ಪುತ್ತೂರು: ಸ್ವಾತಂತ್ರ್ಯ ರಥದಲ್ಲಿ ಸಾವರ್ಕರ್ ಫೋಟೋ; ಎಸ್ಡಿಪಿಐ ವಿರೋಧ
ಮಂಗಳೂರು, ಆಗಸ್ಟ್ 15: ಸ್ವಾತಂತ್ರ್ಯ ರಥದಲ್ಲಿ ವೀರ್ ಸಾವರ್ಕರ್ ಫೋಟೋ ಹಾಕಿರುವುದನ್ನು ವಿರೋಧಿಸಿ ಎಸ್ಡಿಪಿಐ ಕಾರ್ಯಕರ್ತರು ಸ್ವಾತಂತ್ರ್ಯ ರಥವನ್ನು ತಡೆದು ಪ್ರತಿಭಟನೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕದಲ್ಲಿ ನಡೆದಿದೆ.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾದ ಈ ಸಂಭ್ರಮದಲ್ಲಿ ಕಬಕ ಗ್ರಾಮ ಪಂಚಾಯತ್ ವತಿಯಿಂದ ಸ್ವಾತಂತ್ರ್ಯ ರಥ ಎಂಬ ವಾಹನವನ್ನು ಸಿದ್ಧಪಡಿಸಲಾಗಿತ್ತು. ಈ ರಥದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬ್ಯಾನರ್ ಹಾಕಲಾಗಿದ್ದು, ಇದರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಲಾಲ ಲಜಪತರಾಯ್, ಚಂದ್ರಶೇಖರ್ ಆಜಾದ್, ಲಾಲ್ ಬಹುದ್ಧೂರ್ ಶಾಸ್ತ್ರಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಬಾಲಗಂಗಾಧರ ನಾಥ್ ತಿಲಕ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮತ್ತು ವೀರ್ ಸಾವರ್ಕರ್ ಭಾವಚಿತ್ರವನ್ನು ಅಳವಡಿಸಲಾಗಿತ್ತು.
ಎಸ್ಡಿಪಿಐ ಕಾರ್ಯಕರ್ತರು ಬ್ಯಾನರ್ ಹರಿಯಲು ಮುಂದಾದರು
ಗ್ರಾಮ ಪಂಚಾಯತ್ ರಥಕ್ಕೆ ಕಬಕ ಗ್ರಾ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಲ್ಲೇಗ ಚಾಲನೆ ನೀಡುತ್ತಿದ್ದ ವೇಳೆ, ಸ್ಥಳಕ್ಕೆ ಆಗಮಿಸಿದ ಎಸ್ಡಿಪಿಐ ಕಾರ್ಯಕರ್ತರು ಗೂಂಡಾ ವರ್ತನೆ ತೋರಿದ್ದಾರೆ. ವೀರ್ ಸಾವರ್ಕರ್ ಫೋಟೋ ಇರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಎಸ್ಡಿಪಿಐ ಕಾರ್ಯಕರ್ತರು, ಬ್ಯಾನರ್ ಹರಿಯಲು ಮುಂದಾಗಿದ್ದಾರೆ. ಅಲ್ಲದೇ ವೀರ್ ಸಾವರ್ಕರ್ ಫೋಟೋ ಹಾಕಿದ ಗ್ರಾಮ ಪಂಚಾಯತ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಅಲ್ಲದೇ ಸ್ವಾತಂತ್ರ್ಯ ರಥವನ್ನು ಹಾನಿ ಮಾಡಲು ಮುಂದಾಗಿದ್ದಾರೆ.
ಹಾನಿ ಮಾಡುವುದನ್ನು ತಡೆದಾಗ ಪರಸ್ಪರ ವಾಗ್ವಾದ
ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಲ್ಲೇಗ ಮತ್ತು ಇತರ ಸದಸ್ಯರು ಎಸ್ಡಿಪಿಐ ಕಾರ್ಯಕರ್ತರು ಸ್ವಾತಂತ್ರ್ಯ ರಥವನ್ನು ಹಾನಿ ಮಾಡುವುದನ್ನು ತಡೆದಾಗ ಪರಸ್ಪರ ವಾಗ್ವಾದ, ನೂಕಾಟ, ತಳ್ಳಾಟ ನಡೆದಿದೆ. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ಯತ್ನಿಸಿದರೂ, ಕೇಳದ ಕಾರ್ಯಕರ್ತರು ಸಾವರ್ಕರ್ ಫೋಟೋ ಹರಿದು ಅಲ್ಲಿ ಟಿಪ್ಪು ಸುಲ್ತಾನ್ ಫೋಟೋ ಹಾಕುವಂತೆ ಪಟ್ಟು ಹಿಡಿದಿದ್ದಾರೆ. ಸಾವರ್ಕರ್ ಮತ್ತು ಗ್ರಾಮ ಪಂಚಾಯತ್ಗೆ ಧಿಕ್ಕಾರ ಕೂಗಿ ಹಲ್ಲೆ ನಡೆಸಲು ಮುಂದಾಗಿದ್ದಾರೆ.
ಮತೀಯವಾದಿ ಸಂಘಟನೆಗಳ ಬೆಂಬಲದಿಂದ ಈ ಕೆಲಸ
ಪರಿಸ್ಥಿತಿ ಕೈ ಮೀರುವ ಸಂದರ್ಭದಲ್ಲಿ ಪುತ್ತೂರು ನಗರ ಠಾಣಾ ಇನ್ಸ್ಪೆಕ್ಟರ್ ಗೋಪಾಲ ನಾಯ್ಕ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಚದುರಿಸಿದೆ. ಬಳಿಕ ಸ್ವಾತಂತ್ರ್ಯ ರಥ ಗ್ರಾಮದೊಳಗೆ ಸಂಚಾರ ಮಾಡಿದ್ದು, ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ಘಟನೆಯ ಬಳಿಕ ಪುತ್ತೂರು ಶಾಸಕ ಸಂಜೀವ ಮಠಂದೂರು ಕಬಕ ಗ್ರಾಮ ಪಂಚಾಯತ್ಗೆ ಭೇಟಿ ನೀಡಿ, ಅಧ್ಯಕ್ಷರು ಮತ್ತು ಸ್ಥಳದಲ್ಲಿದ್ದವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಸಂಜೀವ ಮಠಂದೂರು, "ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ ಕೆಲ ಯುವಕರು ರಾಷ್ಟ್ರ ವಿರೋಧಿ ಕೆಲಸ ಮಾಡಿದ್ದಾರೆ. ಇವರು ಕಾಸರಗೋಡು ಮತ್ತು ಭಟ್ಕಳದ ಮತೀಯವಾದಿ ಸಂಘಟನೆಗಳ ಬೆಂಬಲದಿಂದ ಈ ಕೆಲಸ ಮಾಡುವುದು ಗೊತ್ತಾಗಿದೆ.''ಆರೋಪಿಗಳನ್ನು ಬಂಧಿಸಬೇಕೆಂದು ಪೊಲೀಸರಿಗೆ ಸೂಚನೆ
"ಈಗಲೇ ಆರೋಪಿಗಳನ್ನು ಬಂಧಿಸಬೇಂದು ಪುತ್ತೂರು ನಗರ ಠಾಣಾ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಈ ಬಗ್ಗೆ ಉನ್ನತ ತನಿಖೆ ಮಾಡುವಂತೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಬಳಿ ಮನವಿ ಮಾಡುವುದಾಗಿ,'' ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆಯುತ್ತಿದ್ದು, ಸದ್ಯ ಜಿಲ್ಲೆಯ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ಉಳ್ಳಾಲದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ ಮಾಡಿದ ಬಳಿಕ ಗಲಭೆ ಸಾಧ್ಯತೆಯನ್ನು ಗುಪ್ತಚರ ಇಲಾಖೆ ಶಂಕಿಸಿದ್ದು, ಈಗ ಪುತ್ತೂರಿನ ಕಬಕದ ಘಟನೆ ಕೆಂಡಕ್ಕೆ ತುಪ್ಪ ಸುರಿದಂತೆ ಮಾಡಿದೆ.