ಕ್ಷಮಾ ಭಿಕ್ಷೆ ಕೇಳಿದ ಸಾವರ್ಕರ್ ದೇಶಪ್ರೇಮಿಯಾಗಲು ಹೇಗೆ ಸಾಧ್ಯ?: ಯುಟಿ ಖಾದರ್
ಮಂಗಳೂರು, ಆಗಸ್ಟ್ 19: ಸಾವರ್ಕರ್ ಕ್ಷಮಾಪಣೆಯ ಭಿಕ್ಷೆ ಬೇಡಿದ್ದರಿಂದ ಬ್ರಿಟಿಷರು ಕ್ಷಮೆ ನೀಡಿ ಬಿಡುಗಡೆ ಮಾಡಿದ್ದಾರೆ. ಬಳಿಕ ಪಿಂಚಣಿಗಾಗಿ ಬ್ರಿಟಿಷರ ಕಛೇರಿಗೆ ಸಾವರ್ಕರ್ ಅಲೆದಾಡಿದ್ದರು. ಬಿಡುಗಡೆಯಾದ ಬಳಿಕ ಸಾವರ್ಕರ್ ಸ್ವಾತಂತ್ರ್ಯ ಹೋರಾಟ ಮಾಡಿದ ಉದಾಹರಣೆ ಇದ್ದರೆ ತೋರಿಸಿ ಎಂದು ಮಾಜಿ ಸಚಿವ ಯುಟಿ ಖಾದರ್ ಸವಾಲೆಸೆದಿದ್ದಾರೆ.
ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಯುಟಿ ಖಾದರ್, " ಸಿದ್ಧರಾಮಯ್ಯ ಆಕ್ರೋಶ ಬರುವ ಹೇಳಿಕೆಯನ್ನು ನೀಡಿಲ್ಲ. ಕಾಂಗ್ರೆಸ್ ಗೆ ಸಾವರ್ಕರ್ ವಿರುದ್ದ ಇರೋದು ಸೈದಾಂತಿಕ ಭಿನ್ನಾಭಿಪ್ರಾಯ. ಕಾಂಗ್ರೆಸ್ ಎಂದೂ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಅಂತಾ ಹೇಳಿಲ್ಲ. ಸಾವರ್ಕರ್ ಅವರನ್ನು ಬ್ರಿಟಿಷರ ವಿರುದ್ಧ ಹೋರಾಡಿರೋದಕ್ಕೆ ಅಂಡಮಾನ್ ಜೈಲಿನಲ್ಲಿ ಕೂಡಿಹಾಕಿದ್ದರು.
ಸಿದ್ದರಾಮಯ್ಯ ಏಲ್ಲಿ ಬೇಕಾದ್ರು ಹೋಗಲಿ, ಮೊಟ್ಟೆ ಎಸೆಯಬೇಡಿ: ಪ್ರಲ್ಹಾದ್ ಜೋಶಿ
ಸಾವರ್ಕರ್ ಜೊತೆಗೆ ನೂರಾರು ಜನರನ್ನೂ ಜೈಲಿನೊಳಗೆ ಕೂಡಿ ಹಾಕಿದರು. ಈ ವೇಳೆ ಬಹುತೇಕ ಜನರನ್ನು ಬ್ರಿಟೀಷರು ಎದೆಗೆ ಗುಂಡು ಹಾಕಿ ಕೊಂದರು. ಹಲವು ಜನರಿಗೆ ಲಾಠಿಯಲ್ಲಿ ಹೊಡೆದು, ನೇಣಿಗೇರಿಸಿ, ಊಟ ನೀಡಿದೇ ಕೊಂದಿದ್ದಾರೆ. ಆದರೆ ಸಾವರ್ಕರ್ ಈ ನಡುವೆ ಬ್ರಿಟೀಷರಿಗೆ ಹತ್ತಕ್ಕೂ ಹೆಚ್ಚು ಬಾರಿ ಕ್ಷಮಾಪಣೆ ಪತ್ರ ಬರೆದ ಕಾರಣ ಬ್ರಿಟೀಷರು ಸಾವರ್ಕರ್ ಗೆ ಬಿಡುಗಡೆಯ ಭಿಕ್ಷೆ ನೀಡಿದರು ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿಕೆ ನೀಡಿದ್ದಾರೆ.
ಸಾವರ್ಕರ್ 1924 ನಂತರ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ರಾ?
ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಹೊರ ಬಂದ ಸಾವರ್ಕರ್ 1924 ನಂತರ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರಾ? ಈ ಬಗ್ಗೆ ದಾಖಲೆ ಇದ್ದರೆ ಕೊಡಿ, ಪಿಂಚಣಿಗಾಗಿ ಬ್ರಿಟೀಷ್ ಕಚೇರಿಗೆ ಸಾವರ್ಕರ್ ಅಲೆದಾಡಿದ್ದಾರೆ. ನಿಜವಾದ ಸ್ವಾತಂತ್ರ್ಯ ಹೋರಾಟಗಾರರು ಯಾರು? ಅಂಡಮಾನಿನ ಜೈಲಿನಲ್ಲಿ ಬ್ರಿಟೀಷರಿಂದ ಬಲಿಯಾದವರಾ? ಅಥವಾ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಬಿಡುಗಡೆಯಾದವರಾ? ಎಂದು ಬಿಜೆಪಿಯವರು ಉತ್ತರಿಸಬೇಕು ಎಂದು ಖಾದರ್ ಸವಾಲೆಸಿದಿದ್ದಾರೆ.
ಸರಕಾರದ ಜಾಹಿರಾತಿನಲ್ಲಿ ನೆಹರೂ ಫೋಟೋ ಮಿಸ್ಸಿಂಗ್
ನೆಹರೂ ಕ್ಷಮಾಪಣೆ ಪತ್ರ ಬರೆದ ಬಗ್ಗೆ ಪ್ರತಿಕ್ರಿಯೆ ನೀಡಿದ ಯುಟಿ ಖಾದರ್, ನೆಹರೂ ಕ್ಷಮಾಪಣೆ ಪತ್ರ ಬರೆದಿರೋದು ಅವರ ಪತ್ನಿಗೆ, ನನ್ನನ್ನು ಬ್ರಿಟಿಷರು ಬಿಡದಿದ್ದರೆ, ನಿನ್ನನ್ನು ನೋಡಲು ಸಾಧ್ಯವಾಗದಿದ್ದರೆ ಕ್ಷಮಿಸುಬಿಡು ಎಂದು ಪತ್ರ ಬರೆದಿದ್ದರು. ಆದರೆ ಸಾವರ್ಕರ್ ಕ್ಷಮಾಪಣಾ ಪತ್ರ ಬರೆದಿರೋದು ಬ್ರಿಟೀಷರಿಗೆ. ಸರಕಾರದ ಪರವಾಗಿ ಪತ್ರಿಕೆಗಳಲ್ಲಿ ನೀಡಿದ ಜಾಹೀರಾತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನೆಹರೂ ಫೋಟೋ ವನ್ನು ಸರ್ಕಾರ ಕೈ ಬಿಟ್ಟಿದೆ. ನೆಹರೂ ಫೋಟೋ ಹಾಕದಿರೋದರೇ ಉತ್ತಮ. ಯಾರು ಯಾರದ್ದೋ ಫೋಟೋ ಜೊತೆ ನೆಹರು ಫೋಟೋ ಹಾಕಿದ್ದರೆ ನೆಹರೂ ಗೌರವ ಕಡಿಮೆಯಾಗುತಿತ್ತು ಎಂದು ಯುಟಿ ಖಾದರ್ ಹೇಳಿದ್ದಾರೆ.
ಕಾಂಗ್ರೆಸ್ ಧ್ವನಿ ಅಡಗಿಸಲು ಸಾಧ್ಯ ಇಲ್ಲ
ಕೊಡಗಿನಲ್ಲಿ ಸಿದ್ಧರಾಮಯ್ಯ ಕಾರಿಗೆ ಮೊಟ್ಟೆ ಬಿಸಾಡಿರೋದು ಕೇವಲ ದೈಹಿಕ ದಾಳಿ ಅಲ್ಲ, ಇದು ವೈಚಾರಿಕತೆ ಮತ್ತು ಪ್ರಜಾಪ್ರಭುತ್ವದ ತತ್ವ ಆದರ್ಶದ ಮೇಲೆ ನಡೆಸುವ ದಾಳಿ. ಇಂತಹ ದಬ್ಬಾಳಿಕೆಯ ವಿರುದ್ಧವೇ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಈ ರೀತಿಯ ದಾಳಿಯಿಂದ ಕಾಂಗ್ರೆಸ್ ಧ್ವನಿ ಅಡಗಿಸಲು ಸಾಧ್ಯ ಇಲ್ಲ. ಇದು ನೇರ ಬಿಜೆಪಿ ಸರಕಾರದ ಕುಮ್ಮಕ್ಕಿನಿಂದ ನಡೆಯುತ್ತಿದೆ ಎಂದು ಖಾದರ್ ಆರೋಪಿಸಿದ್ದಾರೆ.
ಬಿಜೆಪಿಯದ್ದು ವಿನಾಶ ಕಾಲೇ ವಿಪರೀತ ಬುದ್ಧಿ
ಮಳೆ ಹಾನಿ ಪರಿಸ್ಥಿತಿ ವೀಕ್ಷಣೆಗೆ ಹೋದ ಸಿದ್ಧರಾಮಯ್ಯ ಜನಪರ ಧ್ವನಿ ಅಡಗಿಸಲು ನಡೆಸಿದ ದಾಳಿಯಾಗಿದೆ. ಹಾಗಾದರೆ ಸರಕಾರದ ವಿರುದ್ದ ಯಾರೂ ಮಾತನಾಡಲೇ ಬಾರದ?. ಈ ದಾಳಿಯನ್ನು ಯಾರೂ ಸಮರ್ಥನೆ ಮಾಡೋಕೆ ಸಾಧ್ಯ ಇಲ್ಲ. ಬಿಜೆಪಿಯದ್ದು ವಿನಾಶ ಕಾಲೇ ವಿಪರೀತ ಬುದ್ಧಿ. ಇಂತಹ ದಾಳಿ ನಮ್ಮ ನಿಲುವನ್ನು ಸಧೃಡಗೊಳಿಸಿದೆ. ಗ್ರಾಮಮಟ್ಟದಲ್ಲಿ ಈ ಬಗ್ಗೆ ಜನಜಾಗೃತಿ ಮಾಡುತ್ತೇವೆ ಎಂದು ಯುಟಿ ಖಾದರ್ ಹೇಳಿದ್ದಾರೆ.