ಶಿರಾಡಿ ಘಾಟ್ ಬಳಿ ಭೂಕುಸಿತ; ಮಂಗಳೂರು-ಬೆಂಗಳೂರು ಹೆದ್ದಾರಿ ಬಂದ್; ಬದಲಿ ಮಾರ್ಗ ಇಲ್ಲಿದೆ
ಮಂಗಳೂರು, ಜುಲೈ 22: ಮಂಗಳೂರು- ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-75ರ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಎಂಬಲ್ಲಿ ಭೂಕುಸಿತವಾಗಿದೆ. ಇದರಿಂದ ಶಿರಾಡಿ ಘಾಟ್ ಮುಖಾಂತರ ಸಂಚರಿಸುವ ಎಲ್ಲಾ ವಾಹನಗಳಿಗೆ ಶಿರಾಡಿ ಆರಂಭದ ಗುಂಡ್ಯ ಪ್ರದೇಶದಲ್ಲಿ ತಡೆಹಿಡಿಯಲಾಗಿದೆ.
Recommended Video
ಶಿರಾಡಿ ಘಾಟ್ನ ನಾಲ್ಕು ಕಡೆಗಳಲ್ಲಿ ಗುಡ್ಡ ಕುಸಿತವಾಗಿದ್ದರಿಂದ, ಇನ್ನೂ ನಾಲ್ಕು ದಿನಗಳ ಕಾಲ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ರಸ್ತೆ ಮುಚ್ಚಲಿದೆ. ದೋಣಿಗಲ್ನಲ್ಲಿ ಭಾರೀ ಪ್ರಮಾಣದಲ್ಲಿ ಹೆದ್ದಾರಿ ಕುಸಿತವಾಗಿದ್ದು, ಬೆಂಗಳೂರು ಸಂಪರ್ಕಿಸುವ ಜನರು ಬದಲಿ ಮಾರ್ಗವನ್ನು ಸೂಚಿಸುವಂತೆ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಹಾಸನ ಪೊಲೀಸ್ ಇಲಾಖೆ ಜನರಿಗೆ ಸೂಚಿಸಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ವಾಹನಗಳು ಚಾರ್ಮಾಡಿ ಘಾಟ್ ಮುಖಾಂತರ ಸಂಚಾರ ಮಾಡುವುದಕ್ಕೆ ಸೂಚಿಸಲಾಗಿದೆ. ಮಂಗಳೂರು ಭಾಗದಿಂದ ಬೆಂಗಳೂರು ಭಾಗಕ್ಕೆ ಹೋಗುವವರು ಚಾರ್ಮಾಡಿ, ಕೊಟ್ಟಿಗೆಹಾರ, ಮೂಡಿಗೆರೆ, ಹಾನ್ಬಾಲ್, ಬೇಲೂರು, ಹಾಸನ, ಬೆಂಗಳೂರು ಮಾರ್ಗವಾಗಿ ಸಂಚಾರ ಮಾಡುವುದಕ್ಕೆ ಪೊಲೀಸ್ ಇಲಾಖೆ ನಿರ್ದೇಶನ ನೀಡಿದೆ.
ಅಲ್ಲದೇ ಘನ ವಾಹನಗಳು ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಮೂಲಕವೂ ಬೆಂಗಳೂರಿಗೆ ಸಂಪರ್ಕಿಸಲು ಸೂಚಿಸಿದೆ. ಹೆದ್ದಾರಿ ಕುಸಿತದ ಮಾಹಿತಿ ಇಲ್ಲದೇ ಹಲವು ವಾಹನಗಳ ಶಿರಾಡಿ ರಸ್ತೆಯಲ್ಲಿ ಸಂಚರಿಸಿದ್ದು, ಕೆಲವು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.