ಹಿನ್ನೆಲೆಯಲ್ಲಿ ರೈಲಿನ ಬೋಗಿಗಳ ಸಂಖ್ಯೆಯಲ್ಲಿ ಕಡಿತಗೊಳಿಸಲಾಗಿದೆ. ಕಣ್ಣೂರು ಭಾಗದ ರೈಲ್ವೆ ಕೋಚ್ಗಳ ಸಂಖ್ಯೆ ಕ್ರಮೇಣ ಐದಕ್ಕೆ ಇಳಿಯುತ್ತದೆ. ಕಣ್ಣೂರು ಮತ್ತು ಕೋಝಿಕ್ಕೋಡ್ ಗೆ ಈಗಾಗಲೇ ಯಶವಂತಪುರದಿಂದ ಸೇಲಂ ಮತ್ತು ಪಾಲಕ್ಕಾಡ್ ಮೂಲಕ ದೈನಂದಿನ ರೈಲು (ರೈಲು ಸಂಖ್ಯೆ 16527/16528) ದೈನಂದಿನ ಸೇವೆ ಇದೆ. ಹೀಗಿದ್ದರು ಮತ್ತೊಂದು ರೈಲಿನ ಸೇವಾ ವಿಸ್ತರಣೆ ಅನಗತ್ಯ ಎಂದು ಕರಾವಳಿ ಭಾಗದ ಜನರು ಆಕ್ರೋಶ ಹೊರ ಹಾಕಿದ್ದಾರೆ. ಆದರೆ ಕೇರಳಿಗರು ಕಣ್ಣೂರು ನಿಂದ ಕೋಝಿಕ್ಕೋಡ್ ಗೆ ವಿಸ್ತರಣೆ ಮಾಡುತ್ತುವಂತೆ ಒತ್ತಾಯಿಸುತ್ತದ್ದಾರೆ ಎಂದು ತಿಳಿದು ಬಂದಿದೆ.
Recommended Video