ಮೈಸೂರಿನೊಂದಿಗೆ ವೈಭವದ ಮಂಗಳೂರು ದಸರಾಕ್ಕೂ ತೆರೆ
ಮಂಗಳೂರು, ಅಕ್ಟೋಬರ್ 27: ಮೈಸೂರು ದಸರಾ ನಂತರ ರಾಜ್ಯದ ಎರಡನೇ ದೊಡ್ಡ ದಸರಾ ಎಂದರೆ ಅದು ಮಂಗಳೂರು ದಸರಾ ಉತ್ಸವ. ಸರಳ ಮೈಸೂರು ದಸರಾ ಉತ್ಸವದೊಂದಿಗೆ ಮಂಗಳೂರು ದಸರಾ ಉತ್ಸವಕ್ಕೂ ತೆರೆ ಬಿದ್ದಿದೆ.
ನವರಾತ್ರಿಯ ಒಂಬತ್ತು ದಿನಗಳ ಕಾಲ ಕುದ್ರೋಳಿ ಕ್ಷೇತ್ರದಲ್ಲಿ ಆರಾಧನೆಗೊಂಡ ನವದುರ್ಗೆಯರ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ನಡೆಯಿತು. ಸರ್ಕಾರದ ಕೊರೊನಾ ಮಾರ್ಗಸೂಚಿಗಳ ಪ್ರಕಾರ ಈ ವರ್ಷ ಸರಳವಾಗಿ ದಸರಾ ಉತ್ಸವ ನೆರವೇರಿತು.
ಅಂಬಾರಿ ಹೊತ್ತು ಸಾಗಿದ ಅಭಿಮನ್ಯು: ಐತಿಹಾಸಿಕ ಜಂಬೂಸವಾರಿಗೆ ತೆರೆ
ಪ್ರತಿ ವರ್ಷ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದ ಮಂಗಳೂರು ದಸರಾ ಈ ಬಾರಿ ಸರಳವಾಗಿ ನಡೆಯಿತು. ಕುದ್ರೋಳಿ ಮಂಜುನಾಥ ದೇವಸ್ಥಾನದ ಆವರಣಕ್ಕೆ ಮಾತ್ರ ಸೀಮಿತವಾಗಿದ್ದ ದಸರಾ ಮಹೋತ್ಸವಕ್ಕೆ ಸೋಮವಾರ ತಡರಾತ್ರಿ ತೆರೆಬಿದ್ದಿದೆ. ಒಂಬತ್ತು ದಿನಗಳ ಕಾಲ ಕ್ಷೇತ್ರದಲ್ಲಿ ಆರಾಧನೆಗೊಂಡ ನವದುರ್ಗೆಯರ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ನಡೆಯಿತು.
ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಆರಾಧನೆಗೊಂಡ ನವದುರ್ಗೆಯರ ಮೂರ್ತಿಯ ಭವ್ಯ ಶೋಭಾಯಾತ್ರೆ ಈ ಹಿಂದಿನ ವರ್ಷಗಳಲ್ಲಿ ನಡೆಯುತ್ತಿತ್ತು. ರಾತ್ರಿ ಪೂರ್ತಿ ಅದ್ಧೂರಿ ಸ್ತಬ್ಧಚಿತ್ರಗಳ ಮೂಲಕ ನಗರ ಪ್ರದಕ್ಷಿಣೆ ಮಾಡಿ ಮುಂಜಾನೆ ವೇಳೆಗೆ ದೇವಳದ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತಿತ್ತು.
ಈ ಬಾರಿ ಕೊರೊನಾ ವೈರಸ್ ಕಾರಣದಿಂದ ಮೆರವಣಿಗೆಯನ್ನು ರದ್ದುಗೊಳಿಸಲಾಗಿತ್ತು. ದೇವಸ್ಥಾನದಲ್ಲೇ ವಿಸರ್ಜನಾ ಪೂಜೆ ನೆರವೇರಿಸಿ ಹೊರಾಂಗಣದಲ್ಲೇ ಪ್ರದಕ್ಷಿಣೆ ಹಾಕಿ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಯಿತು.
ಈ ಬಾರಿ ಕೊರೊನಾ ಕಾರಣದಿಂದ ಹುಲಿ ಕುಣಿತವೂ ಕೇವಲ ಕುದ್ರೋಳಿ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿತ್ತು. ಮಂಗಳೂರು ಜಿಲ್ಲಾಡಳಿತ ದಸರಾ ಆಚರಣೆಗೆ ನಿರ್ಬಂಧಗಳನ್ನು ವಿಧಿಸಿತ್ತು. ಹುಲಿ ವೇಷ ತಂಡಗಳಿಗೆ ಮನೆ ಮನೆ ತೆರಳುವುದಕ್ಕೆ ಈ ಬಾರಿ ಅವಕಾಶ ಇರಲಿಲ್ಲ. ಹೀಗಾಗಿ ನವರಾತ್ರಿ ಉತ್ಸವ ನಡೆಯುವ ದೇವಸ್ಥಾನಗಳಲ್ಲಿ ಹುಲಿ ಕುಣಿತಕ್ಕೆ ಅವಕಾಶ ನೀಡಲಾಗಿತ್ತು. ಕೊರೊನಾ ಮಹಾಮಾರಿ ತೊಲಗಲಿ ಎಂದು ಹರಕೆಯ ಹುಲಿವೇಷ ಹಾಕಿದ್ದರು.
ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಈ ವರ್ಷದ ಮಂಗಳೂರು ದಸರಾ ಉತ್ಸವ ನಡೆಯಿತು. ಸಾಂಪ್ರದಾಯಿಕ ಆಚರಣೆಗಳಿಗೆ ಚ್ಯುತಿ ಬಾರದಂತೆ, ಭಕ್ತರಿಗೂ ನೋವುಂಟಾಗದಂತೆ ನವರಾತ್ರಿ ಸಂಪನ್ನಗೊಂಡಿದೆ.