ದಕ್ಷಿಣ ಕನ್ನಡ: ಕೊರೊನಾ ಪೀಡಿತ ಮಹಿಳೆಯ ಅಂತಿಮ ಸಂಸ್ಕಾರ ನಡೆಸಲು ಬಿಡದೇ 'ಸಂಸ್ಕಾರ' ಮರೆತ ಜನ
ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲೂಕು ವ್ಯಾಪ್ತಿಯ ಕಸಬಾ ವ್ಯಾಪ್ತಿಯಲ್ಲಿ ಒಂದು ವಾರದ ಅಂತರದಲ್ಲಿ, ಒಂದೇ ಕುಟುಂಬದ ಇಬ್ಬರು ಮಹಿಳೆಯರು (ಅತ್ತೆ, ಸೊಸೆ) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಕೊರೊನಾ ಸೋಂಕಿಗೆ ಬಲಿಯಾದರು ಎನ್ನುವುದಕ್ಕಿಂತ ಹೆಚ್ಚು ಸುದ್ದಿಯಾದದ್ದು, ಮೃತರ ಅಂತಿಮ ಸಂಸ್ಕಾರಕ್ಕೆ ಸ್ಥಳೀಯರು ಮತ್ತು ಜನಪ್ರತಿನಿಧಿಗಳು ವಿರೋಧ ಮಾಡಿದ್ದು. ಹುಟ್ಟಿದ ಮನುಷ್ಯ ಸಾಯಲೇಬೇಕು ಎನ್ನುವ ವಿಧಿನಿಯಮವನ್ನು, ದಕ್ಷಿಣ ಕನ್ನಡದ ಜನತೆ (ಅಂತಿಮ ಸಂಸ್ಕಾರಕ್ಕೆ ವಿರೋಧ ಪಡಿಸಿದವರು) ಅರಿಯದೇ ಹೋಗಿದ್ದು, ಭಾರೀ ಟೀಕೆಗೆ ಗುರಿಯಾಯಿತು.
ಕಳೆದ ಭಾನುವಾರ (ಏ 19) ಮೃತ ಮಹಿಳೆಯ ಶವಸಂಸ್ಕಾರವನ್ನು ಮಂಗಳೂರಿನಲ್ಲಿ ನಡೆಸಿದಾಗ ಸ್ಥಳೀಯವಾಗಿ ಜನರು ಪ್ರತಿಭಟಿಸಿದ್ದರಿಂದ, ಶುಕ್ರವಾರ ಮೃತ ಪಟ್ಟ ಮಹಿಳೆಯ ಶವ ಸಂಸ್ಕಾರ ನಡೆಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿತು.
ಕೊರೊನಾ ಬಂದವರನ್ನು ಅಸಹ್ಯದಿಂದ ಕಾಣಬೇಡಿ: ಡಾ.ಸುಧಾಕರ್
ನಿನ್ನೆ ಮೃತ ಪಟ್ಟ ಮಹಿಳೆಯ ಅಂತಿಮ ಸಂಸ್ಕಾರವನ್ನು ಪಚ್ಚನಾಡಿ ಎನ್ನುವ ಪ್ರದೇಶದಲ್ಲಿ ನಡೆಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಆದರೆ, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ನೇತೃತ್ವದಲ್ಲಿ ಇದಕ್ಕೆ ಭಾರೀ ವಿರೋಧ ವ್ಯಕ್ತವಾಯಿತು. ಇದು ಊರೆಲ್ಲಾ ಸುದ್ದಿಯಾದ ನಂತರ ಬೇರೆ ಹಿಂದೂ ರುದ್ರಭೂಮಿಯಲ್ಲೂ ಸ್ಥಳೀಯರು ಶವಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದರು. ಶಾಸಕ ಶೆಟ್ಟಿಯವರು ನೀಡುವ ಸ್ಪಷ್ಟನೆ ಏನಂದರೆ, "ಕಾನೂನು, ಸುವ್ಯವಸ್ಥೆಗೆ ತೊಂದರೆ ಬರುತ್ತದೆ ಎನ್ನುವ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸಿದೆ" ಎಂದು.
ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ
ಶವಸಂಸ್ಕಾರಕ್ಕೆ ವಿರೋಧ ವ್ಯಕ್ತ ಪಡಿಸಿದ ಶಾಸಕ ಭರತ್ ಶೆಟ್ಟಿಯವರ ವಿಡಿಯೋ ನಿನ್ನೆ ರಾತ್ರಿಯಿಂದ ಭಾರೀ ವೈರಲ್ ಆಗಿ ಹೋಯಿತು. ನಾನೊಬ್ಬ ಡಾಕ್ಟರ್ ಆಗಿ ಹೇಳುತ್ತೇನೆ, ಶವಸಂಸ್ಕಾರ ನಡೆಸಿದರೆ, ವೈರಾಣು ಹರಡುವುದಿಲ್ಲ ಎಂದು ಶಾಸಕರು ಮೊದಲು ಹೇಳಿದರೂ, ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂತಿಮ ಸಂಸ್ಕಾರ ನಡೆಸಲು ಬಿಡುವುದಿಲ್ಲ, ಜಿಲ್ಲಾಡಳಿತ ನನ್ನನ್ನು ಸಂಪರ್ಕಿಸಲಿಲ್ಲ ಎಂದು ಭರತ್ ಶೆಟ್ಟಿ ಹೇಳಿದ್ದು, ಸಾಮಾಜಿಕ ತಾಣದಲ್ಲಿ ಭಾರೀ ಟೀಕೆಗೆ ಗುರಿಯಾಯಿತು.
ಮೂರು ಕಡೆ ಶವಸಂಸ್ಕಾರಕ್ಕೆ ಪ್ರಯತ್ನ ವಿಫಲ
ಮಹಿಳೆಯ ಶವವನ್ನು ಸುಡಲು ಜಿಲ್ಲಾಡಳಿತ ಪಚ್ಚನಾಡಿ, ಬೋಳೂರು, ಬಂಟ್ವಾಳದ ಬಡ್ಡಕಟ್ಟೆ ಸ್ಮಶಾನಕ್ಕೆ ಅಡ್ಡಾಡಿದರೂ, ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತ ಪಡಿಸಿದರು. ಕೊನೆಗೆ ಶವವನ್ನು ಬಂಟ್ವಾಳ ವ್ಯಾಪ್ತಿಯ ಬಿ.ಸಿ.ರೋಡ್ ಬಳಿ ತರಲಾಯಿತು. ಅಲ್ಲೂ ವಿರೋಧ ವ್ಯಕ್ತವಾದಾಗ, ಸ್ಥಳೀಯ ಶಾಸಕ ರಾಜೇಶ್ ನಾಯ್ಕ್ ಅವರನ್ನು ಜಿಲ್ಲಾಡಳಿತ ಸಂಪರ್ಕಿಸಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ
ಆ ವೇಳೆ, "ಶವ ಸಂಸ್ಕಾರಕ್ಕೆ ಎಲ್ಲಿಯೂ ಅವಕಾಶ ಸಿಗದೇ ಇದ್ದಲ್ಲಿ ನನ್ನ ಸ್ವಂತ ಸ್ಥಳದಲ್ಲಿ ಅವಕಾಶ ನೀಡತ್ತೇನೆ. ಯಾಕೆಂದರೆ, ಮೃತ ಮಹಿಳೆ ನನ್ನ ಕ್ಷೇತ್ರದವರು. ಶವಸಂಸ್ಕಾರಕ್ಕೂ ಅವಕಾಶ ನೀಡದ ದಯನೀಯ ಸ್ಥಿತಿ ನನ್ನ ಕ್ಷೇತ್ರದ ಮಹಿಳೆಗೆ ಬರಬಾರದು" ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಜಿಲ್ಲಾಡಳಿತಕ್ಕೆ ಹೇಳಿದರು ಎಂದು ಹೇಳಲಾಗುತ್ತಿದೆ.
ಬುದ್ದಿವಂತರ ಜಿಲ್ಲೆಯೆಂದು ಹೆಸರಾದ ದಕ್ಷಿಣಕನ್ನಡಕ್ಕೆ ಕಪ್ಪುಚುಕ್ಕೆ
ಆದರೆ, ಎಷ್ಟೇ ವಿರೋಧ ವ್ಯಕ್ತವಾದರೂ, ಇಲ್ಲೇ ಅಂತಿಮ ಸಂಸ್ಕಾರ ನಡೆಸುವ ನಿರ್ಧಾರಕ್ಕೆ ಬಂದ ಜಿಲ್ಲಾಡಳಿತ, ಬಿ.ಸಿ.ರೋಡ್ ಬಳಿಯ ಕೈಕುಂಜ ಹಿಂದೂ ರುದ್ರಭೂಮಿಯಲ್ಲಿ ತಡರಾತ್ರಿ (ಮಧ್ಯರಾತ್ರಿ ಎರಡು ಗಂಟೆಗೆ) ಅಂತಿಮ ಸಂಸ್ಕಾರ ನಡೆಸಿತು. ಆದರೆ, ಈ ಘಟನೆ, ಬುದ್ದಿವಂತರ ಜಿಲ್ಲೆಯೆಂದು ಹೆಸರಾದ ದಕ್ಷಿಣ ಕನ್ನಡಕ್ಕೆ ಕಪ್ಪುಚುಕ್ಕೆಯಂತೂ ಆಗಿರುವುದು ಸ್ಪಷ್ಟ.