ತೀವ್ರ ಬರ: ಮಂಗಳೂರು ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚನೆ
ಮಂಗಳೂರು, ಫೆಬ್ರವರಿ 18: ಹಿಂಗಾರು ಹಂಗಾಮಿನಲ್ಲಿ ಉಂಟಾದ ಮಳೆಯ ಕೊರತೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ್ತು ಬಂಟ್ವಾಳ ತಾಲ್ಲೂಕನ್ನು ತೀವ್ರ ಬರಪೀಡಿತ ತಾಲ್ಲೂಕುಗಳೆಂದು ಸರಕಾರ ಘೊಷಿಸಿದೆ. ಅಲ್ಲದೆ ಬೆಳೆಹಾನಿ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಅದೇಶಿಸಿದೆ.
ಈ ತಾಲ್ಲೂಕುಗಳಲ್ಲದೆ ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲ್ಲೂಕುಗಳಲ್ಲಿ ಬೇಸಿಗೆಯಲ್ಲಿ ಉಂಟಾಗಬಹದುದಾದ ಕುಡಿಯುವ ನೀರು ಮತ್ತು ಜಾನುವಾರುಗಳ ರಕ್ಷಣೆ ಇನ್ನಿತರ ಸಮಸ್ಯೆಗಳ ನಿವಾರಣೆಗಾಗಿ ಪ್ರತಿ ತಾಲ್ಲೂಕುಗಳಲ್ಲಿ ಆಯಾ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಇದರಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಸೇರಿದಂತೆ ವಿವಿಧ ವಿಭಾಗದ ಸ್ಥಳೀಯ ನಗರ ಸಂಸ್ಥೆಯ ಮುಖ್ಯಾಧಿಕಾರಿಗಳು ಇರುತ್ತಾರೆ.
ಈ ಸಮಿತಿಯ ಅಧಿಕಾರಿಗಳು ನೀರು ಮತ್ತು ಜಾನುವಾರುಗಳ ಬಗ್ಗೆ ಅಲ್ಲದೆ ಭೂ ರಹಿತ ಕಾರ್ಮಿಕರು, ಉದ್ಯೋಗ ಖಾತರಿಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉದ್ಯೋಗ ಒದಿಸುವಂತೆ ಮಾಡುವುದು ಇತ್ಯಾದಿ ಬರ ಪರಿಹಾರಕ್ಕೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುತ್ತಾರೆ.
ಜೊತೆಗೆ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಕಂಟ್ರೋಲ್ ರೂಂ, ಟ್ಯಾಂಕರ್ ಮೂಲಕ ನಿರು ಪೂರೈಕೆ, ಜಾನುವಾರುಗಳಿಗೆ ನೀರು, ಮೇವು ಒದಗಿಸಲು ಕ್ರಮ, ಬೆಳೆ ಹಾನಿ ಸಮೀಕ್ಷೆ, ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಒದಗಿಸುವುದು, ಕೆರೆಗಳ ಹೂಳೆತ್ತಲು ಕ್ರಮ ಕೈಗೊಳ್ಳುವುದು ಮತ್ತಿತರ ವಿಷಯಗಳನ್ನು ಈ ಸಮಿತಿ ನಿರ್ವಹಸಲಿದ್ದು, ಪ್ರತೀ 15 ದಿನಗಳಿಗೊಮ್ಮೆ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಲಾಗಿದೆ.
ವರದಿಯನ್ನು ಪಡೆದ ನಂತರ ಸರಕಾರ ವರದಿಯನ್ವಯ ಯಾವ ಯಾವ ತಾಲ್ಲೂಕುಗಳಿಗೆ ಎಷ್ಟೆಷ್ಟು ಪರಿಹಾರ ನೀಡಬೇಕು ಎಂಬುದನ್ನು ಸರಕಾರ ನಿರ್ಧರಿಸುತ್ತದೆ. ಹಾಗು ಅನುದಾನ ಒದಗಿಸುತ್ತದೆ.