ಡೆಂಗ್ಯೂ ಹೊಡೆತಕ್ಕೆ ಕರಾವಳಿ ತತ್ತರ, ರೋಗಿಗಳಿಗೆ ರಕ್ತಕ್ಕೆ ತತ್ವಾರ
ಮಂಗಳೂರು, ಜುಲೈ 7: ಕರಾವಳಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಸಾಮಾನ್ಯವಾಗಿ ಕಾಡುವ ಡೆಂಗ್ಯೂ ಜ್ವರದಿಂದಾಗಿ ಜಿಲ್ಲೆಯಲ್ಲಿ ರಕ್ತಕ್ಕಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಸಮಸ್ಯೆ ವಿಪರೀತವಾಗಿದ್ದು, ರಕ್ತಕ್ಕಾಗಿ ರೋಗಿಗಳನ್ನು ನಗರಕ್ಕೆ ಕರೆದುಕೊಂಡು ಬರಲಾಗುತ್ತಿದೆ.
ಕರಾವಳಿಯಲ್ಲಿ ಮಳೆಗಾಲ ಬಂತೆಂದರೆ ಡೆಂಗ್ಯೂ, ಮಲೇರಿಯಾದಂತ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗುತ್ತದೆ. ಅದರಲ್ಲೂ ಡೆಂಗ್ಯೂ ಜ್ವರದ ಹಾವಳಿಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಚಿಕಿತ್ಸೆ ನೀಡುವ ವೈದ್ಯರು ರಕ್ತದ ಪ್ಲೇಟ್ ಲೆಟ್ ಹೆಚ್ಚಿಸಲು ಪರದಾಡುತ್ತಿದ್ದಾರೆ. ರೋಗಿಗಳ ಸಂಬಂಧಿಕರಂತೂ ರಕ್ತಕ್ಕಾಗಿ ಅಲೆದಾಡುತ್ತಿದ್ದು, ನಗರ ಪ್ರದೇಶಗಳಿಗೆ ಬಂದರೂ ತಮಗೆ ಬೇಕಾದ ಪ್ಲೇಟ್ ಲೆಟ್ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಡೆಂಗ್ಯೂ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು...
ಡೆಂಗ್ಯೂ ಪೀಡಿತರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ ರಕ್ತದಲ್ಲಿ ಪ್ಲೆಟ್ ಲೆಟ್ ಕಡಿಮೆಯಾಗುವುದು. ಡೆಂಗ್ಯೂ ಜ್ವರ ಬಂದರೆ ಏಕಾಏಕಿ ರೋಗಿಯ ದೇಹದ ಪ್ಲೇಟ್ ಲೆಟ್ ದಿನಕ್ಕೆ 20 ಸಾವಿರದಂತೆ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಮನುಷ್ಯನ ದೇಹದಲ್ಲಿ ಪ್ಲೇಟ್ ಲೆಟ್ 1.5 ಲಕ್ಷದಿಂದ 4 ಲಕ್ಷದವರೆಗೆ ಇರುತ್ತದೆ. ಆದರೆ ಪ್ಲೇಟ್ ಲೆಟ್ ಪ್ರಮಾಣ 40 ಸಾವಿರಕ್ಕಿಂತ ಕಡಿಮೆಯಾದರೆ ರೋಗಿಗೆ ರಕ್ತ ನೀಡಬೇಕಾಗುತ್ತದೆ.
ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಡೆಂಗ್ಯೂ ಜ್ವರದ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಡೆಂಗ್ಯೂ ಪ್ರಕರಣಗಳಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ರಕ್ತದ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಡೆಂಗ್ಯೂ ರೋಗಿಗಳು ಗ್ರಾಮೀಣ ಭಾಗದಿಂದ ನಗರಕ್ಕೆ ಬರುತ್ತಿದ್ದಾರೆ.
ಒಂದೇ ಸಲಕ್ಕೆ ಹೆಚ್ಚಿನ ಸಂಖ್ಯೆ ರೋಗಿಗಳು ಬರುತ್ತಿರುವ ಕಾರಣಕ್ಕೆ ನಗರದ ಆಸ್ಪತ್ರೆಗಳಲ್ಲಿ ರಕ್ತದ ಪ್ಲೇಟ್ ಲೆಟ್ ಕೊರತೆ ಕಾಣಿಸಿಕೊಂಡಿದೆ.
ರಕ್ತದ ಪ್ಲೇಟ್ ಲೆಟ್ ಪ್ರತ್ಯೇಕಿಸುವ ಬಗೆ ಹೇಗೆ?
ದಾನಿಗಳಿಂದ ಸಂಗ್ರಹಿಸಿದ ರಕ್ತವನ್ನು ವಿಶೇಷ ಯಂತ್ರಕ್ಕೆ ಹಾಕಿ, ಅಲ್ಲಿ ರಕ್ತದಿಂದ ಪ್ಲೇಟ್ ಲೆಟ್ ಪ್ರತ್ಯೇಕಿಸಲಾಗುತ್ತದೆ. ರಕ್ತ ಸಂಗ್ರಹಿಸಿದ 6 ಗಂಟೆಯ ಒಳಗೆ ಪ್ಲೇಟ್ ಲೆಟ್ ಪ್ರತ್ಯೇಕಿಸುವ ಕಾರ್ಯ ಮಾಡಬೇಕು. ಪ್ರತಿ ದಾನಿಯಿಂದ ರಕ್ತ ತೆಗೆಯುವಾಗ 300 ಎಂ.ಎಲ್. ಎಂದು ನಿಗದಿ ಮಾಡಲಾಗುತ್ತದ. ಅದರಲ್ಲಿ ಪ್ಲೇಟ್ ಲೆಟ್, ಕೆಂಪು ರಕ್ತಕಣ, ಪ್ಲಾಸ್ಮಾಗಳನ್ನು ವಿಂಗಡಿಸಲಾಗುತ್ತದೆ.
3 ರಿಂದ 4 ಲೀಟರ್ ರಕ್ತದಲ್ಲಿ 1 ರಿಂದ 1.5 ಲೀಟರ್ ಪ್ಲೇಟ್ ಲೆಟ್ ಸಿಗುತ್ತದೆ. ಅಲ್ಲದೆ ಈ ಪ್ಲೇಟ್ ಲೆಟ್ ಗಳನ್ನು ಕೇವಲ 4 ರಿಂದ 7 ದಿನಗಳವರೆಗೆ ಮಾತ್ರ ಸಂರಕ್ಷಿಸಿ ಇಡಬಹುದಾಗಿದೆ. ಡೆಂಗ್ಯೂ ರೋಗಿಗಳಿಗೆ ಪ್ಲೇಟ್ ಲೆಟ್ ಗಳನ್ನು ನೀಡುವ ಮೂಲಕ ಆರೋಗ್ಯದಲ್ಲಿ ಚೇತರಿಕೆ ತರಲು ಸಾಧ್ಯವಾಗುತ್ತದೆ.
ಮಂಗಳೂರಿನಲ್ಲಿ ಎರಡು ದಿನಗಳ ಹಿಂದೆ ಒಂದೇ ರಾತ್ರಿ ಸುಮಾರು 40 ಯೂನಿಟ್ ರಕ್ತವನ್ನು ಸ್ಥಳೀಯ ಆಸ್ಪತ್ರೆಗಳಿಗೆ ನೀಡಲಾಗಿದೆ ಎಂದು ರೆಡ್ ಕ್ರಾಸ್ ಸಂಸ್ಥೆ ತಿಳಿಸಿದೆ. ಒಟ್ಟಾರೆಯಾಗಿ ಕರಾವಳಿಯಲ್ಲಿ ಸುರಿಯುತ್ತಿರುವ ಮಳೆ ಜೊತೆಗೆ ಡೆಂಗ್ಯೂನ ಆರ್ಭಟಕ್ಕೆ ರಕ್ತದ ಪ್ಲೇಟ್ ಲೆಟ್ ಗೂ ಕೊರತೆ ಉಂಟಾಗಿದೆ.