ಉಳ್ಳಾಲದಲ್ಲಿ ಹೆಚ್ಚಾದ ಕಡಲ್ಕೊರೆತ; ಕೊಚ್ಚಿ ಹೋದ ರಸ್ತೆ, ಮನೆಗಳು
ಮಂಗಳೂರು, ಜುಲೈ 3: ಕರಾವಳಿಯಲ್ಲಿ ಮಳೆ ಮುಗಿದರೂ ಮಳೆಯ ಅವಾಂತರ ಕಡಿಮೆಯಾಗಿಲ್ಲ. ಅರಬ್ಬೀ ಸಮುದ್ರ ಬೋರ್ಗರೆಯುತ್ತಿದ್ದು, ಮಂಗಳೂರಿನ ಕಡಲ ಕಿನಾರೆ ರಕ್ಕಸ ಗಾತ್ರದ ಅಲೆಗಳ ಅಬ್ಬರಕ್ಕೆ ಸಾಕ್ಷಿಯಾಗಿದೆ. ನಗರ ಹೊರವಲಯದ ಉಳ್ಳಾಲದ ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ, ಸಿ ಗ್ರೌಂಡ್ ಮುಂತಾದ ಪ್ರದೇಶಗಳಲ್ಲಿ ಕಡಲ ಕೊರೆತ ತೀವ್ರವಾಗಿದ್ದು ಹಲವಾರು ರಸ್ತೆಗಳು ಮನೆಗಳು ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.
ಉಚ್ಚಿಲ, ಬಟ್ಟಪಾಡಿ, ಉಳ್ಳಾಲ ಕಡಲ ತೀರದಲ್ಲಿ ಭಾರೀ ಅಲೆಗಳ ಅಬ್ಬರ ಕಂಡುಬಂದಿದ್ದು, ಬಟ್ಟಪಾಡಿ ಕಡಲ ತೀರದಲ್ಲಿ ಅಲೆಗಳ ಅಬ್ಬರಕ್ಕೆ ರಸ್ತೆ ಸಮುದ್ರಪಾಲಾಗಿದೆ. ಭಾರೀ ಗಾತ್ರದ ಅಲೆಗಳ ಹೊಡೆತಕ್ಕೆ ರಸ್ತೆ ಕೊಚ್ಚಿಕೊಂಡು ಹೋಗಿದೆ. ರಸ್ತೆ ಸಂಪರ್ಕವೇ ಇಲ್ಲದೇ ಬಟ್ಟಪಾಡಿ ಗ್ರಾಮ ದ್ವೀಪದಂತಾಗಿದೆ. ರಸ್ತೆ ಸಂಪರ್ಕವಿಲ್ಲದೇ ಸುಮಾರು 30ಕ್ಕೂ ಅಧಿಕ ಮನೆಗಳ ನಿವಾಸಿಗಳು ಪರದಾಟ ನಡೆಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ -ಮಡಿಕೇರಿ ಗಡಿಭಾಗದಲ್ಲಿ ಭೂಕಂಪಕ್ಕೆ ಕಾರಣವೇನು? ಫ್ರೊ.ಕೆ.ವಿ.ರಾವ್ ಮಾಹಿತಿ
ಸಮುದ್ರ ಸಮೀಪದ ಮನೆಗಳಿಗೆ ಬಡಿಯುತ್ತಿರುವ ಭಾರೀ ಗಾತ್ರದ ಅಲೆಗಳಿಂದ ಕಡಲ ತೀರದ ಮನೆಗಳ ನಿವಾಸಿಗಳು ರಾತ್ರಿ ಇಡೀ ನಿದ್ದೆಯಿಲ್ಲದೇ ಕಳೆಯುವಂತಾಗಿದೆ. ಉಚ್ಚಿಲದ ಕೆಲ ಖಾಸಗಿ ಬೀಸ್ ರೆಸಾರ್ಟ್ ಗಳ ತಡೆಗೋಡೆಗಳು ಕೂಡಾ ನೀರುಪಾಲಾಗಿದೆ. ಬಟ್ಟಪಾಡಿ ಪ್ರದೇಶದಲ್ಲಿ ಕಡಲ್ಕೊರೆತದಿಂದ ತೀವ್ರ ಹಾನಿಯಾಗಿದೆ. ಬಟ್ಟಪ್ಪಾಡಿಯಲ್ಲಿರುವ ಹಲವು ಮನೆಗಳು ಊಗ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.
ಕನ್ಹಯ್ಯಾ ಹತ್ಯೆ ಆರೋಪಿಗಳಿಗೂ ಇಸ್ಲಾಂಗೂ ಸಂಬಂಧವಿಲ್ಲ: ಯುಟಿ ಖಾದರ್
ದಿನದಿಂದ ಭೂಪ್ರದೇಶ ನುಂಗುತ್ತಿರುವ ಅಲೆಗಳು
ಬಟ್ಟಪ್ಪಾಡಿ ಪರಿಸರದ ಅಪಾಯದ ಅಂಚಿನಲ್ಲಿರುವ ಮನೆಯ ನಿವಾಸಿ ದೀಪಕ್ ಮಾಧ್ಯಮಗಳೊಂದಿಗೆ ಮಾತನಾಡಿ, "ಕಳೆದ ನಾಲ್ಕು ದಿನಗಳಿಂದ ಈ ಭಾಗದಲ್ಲಿ ಕಡಲು ಕೊರೆತ ಜಾಸ್ತಿಯಾಗುತ್ತಿದೆ. ರಕ್ಕಸ ಗಾತ್ರದ ಅಲೆಗಳು ದಿನದಿಂದ ದಿನಕ್ಕೆ ಅತೀ ಹೆಚ್ಚು ಭೂ ಪ್ರದೇಶವನ್ನು ಆಹುತಿ ಪಡೆಯುತ್ತಿದೆ. ಮನೆಯ ಹತ್ತು ಮೀಟರ್ ದೂರದವರೆಗೆ ಸಮುದ್ರ ಎಲ್ಲವನ್ನು ಅಪೋಶನ ಪಡೆದಿದ್ದು, ಯಾವುದೇ ಕ್ಷಣದಲ್ಲಿ ಮನೆ ಬೀಳುವ ಆತಂಕ ಎದುರಾಗಿದೆ. ಮನೆಯಲ್ಲಿ ತಾಯಿ ಮತ್ತು ನಾನು ಇಬ್ಬರೇ ವಾಸವಾಗಿದ್ದು, ಮನೆ ಬೀಳುವ ಭಯದಿಂದ ಕಳೆದ ನಾಲ್ಕು ದಿನಗಳಿಂದ ರಾತ್ರಿ ಇಡೀನಿದ್ದೆ ಇಲ್ಲದೇ ಕಳೆದಿದ್ದೇವೆ. ಸ್ಥಳೀಯ ಗ್ರಾಮ ಪಂಚಾಯತ್ ನವರು ಮನೆಯ ಬಳಿ ಆಗಮಿಸಿ ಸ್ಥಳೀಯ ಶಾಲೆಗೆ ಹೋಗುವಂತೆ ಹೇಳಿದ್ದಾರೆ. ಆದರೆ ಮನೆ ಬಿಟ್ಟು ಹೋಗೋದು ಹೇಗೆ? ಮನೆಯ ಸಾಮಾಗ್ರಿಗಳನ್ನು ಕೊಂಡುಹೋಗಲೂ ರಸ್ತೆಯಿಲ್ಲ. ನಮ್ಮ ಪರಿಸ್ಥಿತಿ ಯಾರೂ ಕೇಳುವವರಿಲ್ಲ" ಎಂದು ಕಣ್ಣೀರಿಟ್ಟಿದ್ದಾರೆ
ಸರಕಾರದಿಂದ ನೆರವು ಸಿಗುತ್ತಿಲ್ಲ
"ಒಂದು ಕಡೆ ಮನೆ-ಮಠ ಮತ್ತೊಂದು ಕಡೆ ಜೀವ ಉಳಿಸಿಕೊಳ್ಳಲು ಮನೆಬಿಟ್ಟು ಹೋಗುವ ಪರಿಸ್ಥಿತಿ ಇದ್ದರೂ, ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲು ಭೇಟಿ ನೀಡಿಲ್ಲ ಎಂದು ಬಟ್ಟಪ್ಪಾಡಿ ಪರಿಸರ ಜನ ಹಿಡಿಶಾಪ ಹಾಕುತ್ತಿದ್ದಾರೆ. ಕಡಲು ಹೆಚ್ಚೆಚ್ಚು ಭೂ ಭಾಗವನ್ನು ಪ್ರತಿದಿನ ಆವರಿಸಿಕೊಳ್ಳುತ್ತಿದ್ದರೂ, ಕಡಲ ಬದಿಗೆ ಕಲ್ಲು ಹಾಕಿ ಅಲೆಗಳನ್ನು ತಡೆಯುವ ಕೆಲಸ ಆಗುತ್ತಿಲ್ಲ. ಅನಕ್ಷರಸ್ಥರಾಗಿರುವ ಮನೆಯ ಹಿರಿಯರಿಂದ ಸಹಿ ಹಾಕಿಸಿಕೊಂಡು ಅಧಿಕಾರಿಗಳು ಮನೆ ತೆರವು ಮಾಡೋಕೆ ಹೇಳುತ್ತಿದ್ದಾರೆ. ಯಾವುದೇ ನೆರವು ನೀಡುತ್ತಿಲ್ಲ" ಎಂದು ಬಟ್ಟಪ್ಪಾಡಿಯ ಶಫೀಕ್ ಹೇಳಿದ್ದಾರೆ.
ಸರಕಾರ ದೂಷಿಸಿದ ಖಾದರ್
ತಮ್ಮ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಕೃತಿ ವಿಕೋಪಕ್ಕೆ ಪರಿಹಾರ ಮಾರ್ಗ ಹುಡುಕುವ ಬದಲಿಗೆ ಉಳ್ಳಾಲ ಶಾಸಕ ಯುಟಿ ಖಾದರ್ ಮಾತ್ರ ಈ ಎಲ್ಲಾ ಸಮಸ್ಯೆ ಗಳಿಗೆ ರಾಜ್ಯ ಸರ್ಕಾರದತ್ತ ಬೊಟ್ಟು ಮಾಡಿದ್ದಾರೆ. ರಾಜ್ಯ ಸರ್ಕಾರ ಶಾಶ್ವತ ಕಾಮಗಾರಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಕಡಲ್ಕೊರೆತ ಸಮಸ್ಯೆಯನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈ ಬಾರಿ ಉಳ್ಳಾಲದ ಕೈಕೋ, ಶುಭಾಶ್ ನಗರ, ಕೋಡಿ ಭಾಗದಲ್ಲಿ ಕಡಲು ಕೊರೆತ ಸಮಸ್ಯೆ ಇಲ್ಲ. ಆದರೆ ಸೋಮೇಶ್ವರ ಉಚ್ಚಿಲ ಭಾಗದಲ್ಲಿ ಸಮಸ್ಯೆ ಜೋರಾಗಿದೆ.
ಉಸ್ತುವಾರಿ ಸಚಿವರು ಗಮನ ನೀಡಬೇಕು
"ಸರಕಾರ ಇನ್ನೂ ಕಲ್ಲು ಹಾಕುವ ಕೆಲಸ ಮಾಡುತ್ತಿಲ್ಲ. ಉಸ್ತುವಾರಿ ಸಚಿವರು ಒಂದು ಕಾಲ್ ಮಾಡಿದರೂ ಸಾಕು ಜನ ಮತ್ತು ಜನರ ಮನೆಯ ರಕ್ಷಣೆ ಆಗುತ್ತದೆ. ಆದರೆ ಉಸ್ತುವಾರಿ ಸಚಿವರು ಆ ಕೆಲಸ ಮಾಡುತ್ತಿಲ್ಲ. ನಾನು ಅಧಿಕಾರದಲ್ಲಿದ್ದಾಗ ಒಂದು ಮನೆ ರಸ್ತೆಯೂ ಸಮುದ್ರ ಪಾಲಾಗಲಿಲ್ಲ. ಈಗ ಸರಕಾರಕ್ಕೆ ಜನರ ಮೇಲೆ ಕಾಳಜಿ ಇಲ್ಲ.ಕಡಲ್ಕೊರೆಯ ಭಾಧಿತ ಜನರಿಗೆ ಈಗಾಗಲೇ ಎರಡು ಆಶ್ರಯ ಕೇಂದ್ರವನ್ನು ಉಳ್ಳಾಲದ ಭೋವಿ ಕೇಂದ್ರ ಮತ್ತು ಒಂಭತ್ತು ಕೆರೆಯಲ್ಲಿ ಮಾಡಲಾಗಿದೆ. ಶಾಸಕನ ನೆಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ" ಎಂದು ಯು. ಟಿ. ಖಾದರ್ ಹೇಳಿದ್ದಾರೆ.