ರಾಜೀನಾಮೆ ಹಿಂಪಡೆಯುವಂತೆ ಪ್ರೀತಿಪಾತ್ರರ ಒತ್ತಾಯ; ತಟಸ್ಥವಾಗೇ ಉಳಿದ ಸೆಂಥಿಲ್
ಮಂಗಳೂರು, ಸೆಪ್ಟೆಂಬರ್ 9: ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿರುವ ಸಸಿಕಾಂತ್ ಸೆಂಥಿಲ್ ಅವರ ಮನವೊಲಿಕೆಗೆ ಹಲವು ಇಲಾಖೆಗಳ ಅಧಿಕಾರಿಗಳು ಹಾಗೂ ಹಿತೈಷಿಗಳು ಮೇಲಿಂದ ಮೇಲೆ ಪ್ರಯತ್ನ ಮಾಡುತ್ತಲೇ ಇದ್ದಾರೆ. ಭಾನುವಾರ ಸಸಿಕಾಂತ್ ಅವರ ನಿವಾಸಕ್ಕೆ ಭೇಟಿ ನೀಡಿದ ಹಲವರು ರಾಜೀನಾಮೆ ಹಿಂಪಡೆಯುವಂತೆ ಒತ್ತಾಯ ಹೇರಿದ್ದಾರೆ.
ಆದರೆ ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ತಟಸ್ಥರಾಗಿದ್ದಾರೆ ಸೆಂಥಿಲ್. ತಾನು ನಂಬಿದ್ದ ಸಿದ್ಧಾಂತಗಳ ವಿರುದ್ಧವಾಗಿ ಕೆಲಸ ಮಾಡಲು ತನ್ನಿಂದ ಸಾಧ್ಯವಿಲ್ಲ. ಇದೇ ಕಾರಣಕ್ಕೆ ತಾನು ಈ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿರುವುದಾಗಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿದ್ದ ದಿನ ತಿಳಿಸಿದ್ದರು.
ಫ್ಯಾಸಿಸ್ಟ್ ದಾಳಿ ಸ್ಪಷ್ಟ: ರಾಜೀನಾಮೆಗೆ ಕಾರಣ ನೀಡಿದ ಸಸಿಕಾಂತ್ ಸೆಂಥಿಲ್
ರಾಜೀನಾಮೆ ಕೊಟ್ಟ ನಂತರ ಅವರು ಶುಕ್ರವಾರ ಹಾಗೂ ಶನಿವಾರ ಯಾರ ಸಂಪರ್ಕಕ್ಕೂ ದೊರೆಯಲಿಲ್ಲ. ಶನಿವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಹೊಸ ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿದ್ದರು. ಭಾನುವಾರ ಸರ್ಕಾರಿ ನಿವಾಸದಲ್ಲೆ ಉಳಿದುಕೊಂಡಿದ್ದು, ಬೆಳಿಗ್ಗೆಯಿಂದ ಸಂಜೆವರೆಗೆ ಅಧಿಕಾರಿಗಳೊಂದಿಗೆ ಮತ್ತು ಹಿತೈಷಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಸಸಿಕಾಂತ್ ಸೆಂಥಿಲ್ ಪಾಕಿಸ್ತಾನಕ್ಕೆ ತೆರಳಲಿ ಎಂದ ಅನಂತ್ ಕುಮಾರ್ ಹೆಗಡೆ
ಈ ಸಂದರ್ಭ ಇನ್ನು ಕೆಲವೇ ದಿನಗಳಲ್ಲಿ ತಮ್ಮ ಭವಿಷ್ಯದ ಯೋಜನೆಗಳ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದು, ಕರ್ನಾಟಕಕ್ಕೆ ಹಿಂದಿರುಗುವ ಯೋಜನೆಯ್ನು ಹಂಚಿಕೊಂಡಿದ್ದಾರೆ. ಸೋಮವಾರ ಸೆಂಥಿಲ್ ಅವರು ಇಲ್ಲಿಂದ ಚೆನ್ನೈಗೆ ಹೊರಡಲಿದ್ದಾರೆ ಎನ್ನಲಾಗಿದೆ.