ಮೋದಿಯ ಸ್ವಚ್ಛ ಭಾರತ್ ಕನಸಿಗೆ ಕೈಜೋಡಿಸಿದ ಡಾ. ಕದ್ರಿ ಗೋಪಾಲನಾಥ್
ಮಂಗಳೂರು, ಸೆಪ್ಟೆಂಬರ್ 26 : ಖ್ಯಾತ ಸ್ಯಾಕ್ಸೊಫೋನ್ ವಾದಕ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಕದ್ರಿ ಗೋಪಾಲನಾಥ್ ಅವರು ನಗರದ ಹೊರವಲಯದ ಬೆಂಗ್ರೆಯ ಹಿರಿಯ ಪ್ರಾಥಮಿಕ ಶಾಲೆಗೆ ಎರಡು ಶೌಚಾಲಯಗಳನ್ನು ನಿರ್ಮಿಸಿ ಕೊಡುವ ಮೂಲಕ ಸ್ವಚ್ಛ ಭಾರತ ಯೋಜನೆಗೆ ಕೈಜೋಡಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, "ಈ ಹಿಂದೆ ಕಾರ್ಗಿಲ್ ಯುದ್ಧದ ವೇಳೆ ಸೈನಿಕರಿಗೆ ನೆರವು ನೀಡುವ ನಿಟ್ಟಿನಲ್ಲಿ ಅಂದಿನ ಪ್ರಧಾನಿ ವಾಜಪೇಯಿ ಅವರ ಕರೆಯ ಮೇರೆಗೆ ತಾನು ಸಂಗೀತ ಕಾರ್ಯಕ್ರಮ ನಡೆಸಿ ಅದರಿಂದ ಸಂಗ್ರಹವಾದ 6.50 ಲಕ್ಷ ರು. ಕಾರ್ಗಿಲ್ ಪರಿಹಾರ ನಿಧಿಗೆ ನೀಡಿದ್ದೇನೆ. ಇದೀಗ ಸ್ವಚ್ಛ ಭಾರತದ ಪರಿಕಲ್ಪನೆಯಡಿ ನನಗೆ ನನ್ನ ಊರಿನ ಶಾಲೆಯೊಂದರ ಉನ್ನತೀಕರಣಕ್ಕೆ ಮುಂದಾಗಲು ಅವಕಾಶ ದೊರಕಿದೆ" ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರಿಂದ ಚೆನ್ನೈನಲ್ಲಿ ತಾವು ನೆಲೆಸಿರುವ ನಿವಾಸಕ್ಕೆ ಪತ್ರವೊಂದು ಬಂದಿದ್ದು, ಸ್ವಚ್ಛ ಭಾರತಕ್ಕೆ ಕೊಡುಗೆ ನೀಡುವಂತೆ ಮನವಿ ಮಾಡಿದ್ದರು.
ಈ ಹಿನ್ನಲೆಯಲ್ಲಿ ಮಂಗಳೂರಿಗನೇ ಆಗಿರುವ ತಾನು ನಗರದ ತೀರಾ ಹಿಂದುಳಿದ ಶಾಲೆಗೆ ಶೌಚಾಲಯವನ್ನು ಒದಗಿಸುವ ಮೂಲಕ ಸ್ವಚ್ಛ ಭಾರತ ಯೋಜನೆಗೆ ತನ್ನಿಂದಾದ ನೆರವು ನೀಡಲು ಮುಂದಾಗಿರುವುದಾಗಿ ಹೇಳಿದರು.
ನಾಳೆ (ಸೆಪ್ಟೆಂಬರ್ 27) ಬೆಳಗ್ಗೆ 10:30ಕ್ಕೆ ಶಿಲಾನ್ಯಾಸದ ಮೂಲಕ ಎರಡು ಶೌಚಾಲಯಗಳ ನಿರ್ಮಾಣ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಬೆಂಗ್ರೆಯ ಸರಕಾರಿ ಶಾಲೆಯಲ್ಲಿ 60 ಮಕ್ಕಳು ಕಲಿಯುತ್ತಿದ್ದು, ಶೌಚಾಲಯವೇ ಇಲ್ಲ. ವಿಶಿಷ್ಟ ಚೇತನ ಮಕ್ಕಳಿಗಾಗಿ ಇರುವ ಒಂದು ಶೌಚಾಲಯವನ್ನೇ ಎಲ್ಲರೂ ಬಳಸುತ್ತಿದ್ದಾರೆ. ಶೌಚಕ್ಕಾಗಿ ಕ್ಯೂ ನಿಲ್ಲುವ ಸ್ಥಿತಿ ಇಲ್ಲಿನ ಮಕ್ಕಳದ್ದು ಎಂದು ಕಳವಳ ವ್ಯಕ್ತಪಡಿಸಿದರು.