ಫೋಟೋಗಾಗಿ ಹಾವಿನೊಂದಿಗೆ ಸರಸ ಆಡಿದರೆ ಹುಷಾರ್!; ಇನ್ಮುಂದೆ ಉರಗ ರಕ್ಷಕರಿಗೂ ಐಡಿ ಕಾರ್ಡ್
ಮಂಗಳೂರು, ಫೆಬ್ರವರಿ 19: ಸಾಕಷ್ಟು ಮಂದಿ ಹವ್ಯಾಸಿ ಉರಗ ಹಿಡಿಯುವವರನ್ನು ನಾವು ನೋಡುತ್ತಲೇ ಇರುತ್ತೇವೆ. ಇವರಲ್ಲಿ ಹೆಚ್ಚಿನ ಮಂದಿ ಬರಿಗೈಯ್ಯಲ್ಲೇ ಹಾವು ಹಿಡಿಯುತ್ತಾರೆ. ಜೊತೆಗೆ ಹಾವಿನೊಂದಿಗೆ ಸ್ಟಂಟ್ ಮಾಡುತ್ತಾ ಫೋಟೋ, ವೀಡಿಯೋವನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ.
ಇಂತಹ ಕೆಲವೊಂದು ಸಂದರ್ಭಗಳಲ್ಲಿ ಆ ಹಾವುಗಳು ಅವರನ್ನು ಕಚ್ಚುವುದೂ ಇದೆ. ಕೆಲವರು ಹಾವುಗಳನ್ನು ಹಿಡಿದರೂ ಅವನ್ನು ಎಲ್ಲಿಗೆ ಬಿಡುತ್ತಾರೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಯಾರಿಗೂ ಇಲ್ಲ. ಅವರು ಹಾವಿನ ವಿಷ ತೆಗೆಯುತ್ತಾರೋ, ಮಾರಾಟ ಮಾಡುತ್ತಾರೋ, ಚರ್ಮ ಸುಲಿಯುತ್ತಾರೋ, ಅಥವಾ ರಫ್ತು ಮಾಡುತ್ತಾರೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಆದ್ದರಿಂದ ಅಕ್ರಮಗಳು ನಡೆದರೂ ಗೊತ್ತಾಗುವುದಿಲ್ಲ. ಇದೆನ್ನೆಲ್ಲಾ ನಿಗ್ರಹಿಸುವುದಕ್ಕೆ ಅರಣ್ಯ ಇಲಾಖೆ ಹೊಸ ಯೋಜನೆಗೆ ಕೈ ಹಾಕಿದೆ.
ಹಾವು ಕಡಿತಕ್ಕೆ ಸುಬ್ರಹ್ಮಣ್ಯದಲ್ಲಿ ಆರಂಭವಾಗಲಿದೆ ಚಿಕಿತ್ಸಾ ಕೇಂದ್ರ
ಇನ್ನು ಮುಂದೆ ವೃತ್ತಿಪರ ಉರಗ ಹಿಡಿಯುವವರನ್ನು ಗುರುತಿಸುವ ಸಲುವಾಗಿ ಐಡಿ ಕಾರ್ಡ್ ನೀಡಲಾಗುತ್ತಿದ್ದು, ಈ ಮೂಲಕ ಅವರಿಗೆ ತರಬೇತಿ ನೀಡಿ, ನಿಯಮಾನುಸಾರ ಸಂಘಟನೆ ಮಾಡುವ ಪ್ರಯತ್ನವನ್ನು ಅರಣ್ಯ ಇಲಾಖೆ ಮಾಡಲಿದೆ.
ರಾಜ್ಯದಲ್ಲಿ ಮೊದಲ ಬಾರಿಗೆ ಹಾವು ಹಿಡಿಯುವವರಿಗೂ ಗುರುತಿನ ಚೀಟಿ ಸಿಗುವ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆಯುತ್ತಿದ್ದು, ವೃತ್ತಿಪರರನ್ನು ಗುರುತಿಸಿ ತರಬೇತಿ ಕೊಟ್ಟು ನಿಯಮಾನುಸಾರ ಸಂಘಟಿಸುವ ಪ್ರಯತ್ನವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಕೇರಳದಲ್ಲಿ ಅರಣ್ಯ ಇಲಾಖೆಯು ವನ್ಯಜೀವಿ ಸಂರಕ್ಷಣಾ ಕಾಯಿದೆಯಂತೆ "ಕೇರಳ ಹಾವು ಮತ್ತು ವನ್ಯಮೃಗಗಳ ರಕ್ಷಣಾ ಸಂಘ' ರಚಿಸಿದ್ದು, ಅದೇ ಮಾದರಿಯಲ್ಲಿ ಹಾವು ಹಿಡಿಯುವವರನ್ನು ಸಂಘಟಿಸಲು ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಜನೆ ರೂಪಿಸಿದ್ದಾರೆ.
ಉರಗ ರಕ್ಷಕ ವಾವಾ ಸುರೇಶ್ ಕೃತಜ್ಞತೆ ಸಂಕೇತ: ಗ್ರಾಹಕರಿಗೆ ಉಚಿತ ಊಟ ನೀಡುವ ಹೊಟೇಲ್
ಹಾವನ್ನು ಹಿಡಿದುಕೊಂಡು ಸ್ಟಂಟ್ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಡುವುದು ನಿಯಂತ್ರಿಸಲು ಈ ಯೋಜನೆ ಮಾಡಲಾಗಿದೆ. ಈಗಾಗಲೇ ಮಂಗಳೂರು ಮತ್ತು ಪುತ್ತೂರಿನಲ್ಲಿ ಹಾವು ಹಿಡಿಯುವವರನ್ನು ಕರೆಸಿ, ಒಂದು ಹಂತದ ಸಭೆ ನಡೆಸಲಾಗಿದೆ. ಅದರ ನಡಾವಳಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಸಭೆಯಲ್ಲಿ ಸುಮಾರು 50 ಮಂದಿ ಭಾಗವಹಿಸಿದ್ದರು. ಇದರಲ್ಲಿ ಹಲವರನ್ನು ಗುರುತಿಸಲಾಗಿದೆ. ಅವರಿಗೆ ಕೇರಳ, ಬೆಂಗಳೂರು ಹಾಗೂ ವೈಲ್ಡ್ ಲೈಫ್ ಆಫ್ ಇಂಡಿಯಾದ ತಜ್ಞರಿಂದ ತರಬೇತಿ ನೀಡಲಾಗುತ್ತಿದೆ.
ಹಾವು ಹಿಡಿಯುವವರ ಸಂಪೂರ್ಣ ಸ್ವವಿವರ ಸಂಗ್ರಹಿಸಲಾಗುತ್ತಿದೆ. ಅವರನ್ನು ಸೇರಿಸಿ ವಾಟ್ಸಾಪ್ ಗ್ರೂಪ್ ರಚಿಸಲಾಗುತ್ತದೆ. ಜಿಪಿಎಸ್ ಮೂಲಕ ಪ್ರತಿದಿನ ಅವರ ಚಟುವಟಿಕೆ ದಾಖಲು ಮಾಡಲಾಗುತ್ತದೆ. ಹಿಡಿದ ಹಾವು ಯಾವುದು? ಮರಿಯೋ? ಗಾಯವಾಗಿತ್ತೋ? ಎಂಬ ಮಾಹಿತಿ ಅಪ್ಲೋಡ್ ಮಾಡಲಾಗುತ್ತದೆ. ಸಾರ್ವಜನಿಕರಿಗೂ ಹಾವು ಹಿಡಿಯುವವರ ಮಾಹಿತಿ ಲಭಿಸಲಿದ್ದು, ಜನರ ಸುಲಿಗೆ ತಪ್ಪಿಸಬಹುದು ಎನ್ನುತ್ತಾರೆ ಅಧಿಕಾರಿಗಳು.
ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಡಾ.ವೈ. ದಿನೇಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿ, "ಹಾವುಗಳನ್ನು ಹಿಡಿದು ಅದರೊಂದಿಗೆ ಸರಸವಾಡಿ ಫೋಟೋ, ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಇದು ಅವೈಜ್ಞಾನಿಕ ಕ್ರಮ. ಆದ್ದರಿಂದ ವೃತ್ತಿಪರ ಹಾವು ಹಿಡಿಯುವವರನ್ನು ಒಂದು ಕಡೆ ಸೇರಿಸಿ, ಅವರಿಗೆ ತರಬೇತಿ ನೀಡಿ ನಿಯಮ ರೂಪಿಸಲಾಗುತ್ತದೆ''.
"ಹಾವು ಹಿಡಿಯುವವರ ಸಂಪೂರ್ಣ ವಿವರಗಳನ್ನು ಪಡೆದು ವಾಟ್ಸಪ್ ಗ್ರೂಪ್ ರಚಿಸಲಾಗುತ್ತದೆ. ಜಿಪಿಎಸ್ ಮೂಲಕ ಪ್ರತಿದಿನ ಅವರ ಚಲನವಲನಗಳನ್ನು ಗಮನಿಸಲಾಗುತ್ತದೆ. ಈ ಮೂಲಕ ಸುಲಿಗೆ ಮಾಡುವುದನ್ನು ತಪ್ಪಿಸಬಹುದು,'' ಅಂತಾ ಹೇಳಿದ್ದಾರೆ.