ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ ಧಿಡೀರ್ ಸ್ಥಗಿತ; ತರಾಟೆ ತೆಗೆದುಕೊಂಡ ಭಕ್ತರು
ಮಂಗಳೂರು, ಏಪ್ರಿಲ್ 21: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಆದೇಶ ಜಾರಿಯಾದ ಬೆನ್ನಲ್ಲೇ ಮಾರ್ಗಸೂಚಿ ಬಗ್ಗೆ ಗೊಂದಲ ಏರ್ಪಟ್ಟಿದೆ.
ಧಾರ್ಮಿಕ ಕ್ಷೇತ್ರಗಳನ್ನು ಇಂದಿನಿಂದಲೇ ಬಂದ್ ಮಾಡಲು ರಾಜ್ಯ ಸರ್ಕಾರ ಆದೇಶ ಮಾಡಿದ್ದು, ಧಾರ್ಮಿಕ ಕ್ಷೇತ್ರಗಳಲ್ಲಿ ಮುಂಗಡವಾಗಿ ಸೇವೆ ಬುಕ್ ಮಾಡಿದವರು ಪರದಾಡುವಂತಾಗಿದೆ. ಈಗಾಗಲೇ ದೇವಸ್ಥಾನಗಳನ್ನು ಬಂದ್ ಮಾಡಲು ಅಧಿಕಾರಿಗಳು ಸೂಚಿಸಿದ್ದಾರೆ.
ಇತಿಹಾಸ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಭಕ್ತರಲ್ಲಿ ಗೊಂದಲ ಮೂಡಿದ್ದು, ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಬುಕ್ ಮಾಡಿರುವ ಭಕ್ತಾದಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತ ಮಂಡಳಿ ದೇವಸ್ಥಾನದಲ್ಲಿ ನಡೆಯಲಿರುವ ಸೇವೆಗಳನ್ನು ಧಿಡೀರ್ ಆಗಿ ಸ್ಥಗಿತಗೊಳಿಸಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಇಂದು ಸರ್ಪಸಂಸ್ಕಾರ ಸೇವೆಯನ್ನು ದೇವಳದಲ್ಲಿ ಮುಂಗಡವಾಗಿ ಕಾಯ್ದಿರಿಸಿದ ಭಕ್ತರು ದೂರದ ಊರುಗಳಿಂದ ಆಗಮಿಸಿದ್ದರು. ಸರ್ಪಸಂಸ್ಕಾರ ಪೂಜೆ ನೆರವೇರಿಸಲು ಭಕ್ತಾದಿಗಳು ಆಗಮಿಸಿದ್ದರೂ, ಸರಕಾರದ ಆದೇಶದ ಹಿನ್ನಲೆಯಲ್ಲಿ ಎಲ್ಲಾ ಸೇವೆಗಳು ಬಂದ್ ಆಗಿದೆ. ಸಂವಹನ ಕೊರತೆಯ ಕಾರಣದಿಂದ ದೇವಸ್ಥಾನದಲ್ಲಿ ಸೇರಿರುವ ಭಕ್ತರು, ದೇವಳದ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಕ್ತರು ಎರಡು, ಮೂರು ತಿಂಗಳ ಹಿಂದೆಯೇ ಸೇವೆಗಳನ್ನು ಬುಕ್ ಮಾಡಿದ್ದು, ಈಗ ಧಿಡೀರ್ ಆಗಿ ಸೇವೆಗಳನ್ನು ಸ್ಥಗಿತಗೊಳಿಸಿರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪೂರ್ವಭಾವಿಯಾಗಿ ಸೂಚನೆ ನೀಡಿದ್ದರೆ, ಕ್ಷೇತ್ರಕ್ಕೆ ಬರುತ್ತಿರಲಿಲ್ಲ. ದೂರದ ಊರುಗಳಿಂದ ಮಕ್ಕಳು ಹಿರಿಯರ ಜೊತೆ ಬಂದಿದ್ದು, ಪರದಾಡುವಂತಾಗಿದೆ ಎಂದು ಅಸಹನೆ ವ್ಯಕ್ತಪಡಿಸಿದರು.