ಕರಾವಳಿಯಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಕರೆ; ಉಗ್ರ ಸಂಪರ್ಕ ಮತ್ತೆ ಸಕ್ರಿಯ?
ಮಂಗಳೂರು, ಸೆಪ್ಟೆಂಬರ್ 15: ರಾಜ್ಯದ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎನ್ಐಎ ದಾಳಿ ಮಾಡಿ ಶಂಕಿತ ಉಗ್ರರನ್ನು ಬಂಧನ ಮಾಡಿದ ಬಳಿಕ ಸುಮ್ಮನಾಗಿದ್ದ ನಿಷೇಧಿತ ತುರಾಯ ಸ್ಯಾಟಲೈಟ್ ಫೋನ್ ಕರೆ ಮತ್ತೆ ಸದ್ದು ಮಾಡಿದೆ.
ಕಳೆದ ಒಂದು ವಾರದ ಅವಧಿಯಲ್ಲಿ ರಾಜ್ಯದ ನಾಲ್ಕು ಕಡೆಗಳಲ್ಲಿ ಸ್ಯಾಟಲೈಟ್ ಫೋನ್ಗಳು ಸಕ್ರಿಯ ಆಗಿರುವುದರ ಬಗ್ಗೆ ಕೇಂದ್ರ ಬೇಹುಗಾರಿಕಾ ಅಧಿಕಾರಿಗಳು ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ತನಿಖೆ ಆರಂಭಿಸಿರುವ ರಾಜ್ಯ ಗುಪ್ತಚರ ಇಲಾಖಾ ಅಧಿಕಾರಿಗಳು, ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ರಾಜ್ಯದ ಹಲವು ಭಾಗಗಳಲ್ಲಿ ಸ್ಯಾಟಲೈಟ್ ಫೋನ್ ಕರೆ ಸಂಪರ್ಕ ಕಂಡುಬಂದಿದ್ದು, ನಿಗೂಢ ವ್ಯಕ್ತಿಗಳ ಜೊತೆ ಸಂಪರ್ಕ ಸಾಧಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ಎನ್ಐಎ ಅಧಿಕಾರಿಗಳು ದೇಶದ ವಿವಿಧ ಭಾಗಗಳಲ್ಲಿ ದಾಳಿ ಮಾಡಿ ಹಲವು ಶಂಕಿತರನ್ನು ವಶಕ್ಕೆ ಪಡೆದುಕೊಂಡಿದ್ದರು. ಕೇರಳದ ಕಣ್ಣೂರು ಮಂಗಳೂರು ಹಾಗು ಭಟ್ಕಳದಲ್ಲಿ ಎನ್ಐಎ ದಾಳಿ ಬಳಿಕ ಸ್ಯಾಟಲೈಟ್ ಫೋನ್ ಕರೆಗಳ ಸಂಪರ್ಕ ಸ್ವಲ್ಪ ದಿನದ ವರೆಗೆ ಕಂಡುಬಂದಿರಲಿಲ್ಲ. ಕಳೆದ ಒಂದು ವಾರದಿಂದ ಮತ್ತೆ ಸ್ಯಾಟಲೈಟ್ ಫೋನ್ ಕರೆಗಳು ಕಂಡುಬಂದಿದ್ದು, ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಮತ್ತೆ ಬೆಚ್ಚಿಬಿದ್ದಿದ್ದಾರೆ.
ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದ ದಟ್ಟಾರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಬಳಕೆ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯಿಂದ ಮಾಹಿತಿ ನೀಡಿದ್ದು, ರಾಜ್ಯದ 4 ಕಡೆ ಸ್ಯಾಟಲೈಟ್ ಫೋನ್ ಸಂಪರ್ಕ ಸಾಧನವಾಗಿರುವ ಬಗ್ಗೆ ರಾಜ್ಯ ಗುಪ್ತಚರ ಇಲಾಖೆಗೆ ಕೇಂದ್ರ ಬೇಹುಗಾರಿಕಾ ಅಧಿಕಾರಿಗಳು ಮಾಹಿತಿ ರವಾನಿಸಿದ್ದಾರೆ.
ಕಳೆದ ಒಂದು ವಾರದ ಅಂತರದಲ್ಲಿ ಉಡುಪಿ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಎರಡು ಕಡೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ದಟ್ಟಾರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ಗಳು ಸಂಪರ್ಕ ಸಾಧನವಾಗಿರುವ ಬಗ್ಗೆ ಕೇಂದ್ರ ಬೇಹುಗಾರಿಕಾ ಅಧಿಕಾರಿಗಳು ಮಾಹಿತಿ ರವಾನಿಸಿದ್ದಾರೆ.
ನಿಷೇಧಿತ ತುರಾಯ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿರುವ ನಿಗೂಢ ವ್ಯಕ್ತಿಗಳ ಬಗ್ಗೆ ಹಲವು ಆಯಾಮದಲ್ಲಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಇತ್ತೀಚೆಗೆ ಶ್ರೀಲಂಕಾದಿಂದ ಶಂಕಿತ ಉಗ್ರರು, ದೇಶದ ಕರಾವಳಿಗೆ ಭಾಗಕ್ಕೆ ಒಳನುಸುಳಿರುವ ಬಗ್ಗೆ ಗುಪ್ತಚರ ಇಲಾಖೆ ಹೈಅಲರ್ಟ್ ಘೋಷಣೆ ಮಾಡಲಾಗಿತ್ತು. ಕರಾವಳಿ ಭಾಗದ ಸ್ಲೀಪರ್ ಸೆಲ್ಗಳನ್ನು ಬಳಸಿ ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ರವಾನಿಸಿತ್ತು.
ದೇಶಕ್ಕೆ ಒಳನುಸುಳಿರುವ 12 ಶ್ರೀಲಂಕಾದ ಶಂಕಿತ ಉಗ್ರರಿಗೂ ಹಾಗೂ ಈ ಸ್ಯಾಟಲೈಟ್ ಫೋನ್ ಸಂಪರ್ಕಕ್ಕೂ ಲಿಂಕ್ ಇದೆಯಾ ಎನ್ನುವುದರ ಬಗ್ಗೆ ರಾಜ್ಯ ಗುಪ್ತಚರ ಹಾಗೂ ಎಎಸ್ಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಒಟ್ಟಿನಲ್ಲಿ ಎನ್ಐಎ ದಾಳಿ ಬಳಿಕ ಉಗ್ರ ಚಟುವಟಿಕೆಗಳ ಬಗ್ಗೆ ಆತಂಕಗೊಂಡಿದ್ದ ಕರಾವಳಿಯ ಜನತೆಗೆ ಈಗ ಮತ್ತೆ ಸ್ಯಾಟಲೈಟ್ ಫೋನ್ ಕರೆ ಸಕ್ರಿಯವಾಗಿರುವುದರಿಂದ ಮತ್ತೆ ಭೀತಿಗೆ ಒಳಗಾಗಿದ್ದಾರೆ.