ಹೆತ್ತವರಿಗೆ ಸೆಲ್ಯೂಟ್ ಮಾಡಿ, ದುಷ್ಟರಿಗೆ ವೀರಭದ್ರರಾಗಿ; ಪೊಲೀಸರಿಗೆ ವೀರೇಂದ್ರ ಹೆಗ್ಗಡೆ ಕರೆ
ಮಂಗಳೂರು, ಸೆಪ್ಟೆಂಬರ್ 17: ಪೊಲೀಸರು ಹೆತ್ತವರಿಗೆ ಸೆಲ್ಯೂಟ್ ಮಾಡಬೇಕು, ಆದರೆ ದುಷ್ಟರಿಗೆ, ಸಮಾಜದ್ರೋಹಿಗಳಿಗೆ ವೀರಭದ್ರನ ಅವತಾರ, ದುರ್ಗಾಮಾತೆಯ ಅವತಾರ ತಾಳಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಮಂಗಳೂರಿನ ಗೋನ್ಝಾಗ್ ಹಾಲ್ನಲ್ಲಿ ನಡೆದ ಪೊಲೀಸ್ ಆಕಾಂಕ್ಷಿಗಳ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವೀರೇಂದ್ರ ಹೆಗ್ಗಡೆ, ಹೆತ್ತವರಿಗೆ, ಹಿರಿಯರಿಗೆ ಸೆಲ್ಯೂಟ್ ಮಾಡಿ. ಆದರೆ ಸಮಾಜದ್ರೋಹಿಗಳಿಗೆ ಮತ್ತು ದುಷ್ಟರಿಗೆ ವೀರಭದ್ರರಾಗಿ, ದುರ್ಗಾಮಾತೆಯಾಗಿ ದಂಡಿಸಿ ಎಂದು ವೀರೇಂದ್ರ ಹೆಗ್ಗಡೆ ಕರೆ ನೀಡಿದರು.
ಮಂಗಳೂರು ನಗರ ಪೊಲೀಸ್ ಆಯೋಜಿಸಿದ 30 ದಿನಗಳ ಪೊಲೀಸ್ ಅಕಾಂಕ್ಷಿಗಳ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಮಂಗಳೂರಿನ ಗೋನ್ಝಾಗ್ ಹಾಲ್ನಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಯುವಕ- ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಬೇಕೆಂಬ ಉದ್ದೇಶದಿಂದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ನೇತೃತ್ವದಲ್ಲಿ ನಡೆದ ಪೊಲೀಸ್ ಅಕಾಂಕ್ಷಿಗಳ ತರಬೇತಿ ಕಾರ್ಯಗಾರ ಸಂಪನ್ನಗೊಂಡಿದೆ.
ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳ ಸುಮಾರು 206 ಶಿಬಿರಾರ್ಥಿಗಳು ಭಾಗವಹಿಸಿದ್ದು, ಪೊಲೀಸ್ ದೈಹಿಕ ನೇಮಕಾತಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ತರಬೇತಿ ನೀಡಲಾಗಿದೆ. ಒಂದು ತಿಂಗಳ ಉಚಿತ ತರಬೇತಿ ಬಳಿಕ ಮಂಗಳೂರು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಚಲನಚಿತ್ರಗಳಲ್ಲಿ, ಹಾಸ್ಯ ಕಾರ್ಯಕ್ರಮಗಳಲ್ಲಿ ಪೊಲೀಸರನ್ನು ಹಾಸ್ಯದ ವಸ್ತುವಾಗಿ ಬಳಕೆ ಮಾಡುತ್ತಾರೆ. ಪೊಲೀಸ್ ಸಮವಸ್ತ್ರ ಧರಿಸಿದ ವ್ಯಕ್ತಿಯನ್ನು ಹಾಸ್ಯಗಾರನನ್ನಾಗಿ ಮಾಡುತ್ತಾರೆ. ಪೊಲೀಸರ ಯೂನಿಫಾರ್ಮ್ಗೆ ಬಹಳ ಮಹತ್ವವಿದೆ. ಆದರೆ ಪೊಲೀಸರನ್ನು ಹಾಸ್ಯಗಾರರನ್ನಾಗಿ ಮಾಡುವುದರಿಂದ ಸಮಾಜಕ್ಕೆ ನಷ್ಟವಾಗುತ್ತದೆ, ದೇಶಕ್ಕೆ ನಷ್ಟವಾಗುತ್ತದೆ ಎಂದರು.
ಚಲನಚಿತ್ರಗಳಲ್ಲಿ ಪೊಲೀಸರನ್ನು ಧೈರ್ಯವಂತರನ್ನಾಗಿ ಮಾಡಿ, ಸತ್ಯ- ನ್ಯಾಯ- ಧರ್ಮದ ವಿಚಾರದಲ್ಲಿ ನಡೆಯುವಂತರಾಗಿ ಮಾಡಿ. ಕೆಲವು ಚಿತ್ರಗಳಲ್ಲಿ ಪೊಲೀಸರ ಶೌರ್ಯದ ಬಗ್ಗೆ ತೋರಿಸುತ್ತದೆ. ಇನ್ನೂ ಕೆಲವು ಚಿತ್ರಗಳಲ್ಲಿ ಪೊಲೀಸರು ಹಾಸ್ಯದ ಸರಕು ಆಗುತ್ತಿರುವುದು ದುಃಖದ ವಿಚಾರ. ಮುಂದೆ ಪೊಲೀಸರನ್ನು ಹಾಸ್ಯದ ಸರಕನ್ನಾಗಿ ಮಾಡಬಾರದು ಎಂದು ವೀರೇಂದ್ರ ಹೆಗ್ಗಡೆ ಮನವಿ ಮಾಡಿದರು.
ನಮ್ಮ ಕ್ಷೇತ್ರಕ್ಕೆ ಬರುವ ಹಲವು ಮಕ್ಕಳನ್ನು ಭವಿಷ್ಯದಲ್ಲಿ ಮುಂದಿನ ಗುರಿ ಏನು ಅಂತಾ ಕೇಳಿದರೆ ತುಂಬಾ ಮಂದಿಯ ಉತ್ತರ ಪೊಲೀಸ್ ಅಂತಾ ಇರುತ್ತದೆ. ಆದರೆ ಕಾಲ ಕ್ರಮೇಣ ಪೊಲೀಸರ ಕಠಿಣ ಕೆಲಸ ನೋಡಿ ಪೊಲೀಸ್ ಬದಲು ಆರಾಮಾಗಿ ಮಾಡುವ ಉದ್ಯೋಗಕ್ಕೆ ಹೋಗುತ್ತಾರೆ. ಪೊಲೀಸ್ ಯೂನಿಫಾರ್ಮ್ಗೆ ಬಹಳ ಮಹತ್ವವಿದ್ದು, ಯುವಕ- ಯುವತಿಯರು ಶಿಷ್ಟರ ರಕ್ಷಣೆಯ, ದುಷ್ಟರ ಶಿಕ್ಷಣೆಯ ಪೊಲೀಸ್ ಕೆಲಸವನ್ನು ಆಯ್ಕೆ ಮಾಡಬೇಕೆಂದು ಕರೆ ನೀಡಿದರು.
ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಶಶಿಕುಮಾರ್ ಕಾರ್ಯವೈಖರಿ ಬಹಳ ವಿಭಿನ್ನವಾಗಿದೆ. ಪೊಲೀಸರು ಕರ್ತವ್ಯ ನಿರ್ವಹಿಸಿದ ಪ್ರದೇಶದ ಮಣ್ಣಿನ ಮಗ ಆಗುತ್ತಾರೆ. ಶಶಿಕುಮಾರ್ ಕೂಡಾ ದಕ್ಷಿಣ ಕನ್ನಡ ಜಿಲ್ಲೆಯ ಮಣ್ಣಿನ ಮಗನಾಗಿದ್ದಾರೆ. ತುಳು ಭಾಷೆಯನ್ನು ಕಲಿತು ಇನ್ನೂ ಹತ್ತಿರವಾಗಿದ್ದಾರೆ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಾವಾಣೆ ಋಷಿಕೇಶ್ ಭಗವಾನ್, ಎಎನ್ಎಫ್ ದಕ್ಷಿಣ ಕನ್ನಡ ಜಿಲ್ಲಾ ಅಧೀಕ್ಷಕ ನಿಖಿಲ್, ಮಂಗಳೂರು ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.