ಇಡೀ ಗ್ರಾಮ ಮೂರನೇ ಕಣ್ಣಿನಲ್ಲಿ ಸುಭದ್ರ; ರಾಜ್ಯಕ್ಕೆ ಮಾದರಿಯಾದ ಸಂಪಾಜೆ ಗ್ರಾಮ
ಮಂಗಳೂರು, ಡಿಸೆಂಬರ್ 16: ಯಾವುದೇ ಅಪರಾಧ ಪ್ರಕರಣಗಳು ನಡೆದಾಗ ಪೊಲೀಸ್ ಇಲಾಖೆಗೆ ಬೇಕಾಗಿರುವುದು ಸಾಕ್ಷಿ. ಅದೆಷ್ಟೋ ಪ್ರಕರಣಗಳು ಸಾಕ್ಷಿ ಇಲ್ಲದೇ ಹಳ್ಳ ಹಿಡಿದಿರುವುದನ್ನು ಕಾಣುತ್ತೇವೆ.
ಆದರೆ ದಕ್ಷಿಣ ಕನ್ನಡ ಜಿಲ್ಲೆ ಈ ಗ್ರಾಮದಲ್ಲಿ ಯಾವುದೇ ಘಟನೆಗಳೂ ನಡೆದರೂ ತಪ್ಪಿಸಿಕೊಳ್ಳುವ ಪ್ರಮೇಯವೇ ಇರುವುದಿಲ್ಲ. ಯಾರ ಕಣ್ಣಿನಿಂದ ತಪ್ಪಿದರೂ ಮೂರನೇ ಕಣ್ಣಿನಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಈ ಗ್ರಾಮ ಸಂಪೂರ್ಣ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿದೆ.
ತಮ್ಮ ವ್ಯಾಪ್ತಿಗೆ ಬರುವ ಪ್ರತಿಯೊಂದು ವ್ಯವಸ್ಥೆಗಳನ್ನೂ ಗಮನಿಸುವುದು ಆಯಾಯ ಸ್ಥಳೀಯಾಡಳಿತದ ಜವಾಬ್ದಾರಿ. ಆದರೆ ಜವಾಬ್ದಾರಿಗಳನ್ನು ಎಷ್ಟು ಸ್ಥಳೀಯಾಡಳಿತ ವ್ಯವಸ್ಥೆಗಳು ಪ್ರಾಮಾಣಿಕವಾಗಿ ನಿಭಾಯಿಸುತ್ತಿದೆ ಎನ್ನುವುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ. ಆದರೆ ಇಲ್ಲೊಂದು ಪಂಚಾಯತ್ ತಮ್ಮ ವ್ಯಾಪ್ತಿಗೆ ಬರುವ ಪ್ರತಿಯೊಂದು ಚಟುವಟಿಕೆಗಳನ್ನೂ ಮೂರನೇ ಕಣ್ಣಿನ ಮೂಲಕ ಕಾವಲು ಕಾಯುತ್ತಿದೆ. ರಾಜ್ಯದ ಕೆಲವೇ ಕೆಲವು ಮಾದರಿ ಗ್ರಾಮ ಪಂಚಾಯತ್ಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ಕೂಡಾ ಒಂದಾಗಿದೆ.
ಸಂಪಾಜೆ ಪೇಟೆಯ ತುಂಬಾ ಸಿಸಿ ಕ್ಯಾಮೆರಾಗಳು
ಇಂದಿನ ಬ್ಯುಸಿ ಜೀವನದ ಭರಾಟೆಯಲ್ಲಿ ತಮ್ಮ ಅಕ್ಕಪಕ್ಕದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಗಮನಿಸಲು ಸಮಯ ಇಲ್ಲದ ಸ್ಥಿತಿಯಿದೆ. ಇಂಥ ಪರಿಸ್ಥಿತಿಯಲ್ಲಿ ಒಂದು ಊರು, ಪಟ್ಟಣದ ಜನರ ಚಲನವಲನವನ್ನು ನಿಯಂತ್ರಿಸುವುದು ತ್ರಾಸದ ಕೆಲಸವೇ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ತಮ್ಮ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ನಿರಂತರ ಕಣ್ಗಾವಲನ್ನು ಇಡುತ್ತಿದೆ. ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಬಳಸಿಕೊಂಡಿರುವ ಈ ಗ್ರಾಮ ಪಂಚಾಯತ್ ತನ್ನ ವ್ಯಾಪ್ತಿಗೆ ಬರುವ ಕಲ್ಲುಗುಂಡಿ, ಸಂಪಾಜೆ ಪೇಟೆಯ ತುಂಬಾ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಎಲ್ಲಾ ಚಲನವಲನಗಳನ್ನು ನಿಯಂತ್ರಿಸುತ್ತಿದೆ.
ಉತ್ತಮ ಆದಾಯವನ್ನೂ ಪಡೆಯುತ್ತಿದೆ
ಅತ್ಯಂತ ಮಾದರಿ ಗ್ರಾಮ ಪಂಚಾಯತ್ ಎಂದು ಗುರುತಿಸಿಕೊಂಡಿರುವ ಈ ಪಂಚಾಯತ್ ತನ್ನ ಕಚೇರಿ ಸೇರಿದಂತೆ ಪಂಚಾಯತ್ ಆಡಳಿತಕ್ಕೆ ಬರುವ ಎಲ್ಲಾ ಸ್ವತ್ತುಗಳನ್ನೂ ಯಶಸ್ವಿಯಾಗಿ ನಿಭಾಯಿಸುವ ಮೂಲಕ ಉತ್ತಮ ಆದಾಯವನ್ನೂ ಪಡೆಯುತ್ತಿದೆ. ಪಂಚಾಯತ್ ಕಟ್ಟಡದಲ್ಲಿ ಕೆಳ ಅಂತಸ್ತಿನಲ್ಲಿ ಪಂಚಾಯತ್ ಕಚೇರಿಯಿದ್ದರೆ, ಮೇಲಿನ ಅಂತಸ್ತಿನಲ್ಲಿ ಸುಸಜ್ಜಿತವಾದ ಗ್ರಂಥಾಲಯವನ್ನು ನಡೆಸುತ್ತಿದೆ. ಪಂಚಾಯತ್ನ ಈ ಗ್ರಂಥಾಲಯದಲ್ಲಿ ಐದು ಸಾವಿರಕ್ಕೂ ಮಿಕ್ಕಿದ ವಿವಿಧ ಬಗೆಯ ಪುಸ್ತಕಗಳಿದ್ದು, ಪುಸ್ತಕ ಓದುವವರಿಗಾಗಿ ಆಸನದ ವ್ಯವಸ್ಥೆಯನ್ನೂ ಮಾಡಲಾಗಿದೆ.
ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತ್ನಲ್ಲಿ ಆಶ್ರಯ
ಈ ಎಲ್ಲಾ ವ್ಯವಸ್ಥೆಗಳ ನಡುವೆ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಈ ಪಂಚಾಯತ್ ವಿದ್ಯಾರ್ಥಿಗಳಿಗಾಗಿ ಮಾಡಿದ ಸೇವೆಯು ಎಲ್ಲರ ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ಅತ್ಯಂತ ಹೆಚ್ಚು ಹಿಂದುಳಿದ ಪ್ರದೇಶಗಳನ್ನು ಹೊಂದಿರುವ ಸಂಪಾಜೆ ಗ್ರಾಮ ಪಂಚಾಯತ್ನ ಹಲವೆಡೆ ಮೊಬೈಲ್ ನೆಟ್ವರ್ಕ್ ಸಮಸ್ಯೆ ತೀರಾ ಹೆಚ್ಚಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಆನ್ಲೈನ್ ಶಿಕ್ಷಣವನ್ನು ಪಡೆಯಬೇಕಾದ ಅನಿವಾರ್ಯತೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತ್ನಲ್ಲಿ ಆಶ್ರಯ ನೀಡುವ ಮೂಲಕ ನೆರವಾಗಿತ್ತು.
ಈ ಪಂಚಾಯತ್ನ ಸಂಜೀವಿನಿ ಗುಂಪುಗಳ ಸದಸ್ಯರಿಗೆ ಹೊಲಿಯುವ ಯಂತ್ರಗಳನ್ನು ವಿತರಿಸಿ, ಆ ಸದಸ್ಯರಿಗೆ ತಮ್ಮದೇ ಕಟ್ಟಡದಲ್ಲಿ ಕೆಲಸ ನಿರ್ವಹಿಸಲು ಬೇಕಾದ ವ್ಯವಸ್ಥೆಗಳನ್ನೂ ಮಾಡಿಕೊಟ್ಟಿದೆ ಎನ್ನುತ್ತಾರೆ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಕೆ. ಹಮೀದ್.
ಕಸ ವಿಲೇವಾರಿಗಾಗಿ ಹೊಸ ವಾಹನ ಖರೀದಿ
ಕಚೇರಿ, ಅಂಗನವಾಡಿ, ಸಭಾಂಗಣ, ಅತಿಥಿ ಗೃಹ ಹೀಗೆ ಹಲವು ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿರುವ ಸಂಪಾಜೆ ಪಂಚಾಯತ್ ಈ ಮೂಲಕ ಉತ್ತಮ ಆದಾಯವನ್ನೂ ಪಡೆಯುತ್ತಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗಾಗಿ ಹೊಸ ವಾಹನವನ್ನೂ ಖರೀದಿಸಲಾಗಿದ್ದು, ಪಂಚಾಯತ್ನ ಈ ಕಾರ್ಯವೈಖರಿಗೆ ರಾಷ್ಟ್ರೀಯ ಪ್ರಶಸ್ತಿಗಳೂ ಸಂದಿವೆ. ಎರಡು ಬಾರಿ ಕೇಂದ್ರ ಸರಕಾರದ ಗಾಂಧೀ ಗ್ರಾಮ ಪುರಸ್ಕಾರ ಪ್ರಶಸ್ತಿಯೂ ಲಭಿಸಿರುವುದು ಸಂಪಾಜೆ ಗ್ರಾಮ ಪಂಚಾಯ್ ಆಡಳಿತ ವೈಖರಿಯ ಸೇವೆಗೆ ಸಾಕ್ಷಿಯಂತಿದೆ.
ನಿಜವಾದ ಭಾರತ ಕಾಣಸಿಗುವುದು ದೇಶದ ಹಳ್ಳಿಗಳಲ್ಲಿ ಅನ್ನುವ ಗಾಂಧೀಜಿ ಮಾತಿಗೆ ಸಂಪಾಜೆ ಗ್ರಾಮ ಉತ್ತಮ ಉದಾಹರಣೆಯಾಗಿದೆ. ಎಲ್ಲಾ ಗ್ರಾಮ ಪಂಚಾಯತ್ಗಳು ಸಂಪಾಜೆ ಗ್ರಾಮ ಪಂಚಾಯತ್ ತೋರಿಸಿದ ಇಚ್ಛಾ ಶಕ್ತಿಯನ್ನು ತೋರಿಸಿದರೆ ಭಾರತದ ಎಲ್ಲಾ ಗ್ರಾಮಗಳು ಆದರ್ಶ ಗ್ರಾಮಗಳಾಗುವುದರಲ್ಲಿ ಸಂಶಯವಿಲ್ಲ.
Recommended Video