ಕೊನೆಗೂ ಸಿಕ್ಕಿಬಿದ್ದ ಮಂಗಳೂರಿನ ಶ್ರೀಮತಿ ಶೆಟ್ಟಿ ಕೊಲೆ ಆರೋಪಿಗಳು
ಮಂಗಳೂರು, ಮೇ 15: ಶ್ರೀಮತಿ ಶೆಟ್ಟಿ ಭೀಕರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಮಂಗಳೂರು ಪೊಲೀಸರು ಸಫಲರಾಗಿದ್ದಾರೆ. ಮೂರೇ ದಿವಸದಲ್ಲಿ ಪ್ರಕರಣ ಬೇಧಿಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಬಂಧಿತರನ್ನು ವೆಲೆನ್ಸಿಯಾ ನಿವಾಸಿ ಜಾನ್ಸನ್(36) ಮತ್ತು ಈತನ ಪತ್ನಿ ವಿಕ್ಟೋರಿಯಾ(46) ಎಂದು ಗುರುತಿಸಲಾಗಿದೆ. ಈ ಇಬ್ಬರು ಆರೋಪಿಗಳು ಜೊತೆ ಸೇರಿ ಶ್ರೀಮತಿ ಶೆಟ್ಟಿಯವರ ಭೀಕರ ಕೊಲೆ ಮಾಡಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಕೊಲೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಬಂದ ಸಂದರ್ಭದಲ್ಲಿ ಆರೋಪಿ ಜಾನ್ಸನ್ ಆತ್ಮಹತ್ಯೆ ಗೆ ಯತ್ನಿಸಿದ್ದ ಎಂದು ಹೇಳಲಾಗಿದ್ದು, ಆತನನ್ನು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀಮತಿ ಶೆಟ್ಟಿ ಅವರ ಭೀಕರ ಕೊಲೆಗೆ ಸಾಲ ಮರು ಪಾವತಿ ಪ್ರಮುಖ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಂಗಳೂರಿನ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ: ತನಿಖೆ ತೀವ್ರಗೊಳಿಸಿದ ಪೊಲೀಸರು
ಆರೋಪಿ ಜಾನ್ಸನ್, ಶ್ರೀಮತಿ ಶೆಟ್ಟಿ ಅವರಿಂದ 1 ಲಕ್ಷ ರೂಪಾಯಿ ಸಾಲ ಪಡೆದಿದ್ದು ಇನ್ನೂ 60 ಸಾವಿರ ರೂಪಾಯಿ ಹಣ ಹಿಂದಿರುಗಿಸಲು ಬಾಕಿ ಇತ್ತು. ಸಾಲದ ಹಣ ಹಿಂದಿರುಗಿಸುವಂತೆ ಶ್ರೀಮತಿ ಶೆಟ್ಟಿ ಪಟ್ಟು ಹಿಡಿದಿದ್ದರು ಎಂದು ಹೇಳಲಾಗಿದೆ.
ದುಡ್ಡು ಕೊಡದಿದ್ದಕ್ಕೆ ಗಲಾಟೆ ಮಾಡುತ್ತಿದ್ದ ಶ್ರೀಮತಿ ಶೆಟ್ಟಿ ಕಳೆದ ಶನಿವಾರ ಬೆಳಗ್ಗೆ ಆರೋಪಿ ಮನೆಗೆ ಬಂದಿದ್ದ ಸಂದರ್ಭದಲ್ಲಿ ಆರೋಪಿ ಜಾನ್ಸನ್ ಮಾರಕಾಸ್ತ್ರಗಳಿದ ಶ್ರೀಮತಿ ಶೆಟ್ಟಿ ಅವರ ಮೇಲೆ ದಾಳಿ ನಡೆಸಿದ್ದ. ದಾಳಿಯಲ್ಲಿ ಶ್ರೀಮತಿ ಶೆಟ್ಟಿ ಸ್ಥಳದಲ್ಲೇ ಮೃತ ಪಟ್ಟಿದ್ದರು.
ಮಂಗಳೂರು : ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ
ಕೊಲೆ ಕೃತ್ಯ ಬಯಲಾಗುವ ಭಯದಿಂದ ಜಾನ್ಸನ್ ಹಾಗೂ ಆತನ ಪತ್ನಿ ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನಗರದ ಹಲವೆಡೆ ಎಸೆದು ಬಂದಿದ್ದರು.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ಹಾಗೂ ಕೊಲೆ ಸಂದರ್ಭದಲ್ಲಿ ಶ್ರೀಮತಿ ಶೆಟ್ಟಿ ಧರಿಸಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.