ದಕ್ಷಿಣ ಕನ್ನಡದಲ್ಲಿ ಮಳೆ ಅಬ್ಬರ; ತಗ್ಗು ಪ್ರದೇಶ ಜಲಾವೃತ
ಮಂಗಳೂರು, ಜೂನ್ 14; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ತೀವ್ರವಾಗಿದೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿದೆ.
ಮಂಗಳೂರು ನಗರದ ಹಲವು ಭಾಗಗಳು ನೀರಿನಿಂದ ಆವೃತವಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ನಡೆಯುತ್ತಿರುವ ಕಾರಣ ನೀರು ಹರಿದು ಹೋಗಲು ಸ್ಥಳಾವಕಾಶ ಇಲ್ಲದೇ ರಸ್ತೆಯಲ್ಲೇ ನೀರು ಹರಿದು ಮನೆಗಳಿಗೆ ನುಗ್ಗಿದೆ.
ಕರ್ನಾಟಕ ಮುಂಗಾರು: ಜೂನ್ 17ರವರೆಗೂ 7 ಜಿಲ್ಲೆಗಳಲ್ಲಿ ಭಾರಿ ಮಳೆ
ಮಂಗಳೂರು ನಗರದ ಕಾರ್ ಸ್ಟ್ರೀಟ್, ಮಹಮ್ಮಾಯಿ ರಸ್ತೆ, ಪಾಂಡೇಶ್ವರದ ಶುಭಾಶ್ ನಗರ ಮುಂತಾದ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇದರಿಂದಾಗು ಜನರು ತೊಂದರೆ ಅನುಭವಿಸುವಂತಾಗಿದೆ. ಸೋಮವಾರ ಮುಂಜಾನೆಯಿಂದಲೇ ಮಳೆ ಎಡೆ ಬಿಡದೆ ಸುರಿದಿದ್ದು, ಮಂಗಳೂರು ನಗರ ಭಾಗದ ರಸ್ತೆಗಳು ಭಾಗಶಃ ಜಲಾವೃತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಅಬ್ಬರ; ದಿನವಿಡೀ ಧಾರಾಕಾರ ಮಳೆ
ಮಂಗಳೂರು ನಗರದ ಕೆಲವು ಕಡೆ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಮಳೆ ನೀರು ಹರಿದುಹೋಗುವ ಚರಂಡಿಗಳಿಗೆ ತಡೆವುಂಟಾಗಿದೆ. ಈ ಹಿನ್ನಲೆಯಲ್ಲಿ ಮಳೆ ನೀರೆಲ್ಲಾ ರಸ್ತೆಯ ಮೇಲೆಯೇ ಹರಿದು ಹೋಗಿ ಮನೆಗಳಿಗೆ ನುಗ್ಗಿದೆ.
ಮಂಗಳೂರು ಮಹಾನಗರ ಪಾಲಿಕೆಯ ಅವೈಜ್ಞಾನಿಕ ಕಾಮಗಾರಿಯಿಂದ ಮೊದಲ ಮಳೆಯಲ್ಲೇ ತೊಂದರೆ ಅನುಭವಿಸುವಂತಾಗಿದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಪಾಂಡೇಶ್ವರ ಶುಭಾಶ್ ನಗರದಲ್ಲೂ ಮನೆಗಳಿಗೆ ನೀರು ನುಗ್ಗಿದೆ. ಮಳೆ ನೀರಿನಲ್ಲಿ ಹಾವುಗಳು ತೇಲಿಬಂದಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.
ಭಾರೀ ಮಳೆಗೆ ರಸ್ತೆಗೆ ಮರ ಬಿದ್ದಿರುವ ಘಟನೆ ಪುತ್ತೂರಿನ ಶೇಡಿಯಾಪು ಎಂಬಲ್ಲಿ ನಡೆದಿದೆ. ಮರ ರಸ್ತೆಗೆ ಅಡ್ಡಲಾಗಿ ಬಿದ್ದಿರುವುದರಿಂದ ಪುತ್ತೂರು-ಉಪ್ಪಿನಂಗಡಿ ರಸ್ತೆ ಸಂಪರ್ಕ ಕಡಿತವಾಗಿತ್ತು, ಮರ ತೆರೆವು ಕಾರ್ಯಾಚರಣೆಗೆ ಮಳೆಯ ಅಡ್ಡಿ ಪಡಿಸಿದ ಹಿನ್ನಲೆಯಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೂ ತಡೆಯುಂಟಾಗಿತ್ತು.
ಮಳೆ ಬಿಡುವು ನೀಡಿದ ಬಳಿಕ ಸ್ಥಳೀಯರು ಮತ್ತು ಮೆಸ್ಕಾಂ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ಮಾಡಿದ್ದಾರೆ. ಇನ್ನು ಎರಡು ದಿನ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು ಜನರು ಎಚ್ಚರ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.