ಲಾರಿ ಕ್ಯಾಬಿನ್ ನಲ್ಲಿ ಅಡಗಿಕೊಂಡಿತ್ತು ವಿಷ ಸರ್ಪ
ಮಂಗಳೂರು, ಆಗಸ್ಟ್ 18: ಚಲಿಸುತ್ತಿದ್ದ ಅನಿಲ ಸಾಗಾಟ ಟ್ಯಾಂಕರ್ ನ ಕ್ಯಾಬಿನ್ ನಲ್ಲಿ ಫ್ರೀ ಟ್ರಿಪ್ ಹೊರಟಿದ್ದ ಅತಿಥಿ ಯೊಬ್ಬರನ್ನು ಕಂಡಾಗ ಆತಂಕದಿಂದ ಚಾಲಕ ಮಾಡಿದ್ದೇನು ಗೊತ್ತಾ ಈ ಸ್ಟೋರಿ ಓದಿ .
ಮಂಗಳೂರಿನ ಸುರತ್ಕಲ್ ಕಾನ ಎಂಬಲ್ಲಿ ಅನಿಲ ತುಂಬಿಸಿದ ಬುಲೆಟ್ ಟ್ಯಾಂಕರ್ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಾಗುತ್ತಿತ್ತು. ದಾರಿ ಮಧ್ಯೆ ಟ್ಯಾಂಕರ್ ನ ಚಾಲಕನಿಗೆ ಕಾಲಿನ ಬಳಿ ಏನೋ ಬಿಗಿದು ಕೂಡಿರುವಂತೆ ಭಾಸವಾಗಿದೆ. ಈ ಸಂದರ್ಭದಲ್ಲಿ ಕಾಲಿಗೆ ನಾಗರ ಹಾವು ಸುತ್ತಿ ಕೊಂಡಿರುವುದುವುದನ್ನು ಕಂಡ ಚಾಲಕ ಹೌಹಾರಿದ್ದಾನೆ . ಆತಂಕದಿಂದ ಟ್ಯಾಂಕರ್ ನ ಸ್ಟೇರಿಂಗ್ ಕೈಬಿಟ್ಟಿದ್ದಾನೆ .
ಕೆಲವು ಕ್ಷಣಗಳ ಬಳಿಕ ಸುಧಾರಿಸಿಕೊಂಡ ಚಾಲಕ ಅನಿಲ ತುಂಬಿದ ಟ್ಯಾಂಕರ್ ನ್ನು ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಬಳಿ ನಿಲ್ಲಿಸಿ ಒಂದೇ ಸಮನೆ ಟ್ಯಾಂಕರ್ ನಿಂದ ಕೆಳಗೆ ಬಿದ್ದಿದ್ದಾನೆ .
ಈ ಹಿನ್ನೆಲೆಯಲ್ಲಿ ಕೆಲ ಹೊತ್ತು ದಾರಿ ಮಧ್ಯೆ ಟ್ಯಾಂಕರ್ ನಿಂತ ಕಾರಣ ಟ್ರಾಫಿಕ್ ಜಾಮ್ ಉಂಟಾಗಿದೆ. ಕ್ಯಾಬಿನ್ ನಿಂದ ಸರ್ರನೆ ಸಾಗಿದ ನಾಗರಾಜ ಟ್ಯಾಂಕರ್ ನ ಇಂಜಿನ್ ಪ್ರವೇಶಿಸಿದ್ದಾನೆ ಈ ಸಂದರ್ಭದಲ್ಲಿ ಉರಗ ತಜ್ಞರಿಗೆ ಬುಲಾವ್ ಹೋಗಿದೆ .
ಸುಮಾರು ಒಂದು ಗಂಟೆಗಳ ಕಾಲ ಅವಿರತ ಶ್ರಮ ಹಾಗೂ ಸಾಹಸದಿಂದ ನಾಗರಹಾವನ್ನು ಹಿಡಿಯುವಲ್ಲಿ ಉರಗತಜ್ಞರು ಯಶಸ್ವಿಯಾಗಿದ್ದಾರೆ. ಹಿಡಿದ ನಾಗರಹಾವನ್ನು ದೂರದ ಅಭಯಾರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ .