ಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಸುಳಿವು ನೀಡದ ಡ್ರೈವರ್ ದೂರು
ಮಂಗಳೂರು, ಜುಲೈ 30: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅಳಿಯ, ಕಾಫಿ ಡೇ ಸ್ಥಾಪಕ ಸಿದ್ಧಾರ್ಥ ನಿಗೂಢ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೈವರ್ ಕೊಟ್ಟ ದೂರು ಹೆಚ್ಚಿನ ಸುಳಿವು ನೀಡುತ್ತಿಲ್ಲ.
ಡ್ರೈವರ್ ಬಸವರಾಜ್ ಪಾಟೀಲ್ ದೂರಿನಲ್ಲಿ ಹೇಳಿದ್ದಿಷ್ಟು; "ಕಳೆದ ಮೂರು ವರ್ಷಗಳಿಂದ ಕಾಫಿ ಡೇ ಮಾಲೀಕರಾದ ಸಿದ್ಧಾರ್ಥ ಹೆಗ್ಡೆ ವಿಜಿ ಅವರ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಎಂದಿನಂತೆ ಜುಲೈ 29ರಂದು ಸದಾಶಿವನಗರದಲ್ಲಿರುವ ಸಿದ್ಧಾರ್ಥ್ ಅವರ ನಿವಾಸಕ್ಕೆ ಕೆಲಸಕ್ಕೆ ಹೋಗಿದ್ದೆ.
ಎಸ್ಎಂ ಕೃಷ್ಣ ಅಳಿಯ, ಕಾಫಿ ಡೇ ಸ್ಥಾಪಕ ಸಿದ್ದಾರ್ಥ ನಾಪತ್ತೆ
ಎಂಟು ಗಂಟೆ ಸುಮಾರಿಗೆ ಸಿದ್ಧಾರ್ಥ ಅವರನ್ನು ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಅವರ ಕಚೇರಿಗೆ ಇನೋವಾ ಕಾರಿನಲ್ಲಿ ಕರೆದುಕೊಂಡು ಹೋಗಿ ಪುನಃ 11 ಗಂಟೆಗೆ ಮನೆಗೆ ವಾಪಸ್ ಬಂದಿದ್ದೆವು.
ಮನೆಗೆ ಬಂದ ನಂತರ ಸಿದ್ಧಾರ್ಥ ಊರಿಗೆ ಹೋಗಬೇಕಾಗಿದೆ, ನೀನು ಮನೆಗೆ ಹೋಗಿ ಲಗೇಜ್ ತೆಗೆದುಕೊಂಡು ಬಾ ಎಂದು ತಿಳಿಸಿದ್ದರಿಂದ ಮನೆಗೆ ಹೋಗಿ ಲಗೇಜ್ ತೆಗೆದುಕೊಂಡು ಬಂದೆ.
.ಮಧ್ಯಾಹ್ನ ಸುಮಾರು 12.30ರ ಸಮಯದಲ್ಲಿ ಸಿದ್ಧಾರ್ಥ ಸಕಲೇಶಪುರದ ಕಡೆಗೆ ನಡೆ ಎಂದರು. ಅವರು ತಿಳಿಸಿದಂತೆ ನಾನು ಮತ್ತು ಅವರು ಇನೋವಾ ಕಾರಿನಲ್ಲಿ ಬೆಂಗಳೂರನ್ನು ಬಿಟ್ಟು ಸಕಲೇಶಪುರದ ಕಡೆಗೆ ಹೊರಟೆವು. ಬಳಿಕ ಸಕಲೇಶಪುರ ಸಮೀಪಿಸುತ್ತಿದ್ದಂತೆ ಮುಂದೆ ಮಂಗಳೂರು ಕಡೆ ಹೋಗುವಾ ಎಂದು ತಿಳಿಸಿದರು.
ಕಾಫಿ ಡೇ ಸಿದ್ಧಾರ್ಥ ನಾಪತ್ತೆ ಪ್ರಕರಣ: ತೀವ್ರಗೊಂಡ ಶೋಧ ಕಾರ್ಯ
ನಾನು ಅವರು ತಿಳಿಸಿದಂತೆ ಅವರನ್ನು ಕಡೆದುಕೊಂಡು ಹೋಗಿ ಮಂಗಳೂರು ನಗರಕ್ಕೆ ಪ್ರವೇಶಿಸುವ ಸರ್ಕಲ್ನಲ್ಲಿ ಬಿಟ್ಟೆ, ಬಳಿಕ ಎಡಗಡೆ ತೆಗೆದುಕೋ ಸೈಟಿಗೆ ಹೋಗಬೇಕು ಎಂದರು.
ಅಲ್ಲಿಂದ ಕೇರಳ ಹೈವೇ ರಸ್ತೆಯಲ್ಲಿ ನಾಲ್ಕು ಕಿ.ಮೀ ಬಂದಾಗ ನದಿಗೆ ಅಡ್ಡಲಾಗಿ ಕಟ್ಟಿರುವ ಒಂದು ಸೇತುವೆ ಆರಂಭವಾಗುತ್ತಿದ್ದಂತೆ ಕಾರನ್ನು ನಿಲ್ಲಿಸು ಎಂದು ಹೇಳಿದರು."
ಹೀಗೆ ಆರಂಭವಾಗುತ್ತದೆ ಸಿದ್ಧಾರ್ಥ ನಾಪತ್ತೆ ಪ್ರಕರಣ. ತಮ್ಮ ದೂರಿನಲ್ಲಿ ಇನ್ನಷ್ಟು ವಿವರ ನೀಡುವ ಬಸವರಾಜ್, "ನಂತರ ಅವರು ಕಾರಿನಿಂದ ಇಳಿದು ನೀನು ಈ ಸೇತುವೆಯ ತುದಿಗೆ ಗಾಡಿಯನ್ನು ನಿಲ್ಲಿಸು ನಾನು ವಾಕಿಂಗ್ ಮಾಡಿಕೊಂಡು ಬರುತ್ತೇನೆ ಎಂದು ಹೇಳಿದರು. ಬಳಿಕ ನೀನು ಕಾರಿನಲ್ಲಿಯೇ ಕುಳಿತುಕೊಂಡಿರುವ ನಾನು ಬರುತ್ತೇನೆ ಎಂದು ಹೋದವರು ವಾಪಸ್ ಬಂದಿಲ್ಲ. ಅವರಿಗೆ ಕಾಲ್ ಮಾಡಿದರೂ ಸ್ವಿಚ್ಡ್ ಆಫ್ ಆಗಿತ್ತು.
"ಐಟಿ ದಾಳಿ ನೋವಿತ್ತು, ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿಯಲ್ಲ"
ಅವರ ಮಗನಿಗೆ ಈ ವಿಷಯ ತಿಳಿಸಿದೆ. ಬಳಿಕ ಆ ಜಾಗಕ್ಕೆ ಬಂದ ಪ್ರದೀಪ್ ಶೆಟ್ಟಿಯವರಿಗೆ ಎಲ್ಲಾ ವಿಷಯ ತಿಳಿಸಿದೆ. ಬಳಿಕ ಸಿದ್ಧಾರ್ಥ ಅವರ ಮಗ ಅಮಾರ್ಥ್ಯ ಹೆಗ್ಡೆಯವರು ಪೊಲೀಸರಿಗೆ ದೂರು ನೀಡಲು ಹೇಳಿದರು ನಾನು ದೂರು ನೀಡಿದ್ದೇನೆ," ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಾಫಿ ಡೇ ಬುಜಿನೆಸ್ ಮಾಡೆಲ್ ಫೇಲ್?:
ಉದ್ಯಮಿ ಸಿದ್ಧಾರ್ಥ ನಾಪತ್ತೆಗೂ ಮುನ್ನ ಅವರನ್ನು ನೋಡಿದ ಕೊನೆಯ ವ್ಯಕ್ತಿ ಚಾಲಕ ಬಸವರಾಜ್ ಪಾಟೀಲ್. ಆದರೆ ಆತ ನೀಡಿದ ದೂರಿನ ಸಾರಾಂಶದಲ್ಲಿ ಯಾವುದೇ ಸುಳಿವು ಸಿಗುತ್ತಿಲ್ಲ.
ಆದರೆ ಲಭ್ಯವಾಗುತ್ತಿರುವ ಮಾಹಿತಿ ಪ್ರಕಾರ, ಸಿದ್ದಾರ್ಥ ತಮ್ಮ ಕಾಫಿ ಡೇ ಉದ್ಯೋಗಿಗಳಿಗೆ 'ತಾನು ಉತ್ತಮ ಬಿಜಿನೆಸ್ ಮಾಡೆಲ್ ಕಟ್ಟುವಲ್ಲಿ ವಿಫಲವಾದೆ' ಎಂಬರ್ಥದಲ್ಲಿ ಕೊನೆಯ ಇ- ಮೇಲ್ ಕಳುಹಿಸಿದ್ದರು.
ಬೆಂಗಳೂರಿನ ಗ್ಲೋಬಲ್ ಟೆಕ್ ವಿಲೇಜ್ನಲ್ಲಿರುವ ಮೈಂಡ್ ಟ್ರೀ ಸಾಫ್ಟ್ವೇರ್ ಕಂಪನಿಯ ಶೇರುಗಳನ್ನೂ ಸಿದ್ದಾರ್ಥ ಮಾರಾಟ ಮಾಡಿದ್ದರು. ಕಳೆದ ಐದು ವರ್ಷಗಳ ಅಂತರದಲ್ಲಿ ಸಿದ್ಧಾರ್ಥ್ ಆರ್ಥಿಕ ಸಂಕಷ್ಟಗಳಿಗೆ ಸಿಲುಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.
ಇದೀಗ ನಡೆದಿರುವ ಬೆಳವಣಿಗೆ ಗಮನಿಸಿದರೆ ಉದ್ಯಮಿಯೊಬ್ಬನ ಅಂತರಾಳದ ಬಿರುಗಾಳಿ ಜೋರಾಗಿಯೇ ಬೀಸುದ್ದ ಸಾಧ್ಯತೆಗಳಿವೆ. ನಾಪತ್ತೆ ಹಿಂದಿನ ಸ್ಪಷ್ಟ ಕಾರಣ ಇನ್ನಷ್ಟೆ ತಿಳಿದು ಬರಬೇಕಿದೆ.