ಸತ್ತಿದ್ದಾಳೆಂದುಕೊಂಡವಳು 12 ವರ್ಷದ ಬಳಿಕ ಮಂಗಳೂರಲ್ಲಿ ಕಂಡಾಗ...
ಮಂಗಳೂರು, ಜುಲೈ 29: ಆಕೆ ಸತ್ತಿದ್ದಾಳೆಂದೇ ಸಂಬಂಧಿಗಳೆಲ್ಲರೂ ಭಾವಿಸಿದ್ದರು. ಆಕೆಯ ನೆನಪೂ ಅರೆಬರೆ ಮಾಸಿಹೋಗಿತ್ತು. ಆಕೆ ಬದುಕಿರುವ ಸಾಧ್ಯತೆಯನ್ನು ಕೂಡ ಯಾರೂ ಊಹಿಸಿರಲಿಲ್ಲ. ಆದರೆ 12 ವರ್ಷದ ನಂತರ ಇದ್ದಕ್ಕಿದ್ದಂತೆ ಆಕೆ ಬದುಕಿದ್ದಾಳೆ ಎಂಬ ಸುದ್ದಿ ಬಂತು. ಇದು ನಿಜವೋ ಭ್ರಮೆಯೋ ಎಂದು ಆಶ್ಚರ್ಯದಲ್ಲೇ ಮಂಗಳೂರಿಗೆ ಬಂದಿದ್ದರು ಆಂಧ್ರದ ಆ ಸಂಬಂಧಿಗಳು.
12 ವರ್ಷಗಳ ಹಿಂದೆ ಮಾನಸಿಕ ಸ್ಥಿಮಿತ ಕಳೆದುಕೊಂಡು ಕಾಣೆಯಾಗಿದ್ದ ಮಹಿಳೆಗೆ ಇದೀಗ ಮರುಜನ್ಮ ದೊರೆತಿದೆ. ಇವರ ಹೆಸರು ಶಿವಲೀಲಾ.
ಕುವೈತ್ ನಲ್ಲಿ ಸಿಲುಕಿಕೊಂಡಿದ್ದ 10 ಯುವಕರು ಮರಳಿ ಮಂಗಳೂರಿಗೆ
ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮಾರಿಪಾಲಂ ಗ್ರಾಮದ ನಿವಾಸಿ ಶಿವಲೀಲಾ ಅವರಿಗೆ 20 ವರ್ಷ ಇದ್ದಾಗ ತಂದೆ-ತಾಯಿ ಇಬ್ಬರೂ ತೀರಿಕೊಂಡರು. ರೋಗಪೀಡಿತರಾಗಿ ಹೆತ್ತವರು ತೀರಿಕೊಂಡಾಗ ಆ ಆಘಾತದಿಂದ ಹೊರಬರಲಾರದೇ ಮಾನಸಿಕ ಅಸ್ವಸ್ಥಳಾದರು. ಅಲ್ಲಿ ಇಲ್ಲಿ ತಿರುಗಾಡಿಕೊಂಡು ಕಾಲ ಕಳೆಯುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಊರಿನಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಒಂದೆರಡು ದಿನ ನೋಡಿದ ಸಂಬಂಧಿಗಳು, ಕಾಣದೇ ಇದ್ದದ್ದನ್ನು ಗಮನಿಸಿ ಊರಿಡೀ ಹುಡುಕಾಡಲು ಆರಂಭಿಸಿದರು. ಎಲ್ಲಿ ಹುಡುಕಾಡಿದರೂ ಶಿವಲೀಲಾ ಸುಳಿವು ಸಿಗಲಿಲ್ಲ. ಸ್ವಲ್ಪ ದಿನ ಕಳೆದ ಮೇಲೆ, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಶಿವಲೀಲಾ ಎಲ್ಲೋ ಸಾವನ್ನಪ್ಪಿರಬೇಕೆಂದು ಹುಡುಕಾಟವನ್ನು ಕೊನೆಗಾಣಿಸಿದರು.
ಆದರೆ ಆಂಧ್ರಪ್ರದೇಶದಿಂದ ರೈಲು ಹತ್ತಿದ್ದ ಆ ಯುವತಿ ಮಂಗಳೂರಿನ ರೈಲ್ವೇ ನಿಲ್ದಾಣಕ್ಕೆ ಬಂದಿಳಿದಿದ್ದಳು. ಆಕೆಯ ಸ್ಥಿತಿ ಗತಿಯನ್ನು ನೋಡಿ ಯುವತಿಯನ್ನು ವಶಕ್ಕೆ ಪಡೆದ ಪಾಂಡೇಶ್ವರ ಠಾಣೆ ಪೊಲೀಸರು, ಕುಲಶೇಖರದಲ್ಲಿರುವ ವೈಟ್ ಡೌಸ್ ಅನಾಥಾಶ್ರಮದಲ್ಲಿ ಬಿಟ್ಟಿದ್ದರು. ಅಲ್ಲಿಯೆ ಅವರ ಶುಶ್ರೂಶೆಯೂ ಆರಂಭಗೊಂಡಿತ್ತು. ಆದರೆ ತಾನು ಯಾರು, ತನ್ನ ಊರೇನು, ತನ್ನವರಾರು... ಇವ್ಯಾವುದೂ ಶಿವಲೀಲಾಗೆ ನೆನಪಿಗೆ ಬಂದೇ ಇರಲಿಲ್ಲ.
ಮೊಳಕೆಯೊಡೆದು ಗಿಡವಾಗುತ್ತೆ ಈ ಯೂಸ್ ಅಂಡ್ ಥ್ರೋ ಪೆನ್
ಅನಾಥ ಭಿಕ್ಷುಕರಿಗೆ, ಮಾನಸಿಕ ಅಸ್ವಸ್ಥರಿಗೆ ನೆಲೆಯಾಗಿರುವ ವೈಟ್ ಡೌಸ್ ಆಶ್ರಮದಲ್ಲಿ ನೆಲೆಸಿದ್ದರು. ಆಶ್ರಮದ ಮುಖ್ಯಸ್ಥೆ ಕೊರಿನ್ ರಸ್ಕಿನ್ನಾ ಇವರಿಗೆ ಸೂಕ್ತ ಔಷಧಿ, ಚಿಕಿತ್ಸೆಯನ್ನು ನೀಡಿದ್ದರು.
ಪವಾಡ ಎನ್ನುವಂತೆ ವಾರದ ಹಿಂದೆ ಅವರಿಗೆ ತಮ್ಮ ಹಳೆಯ ದಿನಗಳು ನೆನಪಿಗೆ ಬಂದಿವೆ. ಕೂಡಲೇ ಆಶ್ರಮದ ಸಿಸ್ಟರ್ ಬಳಿ ತಮ್ಮ ವಿಚಾರವನ್ನು ಹೇಳಿ, ಊರಿಗೆ ಹೋಗುವ ಆಸೆ ವ್ಯಕ್ತಪಡಿಸಿದ್ದಾರೆ. ಇದರಿಂದ ಅಚ್ಚರಿ, ಸಂತೋಷಗೊಂಡ ಆಶ್ರಮದ ಸಿಬ್ಬಂದಿ ಶಿವಲೀಲಾ ಹೇಳಿದ ಅರೆಬರೆ ವಿಳಾಸದೊಂದಿಗೆ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಪೊಲೀಸರನ್ನು ಸಂಪರ್ಕಿಸಿ, ಇವರ ಸಂಬಂಧಿಗಳಿಗೆ ವಿಷಯ ತಿಳಿಸಿದ್ದಾರೆ.
ಬರೋಬ್ಬರಿ 12 ವರ್ಷದ ನಂತರ ಶಿವಲೀಲಾ ಬದುಕಿದ್ದಾರೆ ಎಂಬ ಸುದ್ದಿಯಿಂದ ಖುಷಿಗೊಂಡ ಆಕೆಯ ಸಂಬಂಧಿಗಳು ಮಂಗಳೂರಿಗೆ ಬಂದು ಇವರನ್ನು ಮತ್ತೆ ಊರಿಗೆ ಕರೆದೊಯ್ಯಲು ಮುಂದಾಗಿದ್ದಾರೆ.
ಮಂಗಳೂರನ್ನು ಹಸಿರಾಗಿಸುವ ಹಾದಿಯಲ್ಲಿ ಜೀತ್ ಮಿಲನ್
ಈ ಆಶ್ರಮದಲ್ಲಿ ಇಂಥ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ. ಮಾನಸಿಕ ಸ್ಥಿಮಿತ ಕಳೆದುಕೊಂಡು ಮರಳಿ ವಾಸ್ತವಕ್ಕೆ ಬಂದ 387ನೇ ಮಹಿಳೆ ಶಿವಲೀಲಾ ಆಗಿದ್ದಾರೆ. ಎಲ್ಲೋ ಬಿದ್ದು ಸತ್ತು ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಕರೆತಂದು ಪುನರ್ಜನ್ಮ ಕೊಟ್ಟ ರಸ್ಕಿನ್ನಾರನ್ನು ಶಿವಲೀಲಾ ಕುಟುಂಬ ಮಾತ್ರವಲ್ಲ, ಇಡೀ ಸಮಾಜವೂ ಶ್ಲಾಘಿಸಬೇಕಿದೆ.