ಮಂಗಳೂರಿನಲ್ಲಿ ಶಾಲಾ ಮಕ್ಕಳ ವಾಹನ ಚಾಲಕರ ಮುಷ್ಕರ
ಮಂಗಳೂರು, ಜುಲೈ 11: ಕಾನೂನು ರಕ್ಷಣೆ ಹೆಸರಿನಲ್ಲಿ ಪೊಲೀಸರು ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಶಾಲಾ ಮಕ್ಕಳ ವಾಹನ ಚಾಲಕರ ಸಂಘ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದೆ.
ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ವಾಹನ ಚಾಲಕರು ನಾಳೆ ಜುಲೈ 12ರಂದು ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯೆದುರು ಬ್ರಹತ್ ಪ್ರತಿಭಟನಾ ಸಭೆ ನಡೆಸಲಿದ್ದಾರೆ.
ಗಾಂಜಾ, ದನ ಕಳವು ಪ್ರಕರಣ ತಡೆಗೆ ನಿರ್ಲಕ್ಷ್ಯ; ಇನ್ಸ್ಪೆಕ್ಟರ್ ಅಮಾನತು
ಶಾಲಾ ಮಕ್ಕಳನ್ನು ಕರೆದೊಯ್ಯುವಂಥ ವಾಹನಗಳಲ್ಲಿ ಮಿತಿಗಿಂತ ಹೆಚ್ಚು ಮಕ್ಕಳನ್ನು ಹಾಕದಂತೆ ನಿಗಾವಹಿಸಬೇಕೆಂದು ರಾಜ್ಯದ ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿದ್ದು, ಪೊಲೀಸ್ ಇಲಾಖೆ ಅದನ್ನು ಜಾರಿಗೊಳಿಸುವ ನೆಪದಲ್ಲಿ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳನ್ನೇ ಕೇಂದ್ರೀಕರಿಸಿ ಕಳೆದ ಒಂದು ತಿಂಗಳಿನಿಂದ ನಿರಂತರ ಕೇಸ್ ಹಾಗೂ ವಿಪರೀತ ದಂಡ ವಸೂಲಿ ಮಾಡುತ್ತಿದೆ ಎಂದು ವಾಹನ ಚಾಲಕರು ಆರೋಪಿಸಿದ್ದಾರೆ.
ಮಿತಿಗಿಂತ ಕಡಿಮೆ ಮಕ್ಕಳಿದ್ದರೂ ಕೇಸ್ ಹಾಕುವುದು, ಲೈಸೆನ್ಸನ್ನು ರದ್ದುಪಡಿಸುವುದು, ಚಾಲಕನಿಗೆ ಮೇಲಿಂದ ಮೇಲೆ ಕೇಸ್ ಹಾಕುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹೀಗೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯವು ಖಂಡನೀಯ ಎಂದು ದ.ಕ.ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿದ ಯುವಕನ ಬಂಧನ
ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ವಾಹನ ಚಾಲಕರು ಮುಷ್ಕರ ಆರಂಭಿಸಿದ್ದು, ಇಂದು ಮುಂಜಾನೆಯಿಂದ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳು ರಸ್ತೆಗಿಳಿದಿಲ್ಲ. ಪೋಷಕರೇ ಇಂದು ಮಕ್ಕಳನ್ನು ಶಾಲೆಗೆ ಕರೆತರುವ ದೃಶ್ಯ ಸಾಮಾನ್ಯವಾಗಿತ್ತು.