ತನ್ನ ಹುಟ್ಟುಹಬ್ಬದ ಉಡುಗೊರೆಯನ್ನು ಸಂತ್ರಸ್ತರಿಗೆ ನೀಡಿದ ಪುಟ್ಟ ಬಾಲಕಿ; ಭೇಷ್ ಅಂದರು ಜನ
ಮಂಗಳೂರು, ಆಗಸ್ಟ್ 27: ಮಕ್ಕಳಿಗೆ ಹುಟ್ಟುಹಬ್ಬ ಎಂದರೆ ಎಲ್ಲಿಲ್ಲದ ಸಂಭ್ರಮ. ಹುಟ್ಟುಹಬ್ಬಕ್ಕೆ ಹೊಸ ಬಟ್ಟೆ, ಕೇಕ್ ಕತ್ತರಿಸಿ ಉಡುಗೊರೆ ಪಡೆಯುವುದೆಂದರೆ ಅದೇನೋ ಖುಷಿ. ಆದರೆ ಮಂಗಳೂರಿನ ಬಾಲಕಿಯೊಬ್ಬಳು ತನಗೆ ತನ್ನಜ್ಜಿ ನೀಡಿದ್ದ ಹುಟ್ಟುಹಬ್ಬದ ಉಡುಗೊರೆಯನ್ನು ನೆರೆ ಸಂತ್ರಸ್ತರಿಗೆ ನೀಡಿದ್ದಾಳೆ. ಬಾಲಕಿಯ ಈ ವಿಶಾಲ ಹೃದಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ನೆರೆ ಸಂತ್ರಸ್ತರಿಗೆ 1 ಲಕ್ಷ ರುಪಾಯಿ ದೇಣಿಗೆ ನೀಡಿದ ಬೆಳ್ತಂಗಡಿ ಆಟೋ ಚಾಲಕ
ಮಂಗಳೂರಿನ 10 ವರ್ಷದ ಬಾಲಕಿ, ತನ್ನ ಜನ್ಮದಿನಕ್ಕೆ ಅಜ್ಜಿ ನೀಡಿದ 10 ಸಾವಿರ ರೂಪಾಯಿಯನ್ನು ಪ್ರವಾಹ ಸಂತ್ರಸ್ತರ ನೆರವಿಗೆ ದೇಣಿಗೆಯಾಗಿ ನೀಡಿದ್ದಾಳೆ. ತಲಪಾಡಿ ಸಮೀಪದ ಕಿನ್ಯಾದಲ್ಲಿರುವ ಶಾರದಾ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಸನ್ಮತಿ ಕೆಲವು ದಿನಗಳ ಹಿಂದೆ ಟಿ.ವಿ ಹಾಗು ಪತ್ರಿಕೆಗಳಲ್ಲಿ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಪ್ರವಾಹ ಸಂತ್ರಸ್ತರ ಬವಣೆಯನ್ನು ಗಮನಿಸುತ್ತಿದ್ದಳು. ಸಂತ್ರಸ್ತರ ಕಣ್ಣೀರ ಕತೆಗಳನ್ನು ನೋಡಿದ ಈ ಪುಟ್ಟ ಹೃದಯ ಕರಗಿದೆ.
ಆಗಸ್ಟ್ 25ರಂದು ಸನ್ಮತಿಯ ಜನ್ಮದಿನ. ತಂದೆ ತಾಯಿ ಉಡುಗೊರೆಯಾಗಿ ಹೊಸ ಉಡುಗೆ ನೀಡಿದ್ದರು. ಕುತ್ತಾರು ಪದವಿನ ಮನೆಯಲ್ಲಿ ಜನ್ಮದಿನಾಚರಣೆಯೂ ನಡೆದಿತ್ತು. ಅಜ್ಜಿ ಉಡುಗೊರೆಯಾಗಿ 10 ಸಾವಿರ ರೂಪಾಯಿ ಚೆಕ್ ನೀಡಿದ್ದರು. ನೆರೆ ಸಂತ್ರಸ್ತರ ಬವಣೆಯನ್ನು ಕಂಡಿದ್ದ ಸನ್ಮತಿ ಆ 10 ಸಾವಿರ ರೂಪಾಯಿ ಚೆಕ್ ಅನ್ನು ನೆರೆಸಂತ್ರಸ್ತರ ನೆರವಿಗೆ ನೀಡಿದ್ದಾಳೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಗೆ ಶಾಲಾ ಸಮವಸ್ತ್ರದಲ್ಲೇ ಆಗಮಿಸಿದ್ದ ಸನ್ಮತಿ ಅಜ್ಜಿ ಕೊಟ್ಟ ಚೆಕ್ಕನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ನೀಡಿದ್ದಾಳೆ. ಬಾಲಕಿಯ ಹೃದಯವಂತಿಕೆಗೆ ಮೆಚ್ಚಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಬೆನ್ನು ತಟ್ಟಿದರು. ಮಂಗಳೂರಿನ ಜಿಲ್ಲಾ ಪ.ಪೂ. ಶಿಕ್ಷಣ ಇಲಾಖೆಯಲ್ಲಿ ಶಾಖಾಧಿಕಾರಿ ಆಗಿರುವ ನಿತಿನ್ ಅವರ ಎರಡನೆ ಮಗಳಾದ ಸನ್ಮತಿ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರ ಮೊಮ್ಮಗಳು.