ಕರಾವಳಿಯ ಮೀನುಗಾರರಿಗೆ ಆಳ ಸಮುದ್ರ ಮೀನುಗಾರಿಕೆಗೆ ತೆರಳದಂತೆ ಸೂಚನೆ
ಮಂಗಳೂರು, ಫೆಬ್ರವರಿ 28: ಕರಾವಳಿಯ ಮೀನುಗಾರರಿಗೆ ಆಳ ಸಮುದ್ರ ಮೀನುಗಾರಿಕೆಗೆ ತೆರಳದಂತೆ ಹಾಗೂ ತೆರಳಿದವರು ಎಚ್ಚರಿಕೆ ವಹಿಸುವಂತೆ ಸಂದೇಶ ರವಾನಿಸಲಾಗಿದೆ.
ಭಾರತ - ಪಾಕಿಸ್ತಾನದ ಮಧ್ಯೆ ಯುದ್ಧ ಕಾರ್ಮೋಡ ಕವಿಯತೊಡಗಿದ ಹಿನ್ನೆಲೆಯಲ್ಲಿ ಅದರ ಬಿಸಿ ರಾಜ್ಯದ ಕರಾವಳಿಗೂ ತಟ್ಟಿದೆ. ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಸಮುದ್ರದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ರವಾನಿಸಲಾಗಿದೆ.
ಪೈಲಟ್ ಅಭಿನಂದನ್ ಬಿಡುಗಡೆಗೆ ಪಾಕ್ ರೆಡಿ, ಆದರೆ....
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರಿಗೆ ಆಳ ಸಮುದ್ರ ಮೀನುಗಾರಿಕೆ ತೆರಳದಂತೆ ಕೋಸ್ಟ್ ಗಾರ್ಡ್ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಈಗಾಗಲೇ ಆಳ ಸಮುದ್ರ ಮೀನುಗಾರಿಕೆಗೆ ತೆರಳಿರುವ ಮೀನುಗಾರರರು ಎಚ್ಚರಿಕೆಯಿಂದ ಇರುವಂತೆ ಹಾಗೂ ಈ ಕೂಡಲೇ ಹಿಂದಿರುಗುವಂತೆ ಮೀನುಗಾರಿಕಾ ಇಲಾಖೆ ಮತ್ತು ಭಾರತೀಯ ತಟರಕ್ಷಣಾ ಪಡೆ ಸೂಚನೆ ರವಾನಿಸಿದೆ.
ಪಾಕಿಸ್ತಾನ ಕೂಡ ದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕರಾವಳಿಯುದ್ದಕ್ಕೂ ಹೈ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣಕನ್ನಡ , ಉಡುಪಿ , ಉತ್ತರ ಕನ್ನಡ ಜಿಲ್ಲೆಯ ಕಡಲ ತಡಿಯಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗುತ್ತಿದೆ.
ಪಾಕ್ ಸೇನೆ ಅಭಿನಂದನ್ ರ ವಶಕ್ಕೆ ಪಡೆಯುವ ಮುನ್ನ ನಡೆದಿದ್ದೇನು?
ಅದರಲ್ಲೂ ಕಾರವಾರದ ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ ಫಸ್ಟ್ ಸ್ಟೇಜ್ ಆಫ್ ಹೈ ಅಲರ್ಟ್ ಘೋಷಿಸಲಾಗಿದೆ. ಉಗ್ರರು ಸ್ಲಿಪರ್ ಸೆಲ್ ಗಳನ್ನು ಬಳಸಿ ಭಾರತದ ಮೇಲೆ ಪ್ರತಿದಾಳಿ ನಡೆಸಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ಕರಾವಳಿಯುದ್ದಕ್ಕೂ ಹದ್ದಿನ ಕಣ್ಣು ಇಡಲಾಗಿದೆ.
ಒನ್ಇಂಡಿಯಾ exclusive : ವಾಯುಸೇನೆ ಬಳಕೆ ಹಿಂದಿನ ಕಾರಣ ಏನು?
ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆಯ ಹಡಗುಗಳು, ಕೋಸ್ಟ್ಗಾರ್ಡ್ಸ್ ಆಳ ಸಮುದ್ರದಲ್ಲಿ ಗಸ್ತು ತಿರುಗುತ್ತಿವೆ. ಕೋಸ್ಟಲ್ ಪೊಲೀಸ್ ಸೇರಿದಂತೆ ಪೊಲೀಸರು ಸಮುದ್ರದಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.