ಆಯುರ್ವೇದ ಚಿಕಿತ್ಸೆ ಪಡೆಯುವುದೂ ಮೋಜಾ? : ಬಿಎಸ್ ವೈ ಹೇಳಿಕೆಗೆ ಸಾರಾ ಮಹೇಶ್ ತಿರುಗೇಟು
ಮಂಗಳೂರು, ಏಪ್ರಿಲ್ 30 : ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರೆಸಾರ್ಟ್ ನಲ್ಲಿ ಮೋಜು ಮಾಡ್ತಿದ್ದಾರೆ ಎಂದು ಆರೋಪಿಸಿದ್ದ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಸಚಿವ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದಾರೆ.
ಉಡುಪಿಯಲ್ಲಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರಿಗೆ ಜವಾಬ್ದಾರಿ ಇದೆ. ನಾವು ನಮ್ಮ ಕೆಲಸ ಮಾಡ್ತಿದ್ದೇವೆ. ರಾಜಕಾರಣಿಗಳಿಗೂ ವೈಯಕ್ತಿಕ ಜೀವನ ಇರುತ್ತದೆ ಎಂದು ಕಿಡಿಕಾರಿದರು.
ಉಡುಪಿಯಲ್ಲೂ ಮಾಧ್ಯಮಗಳ ಮೇಲೆ ಮುನಿಸು ತೋರಿದ ಕುಮಾರಸ್ವಾಮಿ
ಮುಖ್ಯಮಂತ್ರಿಗಳು ಚುನಾವಣೆ ಮುಗಿದ ತಕ್ಷಣ ಐದು ದಿನ ಚಿಕಿತ್ಸೆಗಾಗಿ ಇಲ್ಲಿಗೆ ಆಗಮಿಸಿದ್ದರು. ಶ್ರೀಲಂಕಾ ಘಟನೆ ಹಿನ್ನೆಲೆಯಲ್ಲಿ ಎರಡೇ ದಿನದಲ್ಲಿ ಚಿಕಿತ್ಸೆ ಮೊಟಕುಗೊಳಿಸಿದ್ದರು. ಈಗ ಮತ್ತೆ ಮುಖ್ಯಮಂತ್ರಿಗಳು ಚಿಕಿತ್ಸೆಗಾಗಿ ಬಂದಿದ್ದಾರೆ. ಯಡಿಯೂರಪ್ಪನವರು ಹಿರಿಯರು, ಮುಖ್ಯಮಂತ್ರಿ ಆಗಿದ್ದವರು. ಮುಖ್ಯಮಂತ್ರಿ ಆದವರು ಕೆಲವೊಮ್ಮೆ ತಡರಾತ್ರಿಯಾದರೂ ಬ್ಯುಸಿ ಇರ್ತಾರೆ. ಹೀಗಿರುವಾಗ ಅವರ ದೈನಂದಿನ ಜೀವನ ಮತ್ತು ಆರೋಗ್ಯವೂ ಮುಖ್ಯ ಎಂದು ಹೇಳಿದರು. ಹಾಗಾದರೆ ಆಯುರ್ವೇದ ಚಿಕಿತ್ಸೆ ಪಡೆಯುವುದೂ ಮೋಜಾ? ಎಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
5 ದಿನ ಕಾಪುವಿನಲ್ಲಿ ಕುಮಾರಸ್ವಾಮಿಗೆ ಆಯುರ್ವೇದ ಚಿಕಿತ್ಸೆ
ಅಧಿಕಾರಿಗಳ ಜೊತೆ ಸಂಪರ್ಕ ಇಟ್ಟುಕೊಂಡು ಸಮಸ್ಯೆ ಆಗದಂತೆ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ. ಬಿಜೆಪಿಯವರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಹೀಗಾಗಿ ಅಧಿಕಾರಿಗಳ ಸಭೆ ಕರೆಯುವುದಕ್ಕೂ ನೀತಿ ಸಂಹಿತೆ ಅಡ್ಡಿ ಇದೆ. ಹೀಗಿದ್ದರೂ ನಮ್ಮ ಇತಿಮಿತಿಯಲ್ಲಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇವೆ ಎಂದು ಸಾ.ರಾ.ಮಹೇಶ್ ಹೇಳಿದರು.