ಉದ್ಯಮಿ ಬಿಆರ್ ಶೆಟ್ಟಿ ಮಗನ ಮದುವೇಲಿ ಸಿಎಂ, ಸಚಿವರು ಹಾಜರ್
ಮಂಗಳೂರಿನಲ್ಲಿ ಉದ್ಯಮಿ ಬಿಆರ್ ಶೆಟ್ಟಿ ತಮ್ಮ ಮಗನ ಮದುವೆ ಅದ್ಧೂರಿಯಾಗಿ ಮಾಡಿದ್ದಾರೆ. ಅದಕ್ಕೆ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು
ಮಂಗಳೂರು, ಜನವರಿ 6 : ಉದ್ಯಮಿ, ಅನಿವಾಸಿ ಭಾರತೀಯ ಬಿ.ಆರ್.ಶೆಟ್ಟಿ ಮಗನ ಮದುವೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ದರು. ಮಂಗಳೂರು ಸಮೀಪದ ಅಡ್ಯಾರ್ ನಲ್ಲಿ ಗುರುವಾರ ಸಂಜೆ ಈ ವಿವಾಹ ಸಮಾರಂಭ ನಡೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವರಾದ ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ಬಿ.ರಮಾನಾಥ ರೈ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ನಟ ಅಂಬರೀಷ್, ಜಯಕರ್ನಾಟಕ ಸಂಘಟನೆಯ ಮುತ್ತಪ್ಪ ರೈ ಸಹಿತ ಹಲವು ಗಣ್ಯರು ಪಾಲ್ಗೊಂಡಿದ್ದರು.[ದುಬಾರಿ ಮದುವೆಗಳಲ್ಲಿ ಭಾಗವಹಿಸದಿರಲು ಸಿದ್ದು ನಿರ್ಧಾರ]
ಅಬುಧಾಬಿ ಸೇರಿದಂತೆ ಗಲ್ಫ್ ರಾಷ್ಟ್ರಗಳಿಂದ ಮದುವೆಗೆ ಬಂದಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿ ಈ ವೈಭವದ ಮದುವೆಗೆ ಸಾಕ್ಷಿಯಾದರು. ಬಿಆರ್.ಶೆಟ್ಟಿ- ಚಂದ್ರಕುಮಾರಿ ದಂಪತಿಯ ಪುತ್ರ, ಸ್ನಾತಕೋತ್ತರ ಪದವೀಧರ ಬಿನಯ್ ಶೆಟ್ಟಿ, ಎಂಬಿಎ ವ್ಯಾಸಂಗ ಮಾಡಿರುವ ಶಿವಾನಿ ಮದುವೆಯಾದರು.
ಬಿನಯ್ ಶೆಟ್ತಿ ಅವರು ಬಿ.ಆರ್.ಶೆಟ್ಟಿ ಸಮೂಹ ಸಂಸ್ಥೆಗಳ ಪಾಲುದಾರರು. ಶಿವಾನಿ ಅವರು ಕುಂದಾಪುರ ತಾಲ್ಲೂಕಿನ ಕೊಳಕ್ಕೆಬೈಲು ನಡುಮನೆ ರವೀಂದ್ರ ನಾಥ ಶೆಟ್ಟಿ ಮತ್ತು ಸವಿತಾ ದಂಪತಿಯ ಮಗಳು. ಎಂಬಿಎ ಪದವೀಧರೆಯಾದ ಅವರು ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಎಚ್ಆರ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು.[ಹೊಗಳಿಕೆ ಟೀಕೆ ಅಪಹಾಸ್ಯಕ್ಕೀಡಾದ ರೆಡ್ಡಿ ಮಗಳ ಮದುವೆ!]
ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೋಫೋನ್ ವಾದನ ವಿಶೇಷ ಆಕರ್ಷಣೆಯಾಗಿತ್ತು. ನದಿ ತಟದಲ್ಲಿ ನಿರ್ಮಿಸಿದ ಗೋಪುರಗಳು, ಸ್ವಾಗತ ಕಂಬಗಳು ವಿಶೇಷ ಆಕರ್ಷಣೆಗಳಾಗಿದ್ದವು. ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.