ದಾಳಿ ಮಾಡಿದ್ದಷ್ಟು ಹತ್ತು ಹೆಜ್ಜೆ ಮುಂದೆ ಇಡುತ್ತೇವೆ: ಎನ್ಐಎ ವಿರುದ್ಧ ಎಸ್ಡಿಪಿಐ ಆಕ್ರೊಶ
ಮಂಗಳೂರು, ಸೆಪ್ಟೆಂಬರ್ 22: ರಾಜ್ಯ ಪೊಲೀಸರು ವಶಪಡಿಸಿಕೊಂಡಿರುವ ಐವರು ಪಿಎಫ್ಐ ಮುಖಂಡರನ್ನು ಪೊಲೀಸರನ್ನು 24 ಗಂಟೆಯೊಳಗೆ ಬಿಡುಗಡೆ ಮಾಡದಿದ್ದಲ್ಲಿ ಮಂಗಳೂರಿನಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಸ್ಡಿಪಿಐ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಢಿ ನಡೆಸಿದ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಬೂಬುಕರ್ ಕುಳಾಯಿ, ಸರಕಾರಕ್ಕೆ 24 ಗಂಟೆ ಗಡುವು ನೀಡಿದ್ದು, ಸರಕಾರ ವಶಪಡಿಸಿಕೊಂಡಿರುವ ಪಿಎಫ್ಐ ಮುಖಂಡರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ.
ಬಾಗಿಲು ಮುರಿದು ಎಸ್ಡಿಪಿಐ ಕಚೇರಿಗೆ ನುಗ್ಗಿದ ಎನ್ಐಎ; ಒಟ್ಟು ಐವರು ವಶ
ಎಸ್ಡಿಪಿಐ ಮತ್ತು ಪಿಎಫ್ಐ ಕಛೇರಿ ಮೇಲೆ ಎನ್ಐಎ ಅತಿಕ್ರಮಣದ ದಾಳಿಯಾಗಿದೆ. ನೀವು ಯಾವ ಆಧಾರದಲ್ಲಿ ದಾಳಿ ಮಾಡಿದ್ದೀರಿ ಅಂತಾ ಕೇಳಿದಾಗ ಕೋರ್ಟ್ ವಾರೆಂಟ್ನಲ್ಲಿ ಪಿಎಫ್ಐ ಕಚೇರಿ ಪರಿಶೀಲನೆ ಮಾತ್ರ ಇತ್ತು. ಎಸ್ಡಿಪಿಐ ಕಛೇರಿ ಮೇಲೆ ದಾಳಿ ಬಗ್ಗೆ ಪ್ರಶ್ನಿಸಿದಾಗ, ಒಂದೇ ಮಳಿಗೆ ಇರುವಾಗ ಸರ್ಚ್ಗೆ ಸಹಕಾರ ನೀಡಬೇಕು ಎಂದು ಕೇಳಿಕೊಂಡರು. ಆಫೀಸ್ ಬೀಗ ಒಡೆದು, ಕಚೇರಿ ಗ್ಲಾಸ್ ಡೋರ್ ಒಡೆದು, ದಾಖಲೆ ಪತ್ರ ಎಳೆದುಕೊಂಡು ಚೆಲ್ಲಾಪಿಲ್ಲಿಯಾಗಿ ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂದು ಅಬೂಬುಕರ್ ಕುಳಾಯಿ ದೂರಿದ್ದಾರೆ.
ಅಧಿಕಾರಿಗಳು ಕಚೇರಿಯ ವಾಸ್ತವ್ಯ ಅಗ್ರಿಮೆಂಟ್, ಎಸ್ಡಿಪಿಐ 2009 ರಿಂದ ಮಾಡಿದ ಕಾರ್ಯಕ್ರಮದ ಫೋಟೋ, ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್, ಪಾರ್ಟಿಗೆ ಸಂಬಂಧಿಸಿದ ಬುಕ್ ಲೆಟ್ಗಳನ್ನು ಪಡೆದುಕೊಂಡು ಹೋಗಿದ್ದಾರೆ. ಎನ್ಐಎ ಅಕ್ರಮ ಪ್ರವೇಶದ ಬಗ್ಗೆ ವಕೀಲರ ಮೂಲಕ ಕೋರ್ಟ್ ದೂರು ನೀಡುತ್ತೇವೆ. ಪಿಎಫ್ಐ ಸಾಮಾಜಿಕ ಸಂಘಟನೆಯಾಗಿದೆ. ಇದು ದೇಶದ ಜನರಿಗೆ ನ್ಯಾಯ ಒದಗಿಸುವ ಸಂಸ್ಥೆಯಾಗಿದೆ. ಪಿಎಫ್ಐನ 5 ನಾಯಕರ ಬಂಧನ ಮಾಡಿದ್ದಾರೆ. 24 ಗಂಟೆಯೊಳಗೆ ಬಿಡುಗಡೆ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಅಬೂಬುಕರ್ ಎಚ್ಚರಿಕೆ ನೀಡಿದ್ದಾರೆ.
''ಎನ್ಐಎ ರಾಜಕೀಯ ಪ್ರೇರಿತ ದಾಳಿಯಾಗಿದೆ. ಕೇಂದ್ರ, ರಾಜ್ಯದ ಅಧರ್ಮ, ಅನೀತಿ ವಿರುದ್ದ ಧ್ವನಿ ಎತ್ತುತ್ತಿರುವುದಕ್ಕೆ ದಾಳಿಯಾಗಿದೆ. ಬಿಜೆಪಿಯ ಜನವಿರೋಧಿ ಕಾರ್ಯಕ್ಕೆ ಜನರದ್ದು ವಿರೋಧ ಇದೆ. ಸರಕಾರ ಹಿಜಾಬ್, ಹಲಾಲ್, ವ್ಯಾಪಾರ ಬಹಿಷ್ಕಾರ, ಜಿಎಸ್ಟಿ ಮುಂತಾದ ಕೆಲಸವೇ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಖುಷಿ ಪಡಿಸಲು ಈ ದಾಳಿ ಮಾಡುತ್ತಿದ್ದಾರೆ. ಆದರೆ ನಾವು ದಾಳಿ ಮಾಡಿದಷ್ಟು ಹತ್ತು ಹೆಜ್ಜೆ ಜಾಸ್ತಿ ಇಡುತ್ತೇವೆ'' ಎಂದು ಅಬೂಬುಕರ್ ಕುಳಾಯಿ ಹೇಳಿದ್ದಾರೆ.
''ಎನ್ಐಎ ಸಂಘ ಪ್ರೇರಿತವಾದ ದಾಳಿ ಮಾಡಿದೆ. ಸರಕಾರ ಎನ್ಐಎ ಸಂಸ್ಥೆಯನ್ನು ದುರುಪಯೋಗ ಮಾಡುತ್ತಿದೆ. ಎನ್ಐಎ ಸಮನ್ಸ್ ನೀಡುವ ಪ್ರಕ್ರಿಯೆ ಮಾಡಿಲ್ಲ. ಅಧಿಕಾರಿಗಳು ರಾತ್ರೋರಾತ್ರಿ ಬರುವ ಅವಶ್ಯಕತೆ ಇಲ್ಲ. ಕಚೇರಿ ಇರುವ ರಸ್ತೆಯಲ್ಲೇ ಸಿಎಎ ಗಲಾಟೆ ಸಂದರ್ಭದಲ್ಲಿ ಎರಡು ಬಲಿಯಾಗಿದೆ. ಈಗ ಕಾನೂನು ಸುವ್ಯವಸ್ಥೆ ಹಾಳಾದರೆ ಯಾರು ಹೊಣೆ? ಎನ್ಐಎ ಮೊದಲು ಶಾಸಕ, ಸಂಸದರ ಸಚಿವರ ಕಚೇರಿ ದಾಳಿ ಮಾಡಲಿ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.