ಯಕ್ಷರಂಗದ ಸಿಡಿಲಮರಿ, ಹಿರಿಯ ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ಭಂಡಾರಿ ಇನ್ನಿಲ್ಲ!
ಮಂಗಳೂರು, ಫೆಬ್ರವರಿ 19: ಯಕ್ಷರಂಗದ ಧ್ರುವತಾರೆ, ಗಣಗಳ ರಾಜ, ಸಿಡಿಲಮರಿ ಎಂದೇ ಖ್ಯಾತರಾದ ಪುತ್ತೂರು ಶ್ರೀಧರ ಭಂಡಾರಿ ನಿಧನರಾಗಿದ್ದಾರೆ. ತೆಂಕು ತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಸುದೀರ್ಘ ಆರು ದಶಕಗಳ ಕಾಲ ಸೇವೆ ಸಲ್ಲಿಸಿ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮತ್ತು ಪ್ರಶಸ್ತಿಗಳನ್ನು ಗಳಿಸಿದ್ದ ಶ್ರೀಧರ ಭಂಡಾರಿ ಅವರು ಶುಕ್ರವಾರ (19) ಇಹಲೋಕ ತ್ಯಜಿಸಿದರು.
ಶ್ರೀಧರ ಭಂಡಾರಿ ಅವರಿಗೆ 73 ವರ್ಷ ಪ್ರಾಯವಾಗಿತ್ತು. ಪತ್ನಿ ಉಷಾ ಭಂಡಾರಿ, ಪುತ್ರಿಯರಾದ ಕೋಕಿಲ, ಶಾಂತಲಾ, ಅನಿಲ ಹಾಗೂ ಪುತ್ರ ದೇವಿಪ್ರಕಾಶ್ ಅವರ ಕುಟುಂಬ ಇವರದಾಗಿದ್ದು, ಲಕ್ಷಾಂತರ ಸಂಖ್ಯೆಯ ಯಕ್ಷಾಭಿಮಾನಿಗಳನ್ನು ಹೊಂದಿದ್ದಾರೆ.
ಮಂಗಳೂರು; ನ್ಯಾಪ್ ಕಿನ್ನಲ್ಲಿ ಚಿನ್ನ, ಇಬ್ಬರು ಮಹಿಳೆಯರ ಬಂಧನ
1945ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬನ್ನೂರಿನಲ್ಲಿ ಶೀನಪ್ಪ ಭಂಡಾರಿ ಮತ್ತು ಸುಂದರಿ ದಂಪತಿಗಳ ಮಗನಾಗಿ ಜನಿಸಿದ ಶ್ರೀಧರ ಭಂಡಾರಿ ಅವರು, ತಮ್ಮ 12ನೇ ವಯಸ್ಸಿನಲ್ಲೇ ಯಕ್ಷಗಾನ ಕಲಿತು, 15ನೇ ವಯಸ್ಸಿನಲ್ಲಿ ರಂಗಸ್ಥಳ ಏರಿದ್ದರು. ಅಜ್ಜನಿಂದ ಪ್ರಭಾವಿತರಾಗಿ ಯಕ್ಷಗಾನದತ್ತ ಆಕರ್ಷಿತರಾದ ಇವರು, ಕುರಿಯ ವಿಠಲ ಶಾಸ್ತ್ರಿ ಅವರಿಂದ ಶಾಸ್ತ್ರಬದ್ಧವಾಗಿ ಯಕ್ಷಗಾನ ಕಲಿತರು.
ಸುಬ್ರಹ್ಮಣ್ಯ ಮೇಳ, ಬಾಳಂಬೆಟ್ಟು ಮೇಳ, ಪುತ್ತೂರು ಮೇಳಗಳಲ್ಲಿ ಸೇವೆ ಸಲ್ಲಿಸಿದ ಶ್ರೀಧರ ಭಂಡಾರಿ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ಚರ ಮೇಳದಲ್ಲಿ ಸುದೀರ್ಘ 45 ವರ್ಷಗಳ ಕಾಲ ಪ್ರಮುಖ ವೇಷಧಾರಿಯಾಗಿ ಕಂಗೊಳಿಸಿ ರಂಗಸ್ಥಳದ ರಾಜನಾಗಿ ಮೆರೆದರು. ಯಕ್ಷನಾಟ್ಯದ ಜತೆಗೆ ಭರತನಾಟ್ಯವನ್ನೂ ಕಲಿತು ಮೈಗೂಡಿಸಿಕೊಂಡಿದ್ದರು.
ಯಕ್ಷಗಾನದ ಸಿಡಿಲಮರಿ, ರಂಗಸ್ಥಳದ ರಾಜ, ಯಕ್ಷನಾಟ್ಯ ಚತುರ, ಶತ ಧಿಗಿಣಗಳ ರಾಜ ಇತ್ಯಾದಿ ಬಿರುದುಗಳನ್ನು ಮುಡಿಗೇರಿಸಿಕೊಂಡಿದ್ದ ಇವರನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದಿದ್ದವು. ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟಗಳಲ್ಲಿ 150ಕ್ಕಿಂತಲೂ ಹೆಚ್ಚಿನ ಪುರಸ್ಕಾರಗಳನ್ನು ಇವರು ಪಡೆದಿದ್ದರು.
ಅಭಿಮನ್ಯು, ಬಬ್ರುವಾಹನ, ಶ್ರೀಕೃಷ್ಣ, ಗಣಮಣಿ, ಶ್ರೀನಿವಾಸ, ಪರಶುರಾಮ ಸೇರಿದಂತೆ ಪುರಾಣದ ಪ್ರಸಿದ್ಧ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಪುತ್ತೂರು ಶ್ರೀಧರ ಭಂಡಾರಿ ಅವರು, ತಮ್ಮ 62ನೇ ವಯಸ್ಸಿನಲ್ಲಿ ಝೀ ಚಾನೆಲ್ ನ ಶಹಬ್ಬಾಸ್ ಇಂಡಿಯಾ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಕೇವಲ ಐದು ನಿಮಿಷದಲ್ಲಿ 148 ಗಣಗಳನ್ನು ಪ್ರದರ್ಶಿಸುವ ಮೂಲಕ ಶತ ಗಣಗಳ ವೀರ ಎಂಬ ವಿಶೇಷಣಕ್ಕೆ ಮತ್ತಷ್ಟು ಮೆರುಗು ನೀಡಿದ್ದರು.