ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಬೇಡಿಕೆ!
ಮಂಗಳೂರು, ನವೆಂಬರ್ 18 : ಮರಾಠ ಅಭಿವೃದ್ಧಿ ಪ್ರಾಧಿಕಾರ ಮತ್ತು ವೀರಶೈವ- ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಈಗ ಕ್ರೈಸ್ತ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಎಂದು ಬೇಡಿಕೆ ಇಟ್ಟಿದೆ.
ಬುಧವಾರ ಮಂಗಳೂರಿನಲ್ಲಿ ಮಾತನಾಡಿದ ಮಾಜಿ ಎಂಎಲ್ಸಿ ಮತ್ತು ಕಾಂಗ್ರೆಸ್ ನಾಯಕ ಐವಾನ್ ಡಿಸೋಜಾ ಸರ್ಕಾರವನ್ನು ಈ ಕುರಿತು ಒತ್ತಾಯಿಸಿದ್ದಾರೆ. ಮತ್ತೊಂದು ಕಡೆ ಒಕ್ಕಲಿಗ ಸಮುದಾಯದವರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.
ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಅಚ್ಚರಿ ತಂದಿದೆ
"ಕ್ರೈಸ್ತರಲ್ಲಿಯೂ ರಾಜ್ಯದಲ್ಲಿ ಸಾಕಷ್ಟು ಬಡವರು ಇದ್ದಾರೆ, ಕ್ರೈಸ್ತ ಅಭಿವೃದ್ಧಿ ನಿಗಮದ ಸ್ಥಾಪನೆಗೆ ನಮ್ಮ ಒತ್ತಾಯವಿತ್ತು. ಆದರೆ, ಸರ್ಕಾರ ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸಲ್ಲ" ಎಂದು ಐವಾನ್ ಡಿಸೋಜಾ ಆರೋಪಿಸಿದರು.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಖಂಡಿಸಿ ಕರ್ನಾಟಕ ಬಂದ್ ಕರೆ
"ಕ್ರೈಸ್ತ್ರ ಸಮುದಾಯದವರ ಮೌನ ಅವರ ವೀಕ್ನೆಸ್ ಅಲ್ಲ. ರಾಜ್ಯದ ಕ್ರೈಸ್ತರನ್ನು ಹೋರಾಟಕ್ಕೆ ಧಮುಕುವಂತೆ ಮಾಡುತ್ತೇವೆ. ಜನರು ಬೀದಿಗೆ ಬಂದರೆ ಸರ್ಕಾರವೇ ನೇರ ಹೊಣೆ" ಎಂದು ಐವಾನ್ ಡಿಸೋಜಾ ಎಚ್ಚರಿಕೆ ನೀಡಿದರು.
ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಒಕ್ಕಲಿಗ ಸಮುದಾಯದಿಂದ ಬೇಡಿಕೆ!
"2008ರಲ್ಲಿ ಚರ್ಚ್ ದಾಳಿಯಾದಾಗಲೂ ತಾಳ್ಮೆ ವಹಿಸಿದ್ದೇವೆ. ಬಿಷನ್ ಸನ್ಮಾನ ಸ್ವೀಕರಿಸಿದ್ದ ಯಡಿಯೂರಪ್ಪ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅನುಮೋದನೆ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ, ಅದನ್ನು ರದ್ದು ಮಾಡಿದ್ದಾರೆ" ಎಂದು ಆರೋಪಿಸಿದರು.
"ಸರ್ಕಾರ ಕ್ರೈಸ್ತರಿಗಾಗಿ ಚಿಕ್ಕ ಕಾಸು ಸಹ ಖರ್ಚು ಮಾಡಿಲ್ಲ. ತಕ್ಷಣ ಮುಖ್ಯಮಂತ್ರಿಗಳು ಇದಕ್ಕೆ ಉತ್ತರ ಕೊಡಬೇಕು. ನಿಗಮಕ್ಕಾಗಿ ಮೀಸಲಾಗಿಟ್ಟಿದ್ದ 55 ಕೋಟಿ ಏನು ಮಾಡಿದಿರಿ?" ಎಂದು ಐವಾನ್ ಡಿಸೋಜಾ ಪ್ರಶ್ನಿಸಿದರು.
ಸಿದ್ದಲಿಂಗ ಶ್ರೀಗಳು ಹೇಳಿದ್ದರು; ವೀರಶೈವ ಲಿಂಗಾಯತ ಪ್ರಾಧಿಕಾರ ರಚನೆ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ್ದ ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, "ಜಾತಿಗೊಂದು ಪ್ರಾಧಿಕಾರ ರಚನೆ ಮಾಡುತ್ತಾ ಹೋದರೆ ಅದಕ್ಕೆ ಮಿತಿಯೇ ಇರುವುದಿಲ್ಲ. ಇದರ ಬದಲು ಎಲ್ಲಾ ಸಮಾಜದಲ್ಲಿ ಹಿಂದುಳಿದವರು, ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ. ಅಂಥವರಿಗೆ ಹೆಚ್ಚು ಒತ್ತು ಕೊಡುವ ಕೆಲಸ ಮಾಡಿದರೆ ಒಳ್ಳೆಯದು" ಎಂದು ಹೇಳಿದ್ದರು.