ಎಸ್ಎಂ ಕೃಷ್ಣ ಅಳಿಯ, ಕಾಫಿ ಡೇ ಸ್ಥಾಪಕ ಸಿದ್ದಾರ್ಥ ನಾಪತ್ತೆ
Recommended Video
ಮಂಗಳೂರು, ಜುಲೈ 30: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅಳಿಯ, ಕೆಫೆ ಕಾಫಿ ಡೇ ಸ್ಥಾಪಕ, ಕರ್ನಾಟಕದ ಪ್ರಮುಖ ಉದ್ಯಮಿ ವಿ.ಜಿ ಸಿದ್ದಾರ್ಥ ಅವರು ಮಂಗಳೂರು-ಉಳ್ಳಾಲ ರಸ್ತೆ ನಾಪತ್ತೆಯಾಗಿದ್ದಾರೆ.
ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಮಂಗಳೂರು- ಉಳ್ಳಾಲ ರಸ್ತೆಯ ಬಳಿಯಿರುವ ನೇತ್ರಾವತಿ ನದಿ ಬಳಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಬೆಂಗಳೂರಿನಿಂದ ಮಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದರು, ನೇತ್ರಾವತಿ ಸೇತುವೆ ಬಳಿ ಇನ್ನೋವಾ ಕಾರು ಚಲಿಸುತ್ತಿದ್ದಂತೆ, ಚಾಲಕನಿಗೆ ವಾಹನ ನಿಲ್ಲಿಸುವಂತೆ ಸೂಚಿಸಿದ್ದಾರೆ. ಕಾರನ್ನು ಯೂ ಟರ್ನ್ ಮಾಡಿ ಬರುವಂತೆ ಹೇಳಿದ್ದಾರೆ. ಅಷ್ಟರಲ್ಲಿ ಸೇತುವೆ ಬಳಿಯಿಂದ ಕಣ್ಮರೆಯಾಗಿದ್ದಾರೆ.
ಕೆಫೆ ಕಾಫಿ ಡೇ ಖರೀದಿ ಮಾತುಕತೆಯಲ್ಲಿ ಕೋಕಾ ಕೋಲಾ
"ಸೇತುವೆ ಬದಿಯಿಂದ ನದಿ ಕಡೆಗೆ ನಡೆದುಕೊಂಡು ಹೋಗುವುದನ್ನು ಕೊನೆಯ ಬಾರಿಗೆ ಚಾಲಕ ನೋಡಿದ್ದಾರೆ" ಎಂಬ ಮಾಹಿತಿಯಿದೆ. ಆದರೆ, ಯೂ ಟರ್ನ್ ಮಾಡಿಕೊಂಡು ಬರುವ ವೇಳೆಗೆ ಸಿದ್ದಾರ್ಥ ಎಲ್ಲೂ ಕಾಣಿಸಿಕೊಂಡಿಲ್ಲ.
ತೀವ್ರಗೊಂಡ ಶೋಧ ಕಾರ್ಯ: ಸೋಮವಾರ ಸಂಜೆಯಿಂದ ತೀವ್ರವಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಸ್ಥಳದಲ್ಲಿ ಜಿಲ್ಲಾಧಿಕಾರಿ ಡಿಸಿಪಿ ಲಕ್ಷ್ಮೀ ಗಣೇಶ್ ಸೇರಿದಂತೆ ಉನ್ನತಾಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಕೋಟೆಕಾರ್ ಬಳಿಯ ನದಿಯಲ್ಲಿ ದೋಣಿಗಳ ಮೂಲಕ ಹುಡುಕಲಾಗುತ್ತಿದೆ. ಅಗ್ನಿಶಾಮಕ ದಳ, ಮುಳುಗು ತಜ್ಞರನ್ನು ಬಳಸಿ ನದಿ ಪರಿಶೀಲನೆ ನಡೆಸಲಾಗಿದೆ.
ಕಾಫಿ ಡೇ ಸಿದ್ಧಾರ್ಥ್ ನಾಪತ್ತೆ ಪ್ರಕರಣ: ತೀವ್ರಗೊಂಡ ಶೋಧ ಕಾರ್ಯ
ನಿಗೂಢವಾದ ಪ್ರಕರಣ: ಬೆಂಗಳೂರಿನಿಂದ KA 03 NC 2592 ನೋಂದಣಿಯ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದ ವಿ.ಜಿ. ಸಿದ್ದಾರ್ಥ ಅವರು ನೇತ್ರಾವತಿ ನದಿ ಸೇತುವೆ ಬಳಿ ನಡೆದುಕೊಂಡು ಹೋಗಿದ್ದು ಎಲ್ಲಿಗೆ ಎಂಬುದರ ಬಗ್ಗೆ ತನಿಖೆ ತೀವ್ರಗೊಂಡಿದೆ.
ಬೆಂಗಳೂರಿನಿಂದ ಫೋನ್ ಸಂಭಾಷಣೆಯಲ್ಲಿ ತೊಡಗಿದ್ದರು, ಮಾತನಾಡುತ್ತಲೇ ನದಿ ಕಡೆಗೆ ವಾಕಿಂಗ್ ತೆರಳಿದರು ಎಂಬ ಮಾಹಿತಿಯಿದೆ. ಅರ್ಧಗಂಟೆಯಾದರು ಸಿದ್ದಾರ್ಥ ಸುಳಿವು ಸಿಗದ ಕಾರಣ, ಅವರ ವಾಹನ ಚಾಲಕ ಕರೆ ಮಾಡಿದ್ದಾರೆ, ಆದರೆ, ಫೋನ್ ಸ್ವಿಚ್ಡ್ ಆಫ್ ಬಂದಿದೆ. ಮೊಬೈಲ್ ಟವರ್ ಟ್ರೇಸ್ ಮಾಡಿದಾಗ ಸೇತುವೆ ಬಳಿಯೇ ಕೊನೆಯ ಬಾರಿಗೆ ನೆಟ್ವರ್ಕ್ ಕಂಡು ಬಂದಿದೆ. ಸಿದ್ದಾರ್ಥ ಅವರು ನದಿಗೆ ಜಾರಿ ಬಿದ್ದರೆ, ಆತ್ಮಹತ್ಯೆ ಮಾಡಿಕೊಂಡರೇ? ನದಿ ಬಳಿ ದಾರಿ ತಪ್ಪಿದರೆ? ಯಾರಾದ್ರೂ ಅಪಹರಿಸಿದರೆ? ಎಂಬೆಲ್ಲ ಪ್ರಶ್ನೆಗಳು ಎದ್ದಿವೆ.
ಇತ್ತ ಬೆಂಗಳೂರಿನಲ್ಲಿ ಎಸ್ಎಂ ಕೃಷ್ಣ ಅವರ ಸದಾಶಿವ ನಗರದ ಮನೆಯಲ್ಲಿ ಕುಟುಂಬಸ್ಥರ ಆತಂಕ ಮುಂದುವರೆದಿದೆ. ಕೃಷ್ಣ ಅವರ ಮನೆಗೆ ಮಾಜಿ ಸಚಿವ ಡಿಕೆ ಶಿವಕುಮಾರ್, ಬಿಎಲ್ ಶಂಕರ್ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬೆಳಗ್ಗೆ ಭೇಟಿ ಮಾಡಿ, ಕೃಷ್ಣ ಅವರಿಗೆ ಧೈರ್ಯ ತುಂಬಿದ್ದಾರೆ.