ಶಿರಾಡಿ ಘಾಟ್ ಮತ್ತೆ ಓಪನ್; ಬೃಹತ್ ವಾಹನ ಸಂಚಾರಕ್ಕೆ ನಿಷೇಧ
ಹಾಸನ, ಜುಲೈ 23: ರಾಜ್ಯದ ಮಲೆನಾಡು ಭಾಗದಲ್ಲಿ ಭಾರೀ ವರ್ಷಧಾರೆಯಾಗುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಸಕಲೇಶಪುರ ಸೇರಿದಂತೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.
ಮಂಗಳೂರು- ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ- 75ರ ಶಿರಾಡಿ ಘಾಟ್ ರಸ್ತೆಯ ದೋಣಿಗಾಲ್ ಸಮೀಪ ನಿರಂತರ ಮಳೆಗೆ ಹೆದ್ದಾರಿ ಕುಸಿದಿದ್ದು, ಸದ್ಯ ಹೆದ್ದಾರಿ ದುರಸ್ಥಿ ಕಾರ್ಯ ಸಂಪೂರ್ಣವಾಗಿದೆ. ಶಿರಾಡಿ ಘಾಟ್ ಹೆದ್ದಾರಿ ಮತ್ತೆ ತೆರೆದುಕೊಂಡಿದ್ದು, ಶಿರಾಡಿ ಘಾಟ್ ರಸ್ತೆಯಲ್ಲಿ ಬೃಹತ್ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಶಿರಾಡಿ ಘಾಟ್ ಬಳಿ ಭೂಕುಸಿತ; ಮಂಗಳೂರು-ಬೆಂಗಳೂರು ಹೆದ್ದಾರಿ ಬಂದ್; ಬದಲಿ ಮಾರ್ಗ ಇಲ್ಲಿದೆ
ಜುಲೈ 23ರಿಂದ ಮುಂದಿನ ಆದೇಶದವರೆಗೂ ಶಿರಾಡಿ ಘಾಟ್ ರಸ್ತೆಯಲ್ಲಿ ಬೃಹತ್ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ. ಆದರೆ ಲಘು ವಾಹನಗಳಿಗೆ ಓಡಾಡಲು ಅವಕಾಶ ನೀಡಲಾಗಿದೆ. ಲಘು ವಾಹನಗಳ ಓಡಾಟಕ್ಕೂ ಜಿಲ್ಲಾಡಳಿತ ಹಲವು ನಿಯಮಗಳನ್ನು ಮಾಡಿದೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಎಲ್ಲಾ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ.
ಕಾರು, ಜೀಪ್, ದ್ವಿಚಕ್ರ ವಾಹನಗಳು, ಮಿನಿ ಟೆಂಪೋ, ಸಾರಿಗೆ ಬಸ್ಗಳಿಗೆ ಅವಕಾಶ ನೀಡಲಾಗಿದ್ದು, ಟ್ಯಾಂಕರ್, ರಾಜಹಂಸ, ಐರಾವತ ಕಂಟೇನರ್ ವಾಹನಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.
ಘನ ವಾಹನಗಳು ಹಾಸನ- ಬೇಲೂರು- ಮೂಡಿಗೆರೆ ಚಾರ್ಮಾಡಿ ಘಾಟ್ ಮೂಲಕ ಮಂಗಳೂರಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಘನ ಲಾರಿಗಳಿಗೆ ಮಾಣಿ- ಮೈಸೂರು ರಸ್ತೆಯ ಮೂಲಕ ಸಂಚರಿಸಲು ಸೂಚನೆ ನೀಡಲಾಗಿದೆ.