ಶಾಲಾ- ಕಾಲೇಜು ಆರಂಭ: ಮಂಗಳೂರಿನಲ್ಲಿ ತಲೆ ಎತ್ತಿದ ಗಾಂಜಾ ಮಾಫಿಯಾ!
ಮಂಗಳೂರು, ಡಿಸೆಂಬರ್ 4: ಕೊರೊನಾ ಸಂಕಷ್ಟದ ಬಳಿಕ ಶಾಲಾ- ಕಾಲೇಜುಗಳು ಮತ್ತೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ. ಕೊರೊನಾದ ಸಂಧರ್ಭದಲ್ಲಿ ಸೈಲೆಂಟ್ ಆಗಿದ್ದ ಮತ್ತಿನ ಪ್ರಪಂಚ ಕಾಲೇಜುಗಳೆಲ್ಲಾ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ ಹಿನ್ನಲೆಯಲ್ಲಿ ಮತ್ತೆ ತಲೆ ಎತ್ತಿದೆ.
ಅದರಲ್ಲೂ ಕಡಲನಗರಿ ಮಂಗಳೂರಿನಲ್ಲಿ ಮತ್ತೆ ಡ್ರಗ್ಸ್ ಜಾಲ ಸಕ್ರಿಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಗಶಃ ಎಲ್ಲಾ ಕಡೆ ಗಾಂಜಾ ಡ್ರಗ್ಸ್ ಮಾಫಿಯಾ ಆವರಿಸಿಕೊಂಡಿದ್ದು, ಹದಿಹರೆಯದ ಯುವಕರು ಮಾದಕ ಲೋಕದ ದಾಸರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮಂಗಳೂರು ಪೊಲೀಸರು ಡ್ರಗ್ಸ್ ಮಾಫಿಯಾದ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಡ್ರಗ್ಸ್ ಮಾಫಿಯಾದ ವಿರುದ್ಧ ತೊಡೆ ತಟ್ಟಿರುವ ಮಂಗಳೂರು ಪೊಲೀಸರು ತಡರಾತ್ರಿ ಗಸ್ತು ತಿರುಗಿ ಗಾಂಜಾ ವ್ಯಸನಿಗಳ ಹೆಡೆಮುರಿ ಕಟ್ಟಿದ್ದಾರೆ. ಮಂಗಳೂರು ಪೊಲೀಸರು ತಡ ರಾತ್ರಿ ಗಸ್ತು ತಿರುಗುತ್ತಿದ್ದ ಸಂದರ್ಭದ್ಲಿ ಡ್ರಗ್ಸ್ ಸೇವನೆ ಮಾಡುತಿದ್ದ ವಿದ್ಯಾರ್ಥಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭವಾಗಿದೆ. ಈ ನಡುವೆ ಶಾಲಾ- ಕಾಲೇಜುಗಳಲ್ಲಿ ಮತ್ತೆ ಡ್ರಗ್ಸ್, ರ್ಯಾಗಿಂಗ್ ಭೀತಿ ಶುರುವಾಗಿದೆ. ಪ್ರತಿಷ್ಠಿತ ವೃತ್ತಿಪರ ಕಾಲೇಜು ಒಂದರ 5 ಮಂದಿ ವಿದ್ಯಾರ್ಥಿಗಳನ್ನು ಡ್ರಗ್ಸ್ ಸೇವನೆ ಆರೋಪದಲ್ಲಿ ಶುಕ್ರವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ.
ಇದು ಮಂಗಳೂರು ನಗರದ ಕಾಲೇಜುಗಳಲ್ಲಿ ಮತ್ತೆ ಡ್ರಗ್ಸ್ ಜಾಲ ಸಕ್ರಿಯ ಆಗಿರುವುದಕ್ಕೆ ಸಾಕ್ಷಿಯಂತಿದೆ. ಕೊಂಚ ತೆರೆಮರೆಗೆ ಸರಿದಂತಿದ್ದ ಈ ಡ್ರಗ್ಸ್ ಜಾಲ ಮತ್ತೆ ಕಾಲೇಜುಗಳಲ್ಲಿ ಆಫ್ಲೈನ್ ತರಗತಿಗಳು ಆರಂಭವಾಗುತ್ತಿದಂತೆ ಸಕ್ರಿಯವಾಗಿದೆ.
ಕೇರಳ ಮೂಲದ ಡ್ರಗ್ಸ್ ಜಾಲ ಮಂಗಳೂರಿನಲ್ಲಿ ಸಕ್ರಿಯಗೊಂಡಿದ್ದು. ಎಂ.ಡಿ.ಎಂ.ಎ, ಎಲ್.ಎಸ್.ಡಿ ಯಂತಹ ಸಿಂಥೆಟಿಕ್ ಡ್ರಗ್ಸ್ನೊಂದಿಗೆ ಬೃಹತ್ ಪ್ರಮಾಣದಲ್ಲಿ ಗಾಂಜಾ ಸರಬರಾಜು ಆಗುತ್ತಿದೆ.
ಶಿಕ್ಷಣ ಕಾಶಿ ಎಂದೇ ಕರೆಯಲ್ಪಡುವ ಮಂಗಳೂರು ನಗರದಲ್ಲಿ ಲಾಕ್ಡೌನ್ ಸಂದರ್ಭದಲ್ಲಿಯೂ ಡ್ರಗ್ಸ್ ಸಾಗಾಟ ಅವ್ಯಾಹತವಾಗಿತ್ತು. ಗಾಂಜಾ ಜತೆಯಲ್ಲೇ ಸಿಂಥೆಟಿಕ್ ಡ್ರಗ್ಸ್ಗಳ ಸಾಗಾಟವನ್ನು ತಡೆದು ಭಾರೀ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳುವಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಬಿಗಿ ಕ್ರಮ ವಹಿಸಿತ್ತು.
ಈ ಡ್ರಗ್ಸ್ ಜಾಲವನ್ನು ಮಟ್ಟಹಾಕಲು ಮಂಗಳೂರು ಪೊಲೀಸರು ಇದೀಗ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಳೆದ ಸುಮಾರು ಒಂದು ವರ್ಷದ ಅವಧಿಯಲ್ಲಿ ಡ್ರಗ್ಸ್ ಪೂರೈಕೆ, ಮಾರಾಟ ಮತ್ತು ಸೇವನೆಗೆ ಸಂಬಂಧಿಸಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 300ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿದ್ದು, 400ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಲಾಗಿದೆ.
ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಎಚ್ಚರಿಕೆ
"ಶಾಲಾ- ಕಾಲೇಜುಗಳಲ್ಲಿ ಹೊರ ರಾಜ್ಯದ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಡ್ರಗ್ಸ್ ಪೂರೈಕೆ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಶಾಲಾ- ಕಾಲೇಜುಗಳ ಆಡಳಿತ ಮಂಡಳಿಗಳು ಕೂಡ ತಮ್ಮ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸುವಂತೆ ಪೊಲೀಸ್ ಇಲಾಖೆ ಸೂಚಿಸಿದೆ. ಅದರೆ ಕೆಲ ಕಾಲೇಜುಗಳು ಇದನ್ನು ನಿರ್ಲಕ್ಷಿಸುತ್ತಿರುವುದು ಕಂಡು ಬಂದಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ," ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನ ಹಾಸ್ಟೆಲ್ನಲ್ಲಿ ಕೇರಳದ ವಿದ್ಯಾರ್ಥಿಗಳ ಬೀದಿ ಕಾಳಗದಲ್ಲೂ ಗಾಂಜಾ ಅಮಲಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಈ ಸಂಬಂಧ ಎಂಟು ಮಂದಿ ವಿದ್ಯಾರ್ಥಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್, ವಿಮಲ್, ಫಹಾದ್ ಮನಾಫ್, ಕಾನೆ ಜಾನ್ಸನ್, ಶಾಹೀದ್, ಆದರ್ಶ, ಮಹಮ್ಮದ್ ನಾಸೀಫ್, ತಾಹೀರ್ ಬಂಧಿತ ವಿದ್ಯಾರ್ಥಿಗಳು. ಈ ವಿದ್ಯಾರ್ಥಿಗಳ ವಿರುದ್ಧ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.
ಕಲ್ಲು, ದೊಣ್ಣೆ ಮತ್ತು ಇಂಟರ್ಲಾಕ್ನಿಂದ ವಿದ್ಯಾರ್ಥಿಗಳ ಗುಂಪು ಪರಸ್ಪರ ಹಲ್ಲೆ ಮಾಡಿತ್ತು. ಪೊಲೀಸರ ಮೇಲೂ ಹಲ್ಲೆ ನಡೆಸಿದ್ದ ಹಿನ್ನೆಲೆ ಕೊಲೆ ಯತ್ನ ಕೇಸು ದಾಖಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಗುಜ್ಜರಕೆರೆಯ ಯೆನೇಪೋಯಾ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳ ಎರಡು ಗುಂಪು ಹೊಡೆದಾಡಿಕೊಂಡಿದ್ದು, ಸೆಕ್ಯುರಿಟಿ ಕೊಠಡಿ, ಕಂಪ್ಯೂಟರ್ ಸೇರಿ ಇತರೆ ವಸ್ತುಗಳನ್ನು ಹಾನಿ ಮಾಡಿದ್ದರು. ಜಗಳ ಬಿಡಿಸಲು ಬಂದ ಪೊಲೀಸರು ಮತ್ತು ಸ್ಥಳೀಯರ ಮೇಲೆ ವಿದ್ಯಾರ್ಥಿಗಳು ಕಲ್ಲು ಎಸೆದಿದ್ದರು.