ಆರೆಸ್ಸೆಸ್ ಕಾರ್ಯಕರ್ತ ಕಾರ್ತಿಕ್ ರಾಜ್ ಕೊಲೆಗೆ ತಂಗಿಯಿಂದಲೇ ಸುಪಾರಿ!
ಕಾರ್ತಿಕ್ ರನ್ನು ಅವರ ಸಹೋದರ ಗೌರವ್ (19), ಸಹೋದರಿ ಕಾವ್ಯಾ (25) ಹಾಗೂ ಆಕೆಯ ಪ್ರಿಯಕರ ಕಣಚೂರು ಮೆಡಿಕಲ್ ಕಾಲೇಜಿನ ಕ್ಲಾರ್ಕ್ ಆಗಿರುವ ಗೌತಮ್ (26) ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಮಂಗಳೂರು, ಏಪ್ರಿಲ್ 29: ಆರ್.ಎಸ್.ಎಸ್ ಕಾರ್ಯಕರ್ತ ಕಾರ್ತಿಕ್ ರಾಜ್ ಕೊಲೆಗೆ ತಂಗಿಯೇ ಸುಪಾರಿ ನೀಡಿದ್ದಳು ಎಂಬ ಸ್ಪೋಟಕ ಸತ್ಯವನ್ನು ಮಂಗಳೂರು ಪೊಲೀಸ್ ಕಮಿಷನರ್ ಎಂ ಚಂದ್ರಶೇಖರ್ ಬಹಿರಂಗಪಡಿಸಿದ್ದಾರೆ. ಈ ಮೂಲಕ ಕಾರ್ತಿಕ್ ಹತ್ಯೆಯ ಕಗ್ಗಂಟು ಕೊನೆಗೂ ಬಯಲಾಗಿದೆ.
ಕಾರ್ತಿಕ್ ರಾಜ್ ಜಿಹಾದಿಗಳಿಂದ ಹತ್ಯೆಗೆ ಒಳಗಾಗಿದ್ದಾರೆ ಎಂದು ಹೇಳಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿಕೆಯೂ ಸುಳ್ಳು ಎಂಬುದು ಇದರಿಂದ ಸಾಬೀತಾಗಿದೆ.[ಆರೆಸ್ಸೆಸ್ ಕಾರ್ಯಕರ್ತ ಕಾರ್ತಿಕ್ ರಾಜ್ ಹಂತಕರ ಬಂಧನ]
ಕಾರ್ತಿಕ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿದ ಅವರು, "ಈ ಪ್ರಕರಣ ಪೊಲೀಸ್ ಇಲಾಖೆಗೆ ಕಗ್ಗಂಟಾಗಿತ್ತು. ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದೇವೆ. ಹಲವು ಇನ್ಸ್ಪೆಕ್ಟರ್ ಗಳನ್ನು ಒಳಗೊಂಡ ಎಸಿಪಿ ವೆಲೆಂಟೈನ್ ನೇತೃತ್ವದಲ್ಲಿ ವಿಶೇಷ ತಂಡ ಈ ಕಾರ್ಯಾಚರಣೆ ನಡೆಸಿದೆ," ಎಂದು ಹೇಳಿದರು.
ಕಾರ್ತಿಕ್ ರನ್ನು ಅವರ ಸಹೋದರ ಗೌರವ್ (19), ಸಹೋದರಿ ಕಾವ್ಯಾ (25) ಹಾಗೂ ಆಕೆಯ ಪ್ರಿಯಕರ ಕಣಚೂರು ಮೆಡಿಕಲ್ ಕಾಲೇಜಿನ ಕ್ಲಾರ್ಕ್ ಆಗಿರುವ ಗೌತಮ್ (26) ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.[ಕಾರ್ತಿಕ್ ರಾಜ್ ಕೊಲೆ, ಜಿಹಾದಿ ಕೃತ್ಯ; ಯಡಿಯೂರಪ್ಪ]
ಇನ್ನು ಕಾರ್ತಿಕ್ ಹತ್ಯೆಗೆ ಸಹೋದರಿ ಕಾವ್ಯಳೇ ಸುಪಾರಿ ನೀಡಿದ್ದಳು. ಕೊಲೆಗಾಗಿ ಈಕೆ 5 ಲಕ್ಷ ಸುಪಾರಿ ಹಣ ನೀಡಿದ್ದರು. ಕಾವ್ಯಾ ಮತ್ತು ಕಾರ್ತಿಕ್ ರಾಜ್ ಮಧ್ಯೆ ಕೌಟುಂಬಿಕ ಕಲಹ ಇತ್ತು. ಈ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.
ಮಂಗಳೂರಿನ ಕೋಣಾಜೆ ಬಳಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳಿಂದ ಕಾರ್ತಿಕ್ ರಾಜ್ 2016ರ ಅಕ್ಟೋಬರಿನಲ್ಲಿ ಹತ್ಯೆಗೀಡಾಗಿದ್ದರು.
ಈ ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿ.ಸಿ.ಆರ್.ಬಿಯ ಎಸಿಪಿ ವೆಲೆಂಟೈನ್ ಡಿ'ಸೋಜಾ, ದಕ್ಷಿಣ ಉಪ-ವಿಭಾಗದ ಎಸಿಪಿ ಶೃತಿ, ಕೊಣಾಜೆ ಪೊಲೀಸ್ ನಿರೀಕ್ಷಕರಾದ ಅಶೋಕ್, ಸಿಬ್ಬಂದಿಗಳಾದ ಸುನಿಲ್ ಕುಮಾರ್, ದಾಮೋದರ, ರಿಜಿ ವಿ.ಎಂ., ಸುಧೀರ್ ಶೆಟ್ಟಿ, ಮನೋಜ್ ಕುಮಾರ್ ಮತ್ತು ಮಹಮ್ಮದ್ ಇಕ್ಬಾಲ್ ಭಾಗವಹಿಸಿದ್ದರು.