ರಸ್ತೆ ಕುಸಿತಕ್ಕೆ ಶಾಶ್ವತ ಪರಿಹಾರ, ಮಳೆಗಾಲಕ್ಕೂ ಮುನ್ನ ಶಿರಾಡಿಘಾಟ್ ಬಂದ್?
ಮಂಗಳೂರು ಮೇ 04:ಕಡಲ ತಡಿಯ ನಗರ ಮಂಗಳೂರು ಹಾಗು ರಾಜಧಾನಿ ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ರಸ್ತೆ ಮತ್ತೆ ಬಂದ್ ಆಗುವ ಎಲ್ಲಾ ಲಕ್ಷಣಗಳು ಗೋಚರಿಸತೊಡಗಿದೆ.
ಈ ಕರಿತು ರಾಜ್ಯ ಸರಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಕಳೆದ ಬಾರಿಸುರಿದ ಮಹಾ ಮಳೆಗೆ ಶಿರಾಡಿ ಘಾಟ್ ಪ್ರದೇಶದ ರಸ್ತೆಯ 12 ಕಡೆಗಳಲ್ಲಿ ಭೂ ಕುಸಿತ ಉಂಟಾಗಿ ರಸ್ತೆ ಸಂಪೂರ್ಣ ಹದಗೆಟ್ಟತ್ತು. ಆದರೆ ಕಳೆದ ಜೂನ್ ತಿಂಗಳಿನಲ್ಲಿ ರಸ್ತೆಯ ಸ್ಥಿತಿ ಹೇಗಿತ್ತೋ, ಅದೇ ಸ್ಥಿತಿ ಇಂದಿಗೂ ಶಿರಾಡಿ ಘಾಟ್ ನಲ್ಲಿ ಮುಂದುವರೆದಿದೆ.
ಮಾಸಾಂತ್ಯಕ್ಕೆ ಕಾಮಗಾರಿ ಪೂರ್ಣ: ಜೂ.15ಕ್ಕೆ ಶಿರಾಡಿ ಸಂಚಾರಕ್ಕೆ ಮುಕ್ತ
ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಿರುವ ಶಿರಾಡಿ ಘಾಟ್ ರಸ್ತೆಯ ಸಮಸ್ಯೆಗೆ ಒಂದು ವೇಳೆ ಶಾಶ್ವತ ಪರಿಹಾರ ದೊರೆತಲ್ಲಿ, ಇತರ ವ್ಯವಹಾರಕ್ಕೆ ಪೆಟ್ಟು ಬೀಳಲಿದೆ ಎನ್ನುವ ದೂರಾಲೋಚನೆಯೇ ಈ ಕಾಮಗಾರಿಗಳ ವಿಳಂಬಕ್ಕೆ ಕಾರಣ ಎನ್ನುವ ಮಾತೂ ಕೇಳಿ ಬರುತ್ತಿವೆ.
ರಸ್ತೆ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಈ ವರೆಗೂ ಅಂದಾಜು ಪಟ್ಟಿ ಸಿದ್ಧಗೊಳಿಸಿಲ್ಲ. ಅಲ್ಲದೆ ರಸ್ತೆಯ ದುರಸ್ಥಿಗೆ ರಾಜ್ಯ ಸರಕಾರದ ಹಣದ ಬೇಡಿಕೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಘಾಟ್ ರಸ್ತೆಯ ದುರಸ್ಥಿ ಕಾಮಗಾರಿ ನಡೆದೇ ಇಲ್ಲ.
ಇದೀಗ ಮಳೆಗಾಲ ಸಮೀಪಿಸುತ್ತಿದ್ದಂತೆ ರಾಜ್ಯ ಲೋಕೋಪಯೋಗಿ ಇಲಾಖೆ ತರಾತುರಿಯಲ್ಲಿ ಅಂದಾಜು ಪಟ್ಟಿ ಸಿದ್ಧಪಡಿಸಿ ಮತ್ತೆ ಮಳೆಗಾಲದಲ್ಲಿ ಘಾಟ್ ರಸ್ತೆಯನ್ನು ಬಂದ್ ಮಾಡುವ ಲೆಕ್ಕಾಚಾರದಲ್ಲಿದೆ.
ಶಿರಾಡಿ ಘಾಟ್ 'ಬಂದ್' ಹಿಂದೆ ಭಾರೀ ಗುಮಾನಿ: ತುರ್ತಾಗಿ ಆಗಬೇಕಿದೆ 'ಸತ್ಯ ಶೋಧನೆ'
ಈ ರಸ್ತೆಯ ಅಭಿವೃದ್ಧಿಗಾಗಿ ನೂರಾರು ಕೋಟಿ ರೂಪಾಯಿಗಳನ್ನು ಪ್ರತಿವರ್ಷವೂ ಸರಕಾರವು ವಿನಿಯೋಗಿಸುತ್ತಿದ್ದರೂ, ಇಲ್ಲಿನ ಸಮಸ್ಯೆಗೆ ಮಾತ್ರ ಮುಕ್ತಿ ದೊರೆತಂತೆ ಕಾಣುತ್ತಿಲ್ಲ.
ಭೂಕುಸಿತಕ್ಕೆ ಶಾಶ್ವತ ಪರಿಹಾರ
ಶಿರಾಡಿಘಾಟ್ ರಸ್ತೆ ಮಳೆಗಾಲದ ಸಂದರ್ಭದಲ್ಲಿ ಸಂಪೂರ್ಣ ಹದಗೆಡುತ್ತಿರುವುದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಗಿನ ಯುಪಿಎ ಸರಕಾರ ಘಾಟ್ ನ ಒಟ್ಟು 26 ಕಿಲೋ ಮೀಟರ್ ರಸ್ತೆಗೆ ಸಂಪೂರ್ಣ ಕಾಂಕ್ರೀಟೀಕರಣ ನಡೆಸುವ ಯೋಜನೆಯನ್ನು ರೂಪಿಸಿತ್ತು. ಒಟ್ಟು 116 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲೂ ಯೋಜನೆ ತಯಾರಿಸಲಾಗಿತ್ತು. 2013 ರಲ್ಲಿ ಕೇಂದ್ರ ಸಚಿವ ಅಸ್ಕರ್ ಫೆರ್ನಾಂಡೀಸ್ ಈ ಯೋಜನೆಗೆ ಚಾಲನೆಯನ್ನೂ ನೀಡಿದ್ದರು.
2013ರಲ್ಲಿ ನಡೆದಿತ್ತು ಮೊದಲ ಹಂತದ ಕಾಮಗಾರಿ
ಈ ಸಂಬಂಧ ಎರಡು ಹಂತದಲ್ಲಿ ಕಾಮಗಾರಿ ನಡೆಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿತ್ತು. ಆ ಪ್ರಕಾರ 2013 ಜನವರಿಯಲ್ಲಿ ಮೊದಲ ಹಂತದ 13 ಕಿಲೋಮೀಟರ್ ಕಾಮಗಾರಿಯನ್ನು ಪೂರ್ಣಗೊಳಿಸಲು ಜನವರಿ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ ಘಾಟ್ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಮತ್ತೆ ಎರಡನೇ ಹಂತದ ಕಾಮಗಾರಿಯನ್ನು 2017-18 ಸಾಲಿನಲ್ಲಿ ಕೈಗೆತ್ತಿಕೊಳ್ಳಲಾಗಿತ್ತು.
ಡಿಸಿಗಳ ನಡುವೆ ಕಮ್ಯೂನಿಕೇಶನ್ ಗ್ಯಾಪ್: ಶಿರಾಡಿ ಘಾಟ್ ಪ್ರಯಾಣಿಕ ಸುಸ್ತೋಸುಸ್ತು
2018ರ ಫೆಬ್ರವರಿಯಿಂದ ಜೂನ್ ವರೆಗೆ ಬಂದ್ ಮಾಡಲಾಗಿತ್ತು
ಈ ಸಂಬಂಧ ಕಳೆದ ಫೆಬ್ರವರಿಯಿಂದ ಜೂನ್ ವರೆಗೆ ಮತ್ತೆ ಘಾಟ್ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಸಾರ್ವಜನಿಕರ ಒತ್ತಡದ ಮೇರೆಗೆ ಜೂನ್ ತಿಂಗಳಿನಲ್ಲಿ ಘಾಟ್ ರಸ್ತೆಯನ್ನು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಆದರೆ ಜೂನ್ ತಿಂಗಳಿನಲ್ಲಿ ಘಾಟ್ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಾಮಗಾರಿ ನಡೆದಿದ್ದ ಸುಮಾರು 12 ಕಡೆಗಳಲ್ಲಿ ಭೂಕುಸಿತ ಹಾಗೂ ಗುಡ್ಡ ಕುಸಿತ ಉಂಟಾದ ಪರಿಣಾಮ ಮತ್ತೆ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಯಿತು.
ಈ ನಡುವೆ ಅಡ್ಡಹೊಳೆಯಿಂದ ಗುಂಡ್ಯಾ ವರೆಗಿನ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗಿತ್ತು. ಮಳೆಗಾಲ ಮುಗಿದ ಬಳಿಕ ಘಾಟ್ ರಸ್ತೆಯನ್ನು ವಾಹನ ಸಂಚಾರಕ್ಕೆ ಯೋಗ್ಯವಾಗಿ ಮಾಡುವ ನಿಟ್ಟಿನಲ್ಲಿ ಸಣ್ಣಪುಟ್ಟ ಮಾರ್ಪಾಡುಗಳ ಮೂಲಕ ವಾಹನ ಸಂಚಾರಕ್ಕೆ ನವಂಬರ್ ತಿಂಗಳಿನಿಂದ ಮತ್ತೆ ಅವಕಾಶ ನೀಡಲಾಗಿತ್ತು. ಆದರೆ ಇದೀಗ ಶಿರಾಡಿಘಾಟ್ ರಸ್ತೆಯನ್ನು ಮತ್ತೆ ದುರಸ್ಥಿ ನೆಪದಲ್ಲಿ ಮಳೆಗಾಲದಲ್ಲಿ ಬಂದ್ ಮಾಡುವ ಯೋಜನೆಯನ್ನು ಲೋಕೋಪಯೋಗಿ ಇಲಾಖೆ ಹಮ್ಮಿಕೊಂಡಿದೆ.
ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿ ರಿಟೈನಿಂಗ್ ವಾಲ್ ಜೊತೆಗೆ ವಿವಿಧ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ ತಡೆಗೋಡೆ ನಿರ್ಮಿಸಲು ಕೇಂದ್ರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದರು. ಈ ಕಾಮಗಾರಿಗಳಿಗೆ ಸುಮಾರು 20 ರಿಂದ 25 ಕೋಟಿ ರೂಪಾಯಿಗಳ ಅಂದಾಜು ಪಟ್ಟಿಯನ್ನೂ ತಯಾರಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಇದಕ್ಕೆ ಒಪ್ಪಿಕೊಳ್ಳದ ಲೋಕೋಪಯೋಗಿ ಇಲಾಖೆ ಸಚಿವರು ಕೇಂದ್ರ 60 ಕೋಟಿ ರೂಪಾಯಿಗಳನ್ನು ಕೊಡುವಂತೆ ಪಟ್ಟು ಹಿಡಿದ ಪರಿಣಾಮ ದುರಸ್ಥಿ ಕಾಮಗಾರಿ ಈ ತನಕವೂ ಸ್ಥಗಿತಗೊಳ್ಳುವಂತಾಗಿದೆ.
ಮಳೆಗಾಲ: ರಸ್ತೆ ಕುಸಿಯುವ ಭೀತಿ
ಇದೀಗ ಮಳೆಗಾಲ ಹತ್ತಿರವಾಗುತ್ತಿದ್ದಂತೆ ರಸ್ತೆ ಕುಸಿಯುವ ಭೀತಿ ಇರುವ ಹಿನ್ನೆಲೆಯಲ್ಲಿ ಘಾಟ್ ರಸ್ತೆಯನ್ನು ಮುಚ್ಚಬೇಕು ಎನ್ನುವ ಕಾರಣಕ್ಕಾಗಿಯೇ ಲೋಕೋಪಯೋಗಿ ಇಲಾಖೆ ತರಾತುರಿಯಲ್ಲಿ ಅಂದಾಜು ಪಟ್ಟಿಯನ್ನು ತಯಾರಿಸಲು ಆರಂಭಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶಿರಾಡಿಘಾಟ್ ರಸ್ತೆ ಕಾಮಗಾರಿಗೆ ಬೇಕಾದ ಹಣವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದರೆ, ರಾಜ್ಯ ಲೋಕೋಪಯೋಗಿ ಇಲಾಖೆ ಈ ಇದರ ಕಾಮಗಾರಿಗಳನ್ನು ನಡೆಸುತ್ತದೆ. ಕೇಂದ್ರ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಮಳೆಗಾಲದಲ್ಲಿ ಸಂಭವಿಸಿದ ಶಿರಾಡಿಘಾಟ್ ರಸ್ತೆಯ ಹಾನಿಯನ್ನು ವೀಕ್ಷಿಸಿದ್ದು, ಗ್ಯಾಬಿಯನ್ ತಂತ್ರಜ್ಞಾನದ ಮೂಲಕ ತಡೆಗೋಡೆ ನಿರ್ಮಿಸಲೂ ಸೂಚಿಸಿದ್ದಾರೆ ಎನ್ನಲಾಗಿದೆ.
20-25 ಕೋಟಿ ರೂ ವೆಚ್ಚದ ಅಂದಾಜು ಪಟ್ಟಿ
ಈ ಕಾಮಗಾರಿ ನಡೆಸಲು ಸರಿ ಸುಮಾರು 20 ರಿಂದ 25 ಕೋಟಿ ರೂಪಾಯಿಗಳ ಅಂದಾಜು ಪಟ್ಟಿಯನ್ನು ತಯಾರಿಸುವಂತೆಯೂ ರಾಜ್ಯ ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಆದರೆ ಕೇಂದ್ರದ ಅಧಿಕಾರಿಗಳ ಸೂಚನೆಯನ್ನು ರಾಜ್ಯ ಸರಕಾರ ಒಪ್ಪಿಕೊಂಡಿಲ್ಲ. ಕನಿಷ್ಟ 60 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕೆಂದು ಲೋಕೋಪಯೋಗಿ ಇಲಾಖೆಯ ಸಚಿವರೇ ಕೇಂದ್ರವನ್ನು ಒತ್ತಾಯಿಸಿದ್ದಾರೆ. ಈ ನಡುವೆ ಎರಡೂ ಕಡೆಗಳಲ್ಲಿ ಗೊಂದಲ ಉಂಟಾದ ಕಾರಣ ಮಳೆಗಾಲ ಮುಗಿದು ಒಂದು ವರ್ಷವಾದರೂ ದುರಸ್ತಿ ಕಾಮಗಾರಿಯನ್ನು ನಡೆಸಲಾಗಿಲ್ಲ.
ಮಳೆಗಾಲಕ್ಕೂ ಮೊದಲು ಟೆಂಡರ್
ಇದೀಗ ಮತ್ತೇ ಮಳೆಗಾಲ ಪ್ರಾರಂಭವಾಗುವ ಹಂತದಲ್ಲಿ ತರಾತುರಿಯಲ್ಲಿ ಅಂದಾಜು ವೆಚ್ಚ ತಯಾರಿಸಿ, ಟೆಂಟರ್ ಕರೆಯುವ ಪ್ರಕ್ರಿಯೆಗೆ ರಾಜ್ಯ ಸರಕಾರ ತೀರ್ಮಾನಿಸಿದೆ ಎನ್ನುವ ಮಾಹಿತಿ ಲೋಕೋಪಯೋಗಿ ಇಲಾಖೆಯ ಮೂಲಗಳು ತಿಳಿಸಿವೆ . ರಾಜ್ಯ ಸರಕಾರದ ಈ ನಿರ್ಧಾರಕ್ಕೆ ಇದೀಗ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ. ಕಾಮಗಾರಿ ಆರಂಭಿಸುವುದಾದರೆ ಮಳೆಗಾಲದ ಬಳಿಕವೇ ಆರಂಭಿಸಬೇಕು ಎನ್ನುವ ಒತ್ತಾಯವ ಕೇಳಿಬರುತ್ತಿದೆ.