ಮಂಗಳೂರಿನಲ್ಲಿ ಹೈಪ್ರೊಫೈಲ್ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿ ವಕೀಲ ಎಸ್ಕೇಪ್
ಮಂಗಳೂರು, ಅಕ್ಟೋಬರ್ 19: ಮಂಗಳೂರಿನ ಪ್ರಖ್ಯಾತ ವಕೀಲ, ಹನ್ನೆರಡು ಬ್ಯಾಂಕ್ಗಳ ಕಾನೂನು ಸಲಹೆಗಾರ ಕೆ.ಎಸ್.ಎನ್ ರಾಜೇಶ್ ಭಟ್ ಮೇಲೆ ಗಂಭೀರ ಪ್ರಕರಣ ದಾಖಲಾಗಿದೆ. ತರಬೇತಿಗೆಂದು ಬಂದ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಮೇಲೆ ರಾಜೇಶ್ ಭಟ್ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ವಿದ್ಯಾರ್ಥಿನಿ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ರಾಜೇಶ್ ಭಟ್ ಸಂತ್ರಸ್ಥ ವಿದ್ಯಾರ್ಥಿನಿ ಜೊತೆ ಮಾತನಾಡಿರುವ 11 ನಿಮಿಷಗಳ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿ ವಕೀಲನ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿ ವಕೀಲ ರಾಜೇಶ್ ಭಟ್ ಲೋಕಾಯುಕ್ತ ಮತ್ತು ಎಸಿಬಿ ಸ್ಪೆಷಲ್ ಪಿಪಿ (ಪಬ್ಲಿಕ್ ಪ್ರಾಸಿಕ್ಯೂಟರ್) ಆಗಿದ್ದು, ಮಂಗಳೂರಿನ ಕರಂಗಲ್ಪಾಡಿಯಲ್ಲಿ ಐಷಾರಾಮಿ ಕಚೇರಿಯನ್ನು ಹೊಂದಿದ್ದಾರೆ. ವಕೀಲ ರಾಜೇಶ್ ಕಚೇರಿಯಲ್ಲಿ ಸ್ಥಳೀಯ ಲಾ ಕಾಲೇಜಿನ ಉತ್ತರ ಪ್ರದೇಶ ಮೂಲದ ವಿದ್ಯಾರ್ಥಿನಿ ಕಳೆದ ಒಂದು ತಿಂಗಳಿನಿಂದ ತರಬೇತಿ ಪಡೆಯುತ್ತಿದ್ದರು.
ಆದರೆ, ವಿದ್ಯಾರ್ಥಿನಿ ಸೆಪ್ಟೆಂಬರ್ 25ರಂದು ವಕೀಲ ಕಚೇರಿಯಲ್ಲಿ ರಾಜೇಶ್ ಭಟ್ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ವಿದ್ಯಾರ್ಥಿನಿ ರಾಜೇಶ್ ಭಟ್ಗೆ ಕರೆ ಮಾಡಿ, ನಾಳೆಯಿಂದ ಕಚೇರಿಗೆ ಬರುವುದಿಲ್ಲ ಅಂತಾ ಹೇಳಿದ್ದಾಳೆ. ಈ ವೇಳೆ ರಾಜೇಶ್ ಇನ್ಮುಂದೆ ಈ ತರ ಮಾಡುವುದಿಲ್ಲ ಅಂತಾ ಪರಿಪರಿಯಾಗಿ ಕೇಳಿಕೊಂಡಿದ್ದು, ವಿದ್ಯಾರ್ಥಿನಿ ಜೊತೆ ರಾಜೇಶ್ ಭಟ್ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಆಡಿಯೋ ವೈರಲ್ ಆಗುತ್ತಿದ್ದಂತೆಯೇ ಎಬಿವಿಪಿ ಆಡಿಯೋ ಬಗ್ಗೆ ತನಿಖೆ ಮಾಡುವಂತೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ಗೆ ಮನವಿ ಮಾಡಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿಯನ್ನು ವಿಚಾರಿಸಿದಾಗ ಆರೋಪಿ ವಕೀಲ ದೌರ್ಜನ್ಯ ಎಸಗಿರುವ ಬಗ್ಗೆ ವಿದ್ಯಾರ್ಥಿನಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಈ ಬಗ್ಗೆ ಮಂಗಳೂರಿನ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ವಿದ್ಯಾರ್ಥಿನಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
"ಕಚೇರಿಯಲ್ಲಿ ಎಲ್ಲರೂ ಹೋಗುವವರೆಗೆ ಇರುವುದಕ್ಕೆ ಹೇಳಿ, ಎಲ್ಲರೂ ಹೋದ ಬಳಿಕ, ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ" ಎಂದು ರಾಜೇಶ್ ಭಟ್ ವಿರುದ್ಧ ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ವಿದ್ಯಾರ್ಥಿನಿ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ.
ಸುಪ್ರಸಿದ್ಧ ವಕೀಲನ ವಿರುದ್ಧ ಗಂಭೀರ ಆರೋಪ ಕೇಳಿಬರುತ್ತಿದ್ದಂತೆಯೇ ಆರೋಪಿ ವಕೀಲ ನಾಪತ್ತೆಯಾಗಿದ್ದಾನೆ. ಆರೋಪಿ ಪತ್ತೆಗೆ ಎಸಿಪಿ ರಂಜಿತ್ ಬಂಡಾರು ನೇತೃತ್ವದಲ್ಲಿ ಎರಡು ಪೊಲೀಸ್ ತಂಡ ರಚಿಸಲಾಗಿದೆ.
ವಕೀಲನ ಕಾಮ ಪುರಾಣ ಬಹಿರಂಗವಾಗುತ್ತಿದ್ದಂತೆಯೇ ಆರೋಪಿ ರಾಜೇಶ್ ಭಟ್, ರಹಸ್ಯ ಸ್ಥಳದಿಂದ ಸೆಲ್ಫೀ ವಿಡಿಯೋ ಮೂಲಕ ಹೇಳಿಕೆ ನೀಡಿದ್ದಾನೆ. ಈ ಪ್ರಕರಣದಲ್ಲಿ ನನ್ನದೇನೂ ಪಾತ್ರವಿಲ್ಲ. ಇಬ್ಬರು ಯುವತಿಯರು ಸೇರಿ ಫೇಕ್ ಆಡಿಯೋ ಮಾಡಿ ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾನೆ.
ಇನ್ನು ರಾಜೇಶ್ ಭಟ್ ಕಚೇರಿಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಭೇಟಿ ನೀಡಿದ್ದಾರೆ. ಆದರೆ ರಾಜೇಶ್ ಭಟ್ ಕಚೇರಿಗೆ ಬೀಗ ಹಾಕಲಾಗಿದ್ದು, ಕಚೇರಿಯ ಎಲ್ಲಾ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡುವಂತೆ ಕಮೀಷನರ್ ಎನ್. ಶಶಿಕುಮಾರ್ ಆದೇಶ ಮಾಡಿದ್ದಾರೆ.
ಒಟ್ಟಿನಲ್ಲಿ ತರಬೇತಿಗೆ ಅಂತಾ ಬಂದಿದ್ದ ವಿದ್ಯಾರ್ಥಿನಿಗೆ ಕಾನೂನು ಪಾಠ ಹೇಳಿ ಕೊಡಬೇಕಾಗಿದ್ದ ವಕೀಲ, ಲೈಂಗಿಕ ದೌರ್ಜನ್ಯ ಎಸಗಿರುವುದು ದುರಂತವಾಗಿದೆ. ಬೇರೆ ಲೈಂಗಿಕ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕಾದ ವಕೀಲನೇ ನೀಚ ಕೃತ್ಯ ಎಸಗಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.