ಸಿದ್ದಾರ್ಥ್ ಸಾವಿನ ಪ್ರಕರಣದಲ್ಲಿ ನಿಗೂಢ ಪ್ರಶ್ನೆಗಳು; ಉತ್ತರದ ಹುಡುಕಾಟದಲ್ಲಿ ಪೊಲೀಸ್ ತಂಡ
Recommended Video
ಮಂಗಳೂರು, ಆಗಸ್ಟ್ 28: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಸಾವಿನ ಕುರಿತಂತೆ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯ ಎಫ್ಎಸ್ಎಲ್ ವರದಿಯಲ್ಲಿ ನೀರಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಉಲ್ಲೇಖಿಸಿದೆ.
ಮೇಲ್ನೋಟಕ್ಕೆ ಆತ್ಮಹತ್ಯೆ ಎಂಬುದು ದೃಢಪಟ್ಟಿದ್ದು, ಇದೀಗ ಆತ್ಮಹತ್ಯೆಗೆ ನಿಖರ ಕಾರಣದ ಕುರಿತು ತನಿಖಾಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಸಿದ್ದಾರ್ಥ್ ಅವರ ಮೃತದೇಹ 2 ದಿನಗಳ ನಂತರ ನದಿಯಲ್ಲಿ ಪತ್ತೆಯಾದ ಸಂದರ್ಭದಲ್ಲಿ ಅವರು ಧರಿಸಿದ್ದ ಟೀ ಶರ್ಟ್ ದೇಹದ ಮೇಲೆ ಇರಲಿಲ್ಲ. ಅವರು ಧರಿಸಿದ್ದ ಬನಿಯನ್ ಕೂಡ ಇರಲಿಲ್ಲ. ನೀರಿನ ರಭಸಕ್ಕೆ ಟೀ ಶರ್ಟ್ ಕೊಚ್ಚಿಹೋಗಿರಬೇಕು ಅನ್ನುವ ಉತ್ತರ ಬಂದಿದ್ದರೂ ಸಾಧ್ಯತೆಗಳು ತೀರಾ ಕಡಿಮೆ ಎನ್ನಲಾಗಿತ್ತು. ಇದು ಹಲವಾರು ಅನುಮಾನಗಳನ್ನು ಹುಟ್ಟುಹಾಕಿತ್ತು.
ಹೊರಬಿತ್ತು ಕಾಫೀ ಡೇ ಸಿದ್ಧಾರ್ಥ ಅಟಾಪ್ಸಿ ವರದಿ, ಅಂದು ನಡೆದಿದ್ದೇನು
ಸಿದ್ದಾರ್ಥ್ ಅವರು ತಮ್ಮ ಸಿಬ್ಬಂದಿಗೆ ಬರೆದಿದ್ದ ಪತ್ರಕ್ಕೆ ಹಾಕಿದ ಸಹಿಯ ಬಗ್ಗೆ ಕೆಲವೊಂದು ಗೊಂದಲವಿದ್ದು, ಈ ಬಗ್ಗೆ ಪರೀಕ್ಷಾ ವರದಿ ಕೂಡ ತನಿಖಾಧಿಕಾರಿಗಳ ಕೈಸೇರಿದೆ. ಇದರಿಂದಾಗಿ ಈಗ ಸಿದ್ಧಾರ್ಥ ಆತ್ಮಹತ್ಯೆಗೆ ಕಾರಣವಾದ ಅಂಶಗಳ ಬಗ್ಗೆ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಸಿದ್ಧಾರ್ಥ ಅವರಿಗೆ ಇದ್ದ ಗೆಳೆಯರ ಒಡನಾಟ, ಸಿದ್ಧಾರ್ಥ್ ಅವರ ಕುಟುಂಬದಲ್ಲಿನ ಸಂಬಂಧ, ಅವರ ವಹಿವಾಟಿನ ವಿವರವನ್ನು ತನಿಖಾ ತಂಡ ಸಂಗ್ರಹಿಸಲಿದೆ. ಸಿದ್ಧಾರ್ಥ ಹೊಂದಿದ್ದ ಸಾಲ, ಶೇರುಗಳ ವಹಿವಾಟು, ಬ್ಯಾಂಕ್ ಖಾತೆಗಳ ವಿವರ, ಆರ್ಥಿಕ ಸಲಹೆಗಾರರ ಸಲಹೆ, ಅಲ್ಲದೆ ಇತರೆ ವ್ಯವಹಾರಗಳ ಬಗ್ಗೆ ವಿಸ್ತೃತ ತನಿಖೆ ನಡೆಸಲಿದೆ ಎಂದು ಹೇಳಲಾಗಿದೆ.
ಈ ನಡುವೆ ಮತ್ತೊಂದು ಕುತೂಹಲಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇದು ಸಿದ್ದಾರ್ಥ್ ಪ್ರಕರಣದ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡುವಂತಿದೆ. ಮೂರು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಮಂಗಳೂರು ಹೊರವಲಯದ ಬೋಳಿಯಾರ್ ಎಂಬಲ್ಲಿನ ಪ್ರಭಾ ಜ್ಯುವೆಲರ್ಸ್ ಮಳಿಗೆಯ ಮಾಲೀಕ ಪ್ರಭಾಕರ ಆಚಾರ್ಯ ಅವರ ಶವ ಇಂದು ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.
ಪ್ರಭಾ ಫೈನಾನ್ಸ್ ನ ಮಾಲೀಕರಾಗಿದ್ದ ಪ್ರಭಾಕರ ಆಚಾರ್ಯ ಅವರ ಮೃತದೇಹ ಸುರತ್ಕಲ್ ಸಮೀಪದ ಮುಕ್ಕ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಪ್ರಭಾಕರ್ ಆಚಾರ್ಯ ಅವರ ಮೃತದೇಹ ಪತ್ತೆಯಾದ ಸಂದರ್ಭದಲ್ಲಿ ಅವರ ದೇಹದ ಮೇಲೆ ಅವರು ಧರಿಸಿದ್ದ ಶರ್ಟ್ ಹರಿದ ಸ್ಥಿತಿಯಲ್ಲಿ ದೇಹದ ಮೇಲೆ ಪತ್ತೆಯಾಗಿದೆ. ಅವರು ಧರಿಸಿದ ಬನಿಯನ್ ದೇಹಕ್ಕೆ ಅಂಟಿಕೊಂಡಿದೆ.
ಹೀಗಿರುವಾಗ ಸಿದ್ದಾರ್ಥ್ ಅವರ ಟೀ ಶರ್ಟ್ ಮತ್ತು ಬನಿಯನ್ ಏನಾದವು? ಎಂಬುದೇ ಈಗ ನಿಗೂಢವಾಗಿದೆ. ಎರಡೂ ಪ್ರಕರಣಗಳನ್ನು ತಾಳೆ ಹಾಕಿ ನೋಡಿದರೆ ಅನುಮಾನ ಉಂಟಾಗುವುದು ಸಹಜವೇ ಆಗಿದೆ. ಈ ಪ್ರಶ್ನೆಗಳಿಗೂ ತನಿಖಾಧಿಕಾರಿಗಳು ಉತ್ತರ ಹುಡುಕುವ ಪ್ರಯತ್ನದಲ್ಲಿದ್ದಾರೆ.