ಮಂಗಳೂರಿನಲ್ಲಿ ನೀರಿಗೆ ಸಮಸ್ಯೆ, ಟ್ಯಾಂಕರ್ ಗಳಿಗೆ ಹೆಚ್ಚಿದ ಬೇಡಿಕೆ
ಸದ್ಯಕ್ಕೆ ಮಂಗಳೂರು ನಗರದಲ್ಲಿ ಎರಡು ದಿನಕ್ಕೊಮೆ ನೀರು ಪೂರೈಕೆ ಮಾಡುವ ವ್ಯವಸ್ಥೆಯಿಂದ ನಗರದಾದ್ಯಂತ ನೀರಿನ ಅಭಾವ ಹೆಚ್ಚಾಗುತ್ತಿದೆ. ಇನ್ನೊಂದೆಡೆ ನೀರು ಪೂರೈಕೆ ಮಾಡುವ ಟ್ಯಾಂಕರುಗಳಿಗೆ ಬೇಡಿಕೆ ಕುದುರಿದೆ.
ಮಂಗಳೂರು, ಮಾರ್ಚ್ 29: ಮಂಗಳೂರು ನಗರದಲ್ಲಿಯೂ ನಿಧಾನಕ್ಕೆ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.
ಸದ್ಯಕ್ಕೆ ಎರಡು ದಿನಕ್ಕೊಮೆ ನೀರು ಪೂರೈಕೆ ಮಾಡುವ ವ್ಯವಸ್ಥೆಯಿಂದ ನಗರದಾದ್ಯಂತ ನೀರಿನ ಅಭಾವ ಹೆಚ್ಚಾಗುತ್ತಿದೆ. ಇನ್ನೊಂದೆಡೆ ನೀರು ಪೂರೈಕೆ ಮಾಡುವ ಟ್ಯಾಂಕರುಗಳಿಗೆ ಬೇಡಿಕೆ ಕುದುರಿದೆ. ನಗರದಲ್ಲಿ ಹಲವು ಖಾಸಗಿ ಟ್ಯಾಂಕರುಗಳು ಇದೀಗ ನೀರು ಪೂರೈಕೆ ಮಾಡಲು ರಸ್ತೆಗಿಳಿದು ಬೇಸಗೆಯ ಲಾಭ ಪಡೆದುಕೊಳ್ಳತೊಡಗಿವೆ. ಎಲ್ಲಿ ನೋಡಿದರೂ ಹೆಚ್ಚಾಗಿ ಖಾಸಗಿ ಟ್ಯಾಂಕರುಗಳೇ ಕಾಣಸಿಗುತ್ತಿವೆ.[ಮಂಗಳೂರಲ್ಲಿ ಜಲಕ್ಷಾಮ: ಕುಡಿಯುವ ನೀರು ಪೂರೈಕೆಗೆ ವೇಳಾಪಟ್ಟಿ]
ಹಾಗೆ ನೋಡಿದರೆ ಸದ್ಯಕ್ಕೆ ನಗರದಲ್ಲಿ ಹೇಳಿಕೊಳ್ಳುವಂಥ ನೀರಿನ ಅಭಾವ ಇಲ್ಲ. ಆದರೆ ಗುಡ್ಡಗಾಡು ಪ್ರದೇಶಗಳಲ್ಲಿರುವ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ವಾಸವಿರುವ ಮಂದಿಯಲ್ಲಿ ಆತಂಕ ತಲೆದೋರಿದೆ. ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆ ಎರಡು ದಿನಕ್ಕೊಮೆ ನೀರು ಪೂರೈಕೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರಿಂದ ನೀರಿನ ಸಮಸ್ಯೆ ಉಂಟಾಗುವ ಭೀತಿ ಎದುರಾಗಿದೆ.
ತುಂಬೆ ನೂತನ ಡ್ಯಾಂನಿಂದ ಇನ್ಮುಂದೆ ಮಂಗಳೂರಿನ ಜನತೆಗೆ ನೀರಿನ ಸಮಸ್ಯೆ ಕಾಡದು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಪಾಲಿಕೆ ಅಧಿಕಾರಿಗಳು ಮಾರ್ಚ್ ತಿಂಗಳಾಂತ್ಯದ ವೇಳೆಗೆ ಜನತೆಗೆ ನೀರಿನ ಕೊರತೆ ಇದೆ ಎನ್ನುವ ಶಾಕ್ ನೀಡಿದ್ದಾರೆ.[ಬರಾವಲೋಕನ: ಕಾಣೆಯಾಗಿರೋ ಮಂಗಳೂರಿನ 64 ಕೆರೆ ಹುಡಿಕಿಕೊಡಿ ಪ್ಲೀಸ್!!]
ನೀರಿನ ಅಭಾವದ ಬಿಸಿ ತಟ್ಟಿದಾಗ ಟ್ಯಾಂಕರ್ ನೀರು ಪೂರೈಕೆ ಅನಿವಾರ್ಯ. ಈ ಪರಿಸ್ಥಿತಿ ಕಳೆದ ವರ್ಷವೂ ನಿರ್ಮಾಣವಾಗಿತ್ತು. ಪಾಲಿಕೆಯಲ್ಲಿ ಟ್ಯಾಂಕರ್ ಇಲ್ಲದ ಕಾರಣ ಗುತ್ತಿಗೆ ಆಧಾರದಲ್ಲಿ ಟ್ಯಾಂಕ್ ಪಡೆದುಕೊಂಡು ನೀರು ಪೂರೈಕೆ ಮಾಡಲಾಗಿತ್ತು.
ನಗರದಾದ್ಯಂತ ಈಗಾಗಲೇ ಹಲವು ಕಡೆಗಳಲ್ಲಿ ಟ್ಯಾಂಕರ್ ನೀರು ಪೂರೈಕೆ ಕಾರ್ಯ ಆರಂಭಗೊಂಡಿದ್ದು, ಖಾಸಗಿ ಬಾವಿ ನೀರನ್ನು ಟ್ಯಾಂಕರುಗಳಿಗೆ ತುಂಬಿಸಲಾಗುತ್ತಿದೆ. ಇದರಿಂದ ಬಾವಿ ನೀರೂ ಕಡಿಮೆಯಾಗುವ ಅಪಾಯ ಇದೆ.
ಇನ್ನು ಟ್ಯಾಂಕರುಗಳಲ್ಲಿ ಹೆಚ್ಚು ನೀರು ಪೂರೈಕೆ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಟ್ಯಾಂಕರ್ ನೀರಿನ ಬೆಲೆ ಏರಿಕೆ "ಒಂದು ಟ್ಯಾಂಕರ್ ನೀರಿಗೆ 700 ಇಲ್ಲವೇ 800 ರೂ ತೆಗೆದುಕೊಳ್ಳುತ್ತೇವೆ. ಡೀಸೆಲಿಗೆ ದರ ಏರಿಕೆಯಾಗಿರುವುದರಿಂದ ನೀರು ದರವೂ ಏರಿಕೆ ಅನಿವಾರ್ಯವಾಗಿದೆ. ಅಲ್ಲದೆ ಟ್ರಾಫಿಕ್ ಜಾಂನಲ್ಲಿ ಹೆಚ್ಚು ಸಲ ಓಡಾಟವೂ ಕಷ್ಟ ಸಾಧ್ಯ," ಎನ್ನುತ್ತಾರೆ ಟ್ಯಾಂಕರ್ ಚಾಲಕ ರಫೀಕ್ .
"ನಮಗೆ ನೀರಿನ ಅಗತ್ಯ ಇರುವುದರಿಂದಲೇ ನಾವು ನೀರು ಬೇಕೆಂದಾಗ ದುಡ್ಡು ನೀಡಿ ನೀರು ಖರೀದಿಸುವ ಪರಿಸ್ಥಿತಿ ಎದುರಾಗಿದೆ. ಇನ್ನು ಶಾಲೆಗಳಿಗೆ ರಜೆ ಇದ್ದು ಮಕ್ಕಳು ಮನೆಯಲ್ಲಿಯೇ ಇರುವುದರಿಂದ ನೀರಿನ ಬಳಕೆ ಕೂಡಾ ಹೆಚ್ಚಾಗುತ್ತದೆ," ಎಂದು ಬೋಂದೆಲ್ನ ಗೃಹಿಣಿಯೋರ್ವರು ತಿಳಿಸಿದ್ದಾರೆ.
ಒಟ್ಟಾರೆ ಈ ಬಾರಿ ಮಂಗಳೂರಿನ ಜನತೆಗೆ ನೀರಿನ ಕೊರತೆ ಕಾಡದು ಎಂದು ಮೇಯರ್ ಕವಿತಾ ಸನಿಲ್ ಹೇಳುತ್ತಿದ್ದರೂ, ಇನ್ನೊಂದೆಡೆ ಪಾಲಿಕೆ ಕಾರ್ಪೊರೇಟರುಗಳು ತಮ್ಮ ವಾರ್ಡಿನಲ್ಲಿ ಟ್ಯಾಂಕರ್ ಇಳಿಸುವ ಮೂಲಕ ಎಷ್ಟು ಆದಾಯಗಳಿಸಬಹುದು ಎನ್ನುವ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.