ಮಂಗಳೂರಿನಲ್ಲಿ ರ್ಯಾಗಿಂಗ್ ಪ್ರಕರಣ; ಆರು ವಿದ್ಯಾರ್ಥಿಗಳ ಬಂಧನ
ಮಂಗಳೂರು, ಜುಲೈ 17: ಮಂಗಳೂರಿನಲ್ಲಿ ಮತ್ತೆ ರ್ಯಾಗಿಂಗ್ ಪ್ರಕರಣ ನಡೆದಿದ್ದು, ನಗರದ ಇಂದಿರಾ ನರ್ಸಿಂಗ್ ಕಾಲೇಜಿನ 6 ಮಂದಿ ವಿದ್ಯಾರ್ಥಿಗಳು ಜೂನಿಯರ್ಗಳಿಗೆ ರ್ಯಾಗಿಂಗ್ ಮಾಡಿದ್ದು, ಈಗ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾರೆ.
ಜುಲೈ 14ರಂದು ಘಟನೆ ನಡೆದಿದ್ದು, ಇಂದಿರಾ ಕಾಲೇಜಿನ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳು ಪಳ್ನೀರ್ನ ಹೋಟೆಲ್ಗೆ ಹೋಗಿದ್ದಾರೆ. ಈ ವೇಳೆ ಅದೇ ಹೋಟೆಲ್ಗೆ ಬಂದ ಸೀನಿಯರ್ ವಿದ್ಯಾರ್ಥಿ ಶ್ರೀಲಾಲ್, ವಿದ್ಯಾರ್ಥಿಗಳನ್ನು ಉದ್ದೇಶಿಸಿ, "ಏನು ಮುಖ ನೋಡುತ್ತೀಯಾ, ನೀವು ನನ್ನ ಜೂನಿಯರ್ಗಳು. ನಾನು ಸೀನಿಯರ್, ನಾನು ಬರುವಾಗ ಎದ್ದು ರೆಸ್ಪೆಕ್ಟ್ ಕೊಡಬೇಕು,'' ಎಂದು ಹೇಳಿದ್ದಾನೆ.
ಇಷ್ಟಕ್ಕೆ ಸುಮ್ಮನಾಗದೇ ಜೂನಿಯರ್ ವಿದ್ಯಾರ್ಥಿಗಳು ಇರುವ ಅಪಾರ್ಟ್ಮೆಂಟ್ಗೆ ಶ್ರೀಲಾಲ್ ಹಾಗೂ ಆತನ ಸ್ನೇಹಿತರಾದ ಅಮ್ಜದ್, ಹುಸೈನ್, ಲಿಮ್ಸ್, ಜುರೈಜ್ ಮತ್ತು ಶಾಹೀದ್ ಮಾರಕಾಸ್ತ್ರಗಳೊಂದಿಗೆ ಹೋಗಿ ವಿದ್ಯಾರ್ಥಿಗಳನ್ನು ಬೆದರಿಸಿದ್ದಾರೆ.
"ನಾವು ಸೀನಿಯರ್ಗಳು, ನಾವು ಹೇಳಿದಾಗೆ ಕೇಳಬೇಕು ಅಂತಾ ಹೇಳಿದ್ದಾರೆ. ವಿದ್ಯಾರ್ಥಿಗಳ ಬಟ್ಟೆಗಳನ್ನು ತೆಗೆದು ಒಳವಸ್ತ್ರದಲ್ಲಿ ಭಸ್ಕಿ ತೆಗೆಯುವಂತೆ ರ್ಯಾಗಿಂಗ್ ಮಾಡಿದ್ದಾರೆ. ಕೆಟ್ಟ ಶಬ್ದಗಳಿಂದ ಬೈದು, ನಾಳೆ ಕಾಲೇಜಿಗೆ ಬರುವಾಗ ತಲೆ ಕೆಳಗೆ ಹಾಕಿಕೊಂಡು ಹೋಗಬೇಕು. ಇಲ್ಲವಾದಲ್ಲಿ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ. ರ್ಯಾಗಿಂಗ್ ಮಾಡಿದವರೆಲ್ಲಾ ಕೇರಳ ಮೂಲದ ವಿದ್ಯಾರ್ಥಿಗಳಾಗಿದ್ದು, ಪ್ರಕರಣ ದಾಖಲಾಗಿದೆ.